ಭದ್ರಾವತಿ: ಸ್ವಚ್ಚತೆ ಇಲ್ಲದೆ, ಅದೆಷ್ಟೋ ದಿನಗಳಿಂದ ಚೀಟಿಗಳ ರಾಶಿ ಬಿದ್ದಿರುವ, ರಾತ್ರಿ ಹೊತ್ತು ಕೌಂಟರ್ ಒಳಗೆ ವಿದ್ಯುತ್ ಇಲ್ಲದೆ ಸ್ಮಶಾನ ಮೌನ ಕಾಣುವ, ಹಣ ಪಡೆಯಲು ಬಂದ ಗ್ರಾಹಕರಿಗೆ ನಿರಾಶೆ ಹಾಗು ಕೆಲವೊಮ್ಮೆ ಎಟಿಎಂ ಕಾರ್ಡುದಾರರಿಗೆ ಹಣ ಬರದೆ ಚೀಟಿಯಲ್ಲಿ ಕಟಾವು ಆಗಿ ಭೀತಿ ಹುಟ್ಟಿಸುವ ಎಟಿಎಂ ನೋಡಬೇಕೆ….? ನೋಡುವುದಿದ್ದರೆ ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ದಿಕ್ಕಿಲ್ಲದಿರುವ ಐಓಬಿ ಎಟಿಎಂಗೆ ಬನ್ನಿ……
ನಗರದ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಆಡಳಿತವು ಜನರ ಒತ್ತಡಕ್ಕೆ ಮಣಿದು, ತಾಲೂಕಿನಲ್ಲಿ ಏಕೈಕ ಎಟಿಎಂ ಕೌಂಟರ್ ಅನ್ನು ತೆರೆದಿದೆ. ಸದಾ ಕಾಲ ಜನನಿಬಿಡ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಎಟಿಎಂ ತೆರೆದರೆ ಪ್ರತಿನಿತ್ಯ ಹತ್ತಾರು ರೈಲುಗಾಡಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮತ್ತು ತರಕಾರಿ, ಹಣ್ಣು-ಹಂಪಲು ಹಾಗೂ ವರ್ತಕರಿಗೆ ಮತ್ತಿತರೆ ವ್ಯಾಪಾರಸ್ಥರಿಗೆ ಅನುಕೂಲ ಆಗಬಹುದೆಂದು ಊಹಿಸಿ ಎಟಿಎಂ ಕೌಂಟರನ್ನು ತೆರೆದಿದೆ. ಆದರೆ ಕೌಂಟರಿಗೆ ಭದ್ರತಾ ವ್ಯವಸ್ಥೆ ಕಾವಲುಗಾರ ನೇಮಕಗೊಂಡಿಲ್ಲ. ಸ್ವಚ್ಚತೆಗೆ ಯಾರನ್ನು ನೇಮಿಸಿಲ್ಲ. ಎಟಿಎಂ ಒಳಭಾಗದಲ್ಲಿ ವಿದ್ಯುತ್ ದೀಪಗಳಿಲ್ಲದೆ ಸ್ಮಶಾನ ಮೌನ ಕಾಡುತ್ತಿದೆ.
ಇನ್ನು ಎಟಿಎಂ ಕಾರ್ಡುಗಳಿಂದ ಹಣ ಪಡೆಯಲು ಬಂದ ಗ್ರಾಹಕರಿಗೆ ಸದಾಕಾಲ ಹಣವಿಲ್ಲ ಅಥವಾ ಯಂತ್ರ ಚಾಲನೆ ಇಲ್ಲ ಎಂಬಿತ್ಯಾದಿ ಸುದ್ದಿಗಳೆ ಕೇಳಿ ಬರುತ್ತಿದೆ. ಕೆಲವೊಮ್ಮೆ ಕಾರ್ಡು ಹಾಕಿದಾಗ ಹಣ ಕಟಾವು ಆದ ಬಗ್ಗೆ ಚೀಟಿ ಹೊರ ಬರುತ್ತದೆಯಾದರೂ ಹಣ ಬರುವುದಿಲ್ಲ. ಇದರಿಂದ ರೈಲು ಗಾಡಿಗಳಿಗೆ ತೆರಳುವ ಪ್ರಯಾಣಿಕರು ಹೌಹಾರಿ ಆತಂಕಕ್ಕೊಳಗಾಗುತ್ತಿದ್ದಾರೆ. ದೂರು ನೀಡಲು ಸಹ ಸಮಯ ಅವಕಾಶವಿಲ್ಲದೆ ತಲೆಮೇಲೆ ಕೈಹೊತ್ತು ಮೊಮ್ಮಲ ಮರುಗುತ್ತಾ ಹೋಗುತ್ತಿರುವ ಸುದ್ದಿಗಳೆ ಸರ್ವೆ ಸಾಮಾನ್ಯವಾಗಿ ಕೇಳಿ ಬರುತ್ತಿದೆ. ಗ್ರಾಹಕರು ಭಯ ಭೀತಿಯಿಂದ ಕೌಂಟರ್ ಒಳ ಹೊಕ್ಕು ಹೊರ ಬಂದು ಶಪಿಸುವಂತಾಗಿದೆ. ಹಣ ಸಿಗದ ಗ್ರಾಹಕರು ಎಟಿಎಂ ಅಕ್ಕಪಕ್ಕದ ಅಂಗಡಿಗಳವರಿಗೆ ಹಣ ಬರುತ್ತಿಲ್ಲ, ಕಾರಣವೇನು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾ ವ್ಯಾಪಾರ ಮಾಡುವುದಕ್ಕೂ ಬಿಡದೆ ತೊಂದರೆ ನೀಡುತ್ತಾ ಕಿರಿ ಕಿರಿ ಹೆಚ್ಚಾಗಿದೆ.

ಬ್ಯಾಂಕಿನಲ್ಲಿ ಹೊಸದಾಗಿ ಪಡೆದ ಎಟಿಎಂ ಕಾರ್ಡುದಾರರು ಇರುವ ಒಂದೇ ಒಂದು ಕೌಂಟರಿಗೆ ತಂದು ಚಾಲನೆ ನೀಡಲು ಬಂದಾಗ ಅದೆಷ್ಟೋ ಮಂದಿಗೆ ಚಾಲನೆ ಆಗದೆ ನಿರಾಶೆಗೊಂಡಿದ್ದಾರೆ. ಸದಾಕಾಲ ನೆಟ್ವರ್ಕ್ ಪ್ರಾಬ್ಲಂ ಎಂಬಿತ್ಯಾದಿ ಸಬೂಬು ಬರುತ್ತಿದೆ. ಇದರಿಂದ ಬೇಸತ್ತು ಬ್ಯಾಂಕಿಗೆ ತೆರಳಿ ಎಟಿಎಂ ಕಾರ್ಡ್ ಆಕ್ಟಿವೇಟ್ ಮಾಡಿಕೊಡಿ ಎಂದು ದಂಬಾಲು ಬೀಳಬೇಕಾಗಿದೆ. ಆದರೆ ಬ್ಯಾಂಕಿನಲ್ಲಿ ಕನ್ನಡ ಮಾತನಾಡುವವರೆ ಇಲ್ಲದೆ ಗ್ರಾಹಕರಿಗೆ ಮತ್ತೊಂದು ಕಿರಿ ಕಿರಿ ಹೆಚ್ಚಾಗಿದೆ. ಅಲ್ಲದೆ ಕಾರ್ಡ್ ಆಕ್ಟಿವೇಟ್ ಮಾಡಿಕೊಡಲು ಕೌಂಟರ್ಗೆ ಬರಲು ಸಿಬ್ಬಂದಿಗಳಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಳೆದ ವರ್ಷ ಎಟಿಎಂ ಮುಂಭಾಗದ ಚರಂಡಿಯಿಂದ ನೀರು ಹಾವೊಂದು ಎಟಿಎಂ ಒಳಭಾಗದಲ್ಲಿ ತಿಂಗಳುಗಟ್ಟಲೆ ಒಳಹೊಕ್ಕಿತ್ತು. ಇದರಿಂದಲೂ ಸಹ ಗ್ರಾಹಕರು ಎಟಿಎಂಗೆ ಹೋಗುವುದನ್ನು ಬಿಟ್ಟಿದ್ದಾರೆ. ಆಗಲೂ ಸಹ ಬ್ಯಾಂಕ್ ಅಧಿಕಾರಿಗಳು ಇಣುಕಿ ನೋಡಲಿಲ್ಲ. ಪ್ರತಿನಿತ್ಯ ರಾತ್ರಿ ಎಟಿಎಂ ಹೊರಭಾಗದಲ್ಲಿ ವಾಚ್ಮನ್ಗಳಂತೆ ಭಿಕ್ಷುಕರು ಎಟಿಎಂಗೆ ಅಡ್ಡಲಾಗಿ ಮಲಗಿರುತ್ತಾರೆ. ಅಕ್ಕಪಕ್ಕದವರು ಓಡಿಸಿದರು ಪ್ರಯೋಜನವಾಗುತ್ತಿಲ್ಲ. ಅದ್ದರಿಂದ ದಿಕ್ಕಿಲ್ಲದೆ ಈ ಎಟಿಎಂ ಕೌಂಟರಿಗೆ ಕಾಯಕಲ್ಪ ಬೇಕಾಗಿದೆ. ಪ್ರತಿನಿತ್ಯ ಸಂಚರಿಸುವ ನೂರಾರು ಪ್ರಯಾಣಿಕರಿಗೆ ಅನುಕೂಲ ಸಿಂಧುವಾಗಬೇಕಿದೆ. ಜೊತೆಗೆ ಕೌಂಟರಿಗೆ ಕಾವಲುಗಾರ, ಸ್ವಚ್ಚತೆ, ದುರಸ್ಥಿ ಇಲ್ಲದ ಯಂತ್ರ ಬೇಕಾಗಿದೆ.
ಭಿಕ್ಷುಕರ ಕೇಂದ್ರವಾಗಿರುವ ಎಟಿಎಂ

ಐಓಬಿ ಬ್ಯಾಂಕ್ ತೆರೆದಿರುವ ಎಟಿಎಂ ಕೌಂಟರ್ ಭಿಕ್ಷುಕರ ಕೇಂದ್ರವಾಗಿದೆ. ನಾಯಿಗಳ ಖಾರಸ್ಥಾನವಾಗಿದೆ. ಗ್ರಾಹಕರಿಗೆ ಯಂತ್ರದಿಂದ ಹಣ ಬರುತ್ತಿಲ್ಲ. ಸದಾಕಾಲ ವಿದ್ಯುತ್ ಇರುವುದಿಲ್ಲ. ಇದಕ್ಕೆ ದಿಕ್ಕು ದಿವಾಳಿ ಎಂಬುದಿಲ್ಲ. ಬ್ಯಾಂಕ್ ಅಧಿಕಾರಿಗಳು ನಮಗೆ ಸಂಬಂಧವಿಲ್ಲದವರಂತೆ ವರ್ತಿಸುತ್ತಾರೆ. ಸ್ವಚ್ಚತೆಗೂ ಯಾರನ್ನು ನೇಮಕ ಮಾಡಿಲ್ಲ. ಸದಾಕಾಲ ಕಡ್ಡಿ ಕಸ ಮತ್ತು ಕಾಗದ ಚೂರುಗಳು ಬಿದ್ದಿವೆ. ಈ ಎಟಿಎಂ ಅಸಹ್ಯ ಹುಟ್ಟಿಸಿದೆ. ಸರಿಯಾಗಿ ನಿರ್ವಹಣೆ ಮಾಡಿದ್ದಲ್ಲಿ ಬ್ಯಾಂಕಿನ ಏಕೈಕ ಎಟಿಎಂ ಕೌಂಟರಿನಿಂದ ನೂರಾರು ಮಂದಿ ಪ್ರಯಾಣಿಕರಿಗೆ ಮತ್ತು ವರ್ತಕರಿಗೆ ಅನುಕೂಲವಾಗಲಿದೆ ಎಂದು ಎಟಿಎಂ ಪಕ್ಕದ ವ್ಯಾಪಾರಿ ಹಾಗು ತಾಲೂಕು ವರ್ತಕರ ಸಂಘದ ಅಧ್ಯಕ್ಷ ಎಚ್.ಎಸ್. ಗುರುರಾಜರಾವ್ ಹೇಳಿದರು.
ದಿಕ್ಕಿಲ್ಲದ ಎಟಿಎಂ ಕೌಂಟರಿನಿಂದ ವ್ಯಾಪಾರಕ್ಕೆ ಅಡಚಣೆ
ದಿಕ್ಕಿಲ್ಲದ ಮತ್ತು ಸದಾಕಾಲ ದೂರುಗಳನ್ನೇ ಬೆಟ್ಟವಾಗಿಸಿಕೊಂಡಿರುವ ಈ ಐಓಬಿ ಎಟಿಎಂ ಕೌಂಟರಿನಿಂದ ನಮ್ಮ ವ್ಯಾಪಾರಕ್ಕೆ ತುಂಬಾ ಅಡಚಣೆ ಉಂಟಾಗುತ್ತಿದೆ. ಎಟಿಎಂಗೆ ಬಂದ ಗ್ರಾಹಕರು ಯಂತ್ರ ಚಾಲನೆಯಲ್ಲಿಲ್ಲ, ಹಣವಿಲ್ಲ, ಹಣ ಬಂದಿಲ್ಲ, ಕಠಾವು ಆದ ಚೀಟಿ ಬಂದಿದೆ. ವಿದ್ಯುತ್ ಇಲ್ಲ. ಎಟಿಎಂ ಒಳಭಾಗಕ್ಕೆ ಹೋಗುವುದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುವವರೆ ಹೆಚ್ಚಾಗಿದ್ದಾರೆ. ಇದರಿಂದ ನಮ್ಮ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದೆ. ಎಟಿಎಂ ಒಳಭಾಗದಲ್ಲಿ ಸ್ವಚ್ಚತೆ ಇಲ್ಲ. ದೂಳು ತುಂಬಿ ತುಳುಕುತ್ತಿದೆ.

ಇನ್ನು ಹಣ ಪಡೆಯಲು ಹತ್ತಾರು ಬಾರಿ ಪ್ರಯತ್ನಿಸಿದರೂ ಹಣ ಬಂದಿಲ್ಲ ಎಂಬ ದೂರುಗಳು ಹೇರಳವಾಗಿದೆ. ಪ್ರಯಾಣಿಕರು, ಗ್ರಾಹಕರು ಈ ಎಟಿಎಂನಿಂದ ಗಾಬರಿಗೊಳಗಾಗುವರೆ ಹೆಚ್ಚಾಗಿದ್ದಾರೆ. ಬ್ಯಾಂಕಿನಲ್ಲಿ ದೂರು ನೀಡಲು ಹೋದರೆ ಕನ್ನಡ ಭಾಷೆ ಮಾತನಾಡುವ ಸಿಬ್ಬಂದಿಗಳಿಲ್ಲದೆ ಉತ್ತರ ಭಾರತದ ಹಿಂದಿ ಭಾಷಿಕರಿಂದ ತೊಂದರೆಗೊಳಗಾಗುತ್ತಿದೆ. ಅನಕ್ಷರಸ್ಥರಿಗೆ ಮತ್ತು ಮಧ್ಯಮ ಹಾಗು ಕೆಳ ವರ್ಗದವರಿಗೆ ಬ್ಯಾಂಕಿನ ಅಧಿಕಾರಿಗಳಿಂದ ನ್ಯಾಯ ಸಿಗುತ್ತಿಲ್ಲ ಎಂದು ಕೌಂಟರ್ ಪಕ್ಕದ ಕನ್ನಿಕಾ ಸ್ಟೋರ್ಸ್ ಮಾಲೀಕ ಜಿ. ಶಿವಕುಮಾರ್ ಪತ್ರಿಕೆಗೆ ತಿಳಿಸಿದರು.
ಸ್ಪಷ್ಟನೆ ನೀಡಲು ಬ್ಯಾಂಕ್ ಮ್ಯಾನೇಜರ್ ನಿರಾಕರಣೆ
ದಿಕ್ಕಿಲ್ಲದ ಮತ್ತು ರಕ್ಷಣಾತ್ಮಕ ವ್ಯವಸ್ಥೆ ಇಲ್ಲದ ತಾಲೂಕಿನ ಏಕೈಕ ರೈಲ್ವೇ ಸ್ಟೇಷನ್ ರಸ್ತೆಯಲ್ಲಿರುವ ಎಟಿಎಂ ಕೌಂಟರ್ ಅವ್ಯವಸ್ಥೆ ಕುರಿತು ಮಾಹಿತಿಗಾಗಿ ಪೋನಾಯಿಸಿದಾಗ ಮ್ಯಾನೇಜರ್ ಶೈಲೇಂದ್ರ ಸಿಂಗ್ ಮಾತನಾಡಿ, ಈ ಎಟಿಎಂ ನಿರ್ವಹಣೆಯನ್ನು ಏಜನ್ಸಿ ಕಂಪನಿಗೆ ನೀಡಲಾಗಿದೆ. ಅದರ ಸುಸ್ಥಿತಿಯನ್ನು ಅವರೆ ನೋಡಿಕೊಳ್ಳಬೇಕು. ಅಷ್ಟು ಮಾತ್ರ ಹೇಳುತ್ತೇನೆ. ಬೇರೇನು ಪೋನಿನಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಜಾರಿಕೊಂಡು ಸ್ಪಷ್ಟನೆ ನೀಡಲು ನಿರಾಕರಿಸಿ ಸಂಬಂಧವಿಲ್ಲದವರಂತೆ ನಡೆದುಕೊಂಡರು.
ವಿಶೇಷ ವರದಿ: ಆರ್.ವಿ. ಕೃಷ್ಣ
ಭದ್ರಾವತಿ
Why The Hell Did You Make Manya Surve a Hero?: Sanjay Gupta Opens Up on Underworld Threats
Kalpa Media House | Mumbai | From revolutionising Bollywood’s gangster genre with cult blockbusters like Kaante, Shootout at Lokhandwala, Shootout...
Read moreDetails















