ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿರುವ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅಖಿಲ ಭಾರತ ಮಾಧ್ವ ಮಹಾ ಮಂಡಳಿ ಆಗ್ರಹಿಸಿದೆ.
ಈ ಕುರಿತಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ತಹಶೀಲ್ದಾರ್’ಗೆ ಮನವಿ ಸಲ್ಲಿಸಿ ಮಾತನಾಡಿದ ಮಂಡಳಿಯ ಪ್ರಮುಖವರು, ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಆಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣದ ಹೋರಾಟದಲ್ಲಿ ಮುಂಚೂಣಿಗೆ ಬಂದು ಸನಾತನ ಹಿಂದೂ ಧರ್ಮದ ಏಳಿಗೆಯ ಕಾರ್ಯವನ್ನು ಕೈಗೊಂಡಿದ್ದರು ಎಂದರು.
ಸಮಾಜದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಲು ದಲಿತ ಕೇರಿಗಳಲ್ಲಿ ಸಂಚರಿಸಿ ಧರ್ಮ ಜಾಗೃತಿ ಉಂಟು ಮಾಡುವ ಜೊತೆಗೆ ಅಸ್ಪೃಶ್ಯರು ಸಹ ಮುಖ್ಯವಾಹಿನಿಗೆ ಬರಲು ಶ್ರಮಿಸಿದ್ದ ಸಂತ ಶ್ರೇಷ್ಠರಾಗಿದ್ದಾರೆ ಎಂದರು.
ಇಂತಹ ಮಹಾನ್ ಶ್ರೀಗಳ ಕುರಿತಾಗಿ ಹಂಸಲೇಖ ಅವರು ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ಹೇಳಿಕೆಯಿಂದ ಮಾಧ್ವ ಹಾಗೂ ಬ್ರಾಹ್ಮಣ ಸಮಾಜ ಮಾತ್ರವಲ್ಲದೇ ಶ್ರೀಗಳ ಭಕ್ತ ವರ್ಗದ ಭಾವನೆಗೆ ನೋವು ಉಂಟುಮಾಡಿದೆ. ಅಲ್ಲದೇ ಇತ್ತೀಚೆಗೆ ಕಿಡಿಗೇಡಿಯೋರ್ವ ಶ್ರೀಪಾದಂಗಳವರ ಭಾವಚಿತ್ರವನ್ನು ಪಾದರಕ್ಷೆಯಿಂದ ತುಳಿದು ಅಸಂಖ್ಯಾತ ಭಕ್ತರ ಭಾವನೆಗಳಿಗೆ ದುಃಖವನ್ನುಂಟು ಮಾಡಿದ್ದಾನೆ. ಈ ಕಿಡಿಗೇಡಿ ವಿರುದ್ಧ ವಿರುದ್ಧ ಹಾಗೂ ಅವಹೇಳನಕಾರಿಯಾಗಿ ಮಾತನಾಡಿರುವ ಹಂಸಲೇಖರವರ ವಿರುದ್ದ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ಮಾಧ್ವ ಮಹಾ ಮಂಡಳಿ, ಶ್ರೀ ಸಂಕರ್ಷಣ ಧರ್ಮ ಸಂಸ್ಥೆ, ಶ್ರೀ ಸತ್ಯಪ್ರಮೋದ ಸೇವಾ ಸಮಿತಿ, ಶ್ರೀನಿವಾಸ ಕಲ್ಯಾಣ ಸಮಿತಿ, ಶ್ರೀ ಹರಿದಾಸ ಭಜನಾ ಮಂಡಳಿ, ಕರಾವಳಿ ವಿಪ್ರ ಬಳಗ, ಶ್ರೀ ಗುರುರಾಜ ಸೇವಾ ಸಮಿತಿ, ಜ್ಞಾನವಾಹಿನಿ ಭಜನಾ ಮಂಡಳಿ, ಹರಿಪ್ರಿಯ ಭಜನಾ ಮಂಡಳಿ ಮತ್ತು ವಿಜಯೀಂದ್ರ ಭಕ್ತ ಮಂಡಳಿ ಪ್ರಮುಖರು ಇದ್ದರು.
ಈ ಸಂದರ್ಭದಲ್ಲಿ ವಿ. ಜಯತೀರ್ಥ, ನರಸಿಂಹಚಾರ್, ಗೋಪಾಲಚಾರ್, ಸಿ. ರಾಘವೇಂದ್ರ, ಜಿ. ರಮಾಕಾಂತ್, ಕೆ.ಆರ್. ವೆಂಕಟೇಶ್ ರಾವ್, ಎನ್. ವಂದನಾ, ಪವನ್ ಕುಮಾರ್ ಉಡುಪ, ನಿರಂಜನಾಚಾರ್, ವಾದಿರಾಜ್, ಜಯತೀರ್ಥ ಸೇರಿದಂತೆ ಇನ್ನಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post