ಭದ್ರಾವತಿ: ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಅಡ್ಡಲಾಗಿ ನಿರ್ಮಿಸಿರುವ ಸರ್ಕಾರಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಹೊಸ ಸೇತುವೆ ಈ ಬಾರಿಯ ಮಳೆಗೆ ಮತ್ತೆ ಮುಳುಗಡೆಯಾಗಿದೆ.
ನಿನ್ನೆಯಿಂದಲೇ ಹೆಚ್ಚು ನೀರನ್ನು ಭದ್ರಾ ಅಣೆಕಟ್ಟೆಯಿಂದ ನೀರು ಹೊರಬಿಡಲಾಗುತ್ತಿದ್ದು, ನಿನ್ನೆ ರಾತ್ರಿಯಿಂದ ಭಾರೀ ಪ್ರಮಾಣದಲ್ಲಿ ಹೊರ ಹರಿವನ್ನು ಹೆಚ್ಚಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಭದ್ರಾ ನದಿ ನೀರು ನಿನ್ನೆಯಿಂದಲೇ ಸೇತುವೆ ಮಟ್ಟಕ್ಕೆ ತಲುಪಿತ್ತು. ನಿನ್ನೆ ರಾತ್ರಿಯಿಂದ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಸೇತುವೆ ಬಹುತೇಕ ಮುಳುಗಡೆಯಾಗಿದ್ದು, ಈ ಭಾಗದಲ್ಲಿ ಸಂಚಾರ ಸ್ಥಗಿತಗೊಂಡಿದೆ. ಸೇತುವೆ ಮೇಲಿನ ಪ್ಯಾರಪಟ್ ಮುಳುಗಲು ಇನ್ನು ಕೆಲವೇ ಇಂಚುಗಳು ಬಾಕಿಯಿದ್ದು, ಇದೂ ಮುಳುಗಡೆಯಾದರೆ, ಇಲ್ಲೊಂದು ಸೇತುವೆ ಇದೆ ಎನ್ನುವುದೇ ತಿಳಿಯದಷ್ಟು ನೀರಿನ ಹರಿವಿದೆ.
ಇನ್ನು ಹೊಸ ಸೇತುವೆ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಹಳೆ ಸೇತುವೆ ಹಾಗೂ ಹಳೇ ನಗರ ಭಾಗದಲ್ಲಿ ಸಂಚಾರ ದಟ್ಟಣೆ ಅಧಿಕವಾಗಿ ಟ್ರಾಫಿಕ್ ಜಾಮ್ ಆಗುತ್ತಿದೆ. ಅಲ್ಲದೇ, ಸೇತುವೆ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಇದನ್ನು ನೋಡಲು ನೂರಾರು ಮಂದಿ ತಂಡೋಪತಂಡವಾಗಿ ಆಗಮಿಸುತ್ತಲೇ ಇದ್ದಾರೆ.
ಇಂದು ಬೆಳಗಿನ ಮಾಹಿತಿಯಂತೆ ಭದ್ರಾ ಅಣೆಕಟ್ಟೆಗೆ 56395 ಕ್ಯೂಸೆಕ್ಸ್ ಒಳಹರಿವಿದ್ದು, 51002 ಕ್ಯೂಸೆಕ್ಸ್ ನಷ್ಟು ಭಾರೀ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ.
ಮತ್ತೆ ಭಾರೀ ಪ್ರಮಾಣದಲ್ಲಿ ನೀರು ಹರಿಸುವ ಎಚ್ಚರಿಕೆ
ಇನ್ನು ನದಿ ಹಿನ್ನೀರಿನ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಳ ಹರಿವು ನಿರಂತರವಾಗಿ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಭಾರೀ ಪ್ರಮಾಣದ ನೀರನ್ನು ಹೊರಬಿಡುವ ಸಾಧ್ಯತೆಗಳಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಭದ್ರಾ ಡ್ಯಾಂ ಅಥಾರಿಟಿ ಸೂಚನೆ ನೀಡಿದೆ.
Discussion about this post