ಭದ್ರಾವತಿ: ನಗರದ ಕೇರಳ ಸಮಾಜಂ ವತಿಯಿಂದ ಬಿಎಚ್ ರಸ್ತೆಯ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಅ.13 ರಂದು ಭಾನುವಾರ ವೈಭವದ ಓಣಂ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ. ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾರಂಭವನ್ನು ಟಿಂಬರ್ ಮರ್ಚೆಂಟ್ ಕೆ. ಇಬ್ರಾಹಿಂ ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸುವರು. ಶಾಸಕ ಬಿ.ಕೆ. ಸಂಗಮೇಶ್ವರ್, ಎಪಿಎಂಸಿ ನಿರ್ದೇಶಕ ಡಾ.ಎಚ್. ನಾಗೇಶ್, ಕೇರಳದ ನಿವೃತ್ತ ಐಪಿಎಸ್ ಅಧಿಕಾರಿ ಜಿ.ಎಂ. ಐಯಾತ್, ರಾಜ್ಯ ಮಳೆಯಾಳಿ ಮಿಷನ್ ಅಧ್ಯಕ್ಷ ಕೆ. ದಾಮೋಧರನ್, ಚಿತ್ರ ನಿರ್ಮಾಪಕ ಡಿ. ರವಿಕುಮಾರ್ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಳ್ಳುವ ಸಮಾರಂಭದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಗಂಗಾಧರ (ಹೈರಿ) ವಹಿಸುವರು.
ಇದರ ಅಂಗವಾಗಿ ಅ.6 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ನ್ಯೂಟೌನ್ ಸಿಲ್ವರ್ ಜ್ಯೂಬಿಲಿ ಕ್ರೀಡಾಂಗಣದಲ್ಲಿ ಓಣಂ ಹಬ್ಬದ ಅಂಗವಾಗಿ ವಿಶೇಷ ಹೂವಿನ ರಂಗೋಲಿ ಸ್ಪರ್ಧೆ ಮತ್ತು ವಿವಿಧ ಕ್ರೀಡಾಸ್ಪರ್ಧೆಗಳನ್ನು ಮಲೆಯಾಳಿ ಕುಲಬಾಂಧವರಿಗಾಗಿ ಆಯೋಜಿಸಲಾಗಿದೆ. ಎರಡು ದಿನಗಳ ಕಾರ್ಯಕ್ರಮದಲ್ಲಿ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)

















