ಭದ್ರಾವತಿ: ಅಪ್ಪರ್ ಹುತ್ತಾದ ದೊಣಬಘಟ್ಟ ರಸ್ತೆಯ ಹಳೇ ಕವಲಗುಂದಿಯ ತಗ್ಗು ಪ್ರದೇಶದ ಪ್ರವಾಹ ಪೀಡಿತ ಸುಮಾರು 30 ಕುಟುಂಬಗಳಿಗೆ ಶಾಶ್ವತ ಪರಿಹಾರ ಪುನರ್ ವಸತಿ ಕಲ್ಪಿಸಿಕೊಡಬೇಕೆಂದು ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಚಾರಟಬಲ್ ಟ್ರಸ್ಟ್ ಅಧ್ಯಕ್ಷ ಹಾಗು ನಗರಸಭೆಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಒತ್ತಾಯಿಸಿದ್ದಾರೆ.
ಅವರು ನಗರಸಭೆಯಲ್ಲಿ ಪ್ರವಾಹ ಪೀಡಿತ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಆಡಳಿತಾಧಿಕಾರಿ ಹಾಗು ಉಪವಿಭಾಗಾಧಿಕಾರಿ ಟಿ.ವಿ. ಪ್ರಕಾಶ್ ರವರಿಗೆ ಮನವಿ ಅರ್ಪಿಸಿದರು.
ನಗರಸಭೆ ವ್ಯಾಪ್ತಿಯ 2 ನೇ ವಾರ್ಡಿಗೆ ಸೇರಿದ ಭದ್ರಾ ನದಿಯ ಹಳೇ ಕವಲುಗುಂದಿಯ ತಗ್ಗು ಪ್ರದೇಶದಲ್ಲಿ ಸುಮಾರು 35 ವರ್ಷಗಳಿಂದ ವಾಸಿಸುತ್ತಿರುವ ಕುಟುಂಬಗಳು ಕಷ್ಟಸಾಧ್ಯ ಜೀವನ ನಡೆಸುತ್ತಿದ್ದಾರೆ. ಪ್ರತಿ ವರ್ಷ ಸುರಿವ ಭಾರೀ ಪ್ರವಾಹಕ್ಕೆ ಇಲ್ಲಿನ ನಿವಾಸಿಗಳು ತುತ್ತಾಗುತ್ತಾ ನೋವು ಅನುಭವಿಸುತ್ತಿದ್ದಾರೆ. ನದಿಯು ಉಕ್ಕಿ ಹರಿಯುವ ಸಂದರ್ಭದಲ್ಲಿ ಬೆಲೆ ಬಾಳುವ ವಸ್ತುಗಳು, ದವಸ ಧಾನ್ಯಗಳು ನೀರಿನ ಪಾಲಾಗುತ್ತಿವೆ. ನಗರಸಭೆ ಮತ್ತು ತಾಲೂಕು ಆಡಳಿತ ಪ್ರವಾಹ ಪೀಡಿತರಿಗೆ ಗಂಜಿ ಕೇಂದ್ರಗಳಿಗೆ ಕರೆದೊಯ್ದು ಸಹಾಯ ನೀಡುತ್ತಿರುವುದು ಸಾಮಾನ್ಯವಾಗಿದೆ. ಈ ಕುಟುಂಬಗಳಿಗೆ ಶಾಶ್ವತ ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಿಕೊಡಬೇಕಾಗಿದೆ.
ಈ ಹಿಂದೆ ಪೀಡಿತರಿಗೆ ಬೇರೆಡೆಗೆ ಸ್ಥಳಾಂತರ ಮಾಡಲು ನಗರಸಭೆ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಆದರೆ ಕಾಣದ ಕೈಗಳ ಚಿತಾವಣೆಯಿಂದ ಹಾಗು ಆ ಸ್ಥಳದಲ್ಲಿ ಬಹುಮಹಡಿ ಕಟ್ಟಡ ಕಟ್ಟಿಕೊಂಡಿರುವ ಸ್ಥಿತಿವಂತರಿಂದಾಗಿ ಪೀಡಿತರು ಬೇರೆಡೆ ಸ್ಥಳಾಂತರಗೊಳ್ಳಲು ಹಿಂದೇಟು ಹಾಕಿದ್ದರಿಂದ ನೆನೆಗುದಿಗೆ ಬಿದ್ದಿದೆ. ಅದ್ದರಿಂದ ಜಿಲ್ಲಾಡಳಿತ ಮತ್ತು ನಗರಸಭೆ ಆಡಳಿತಗಳು 30 ಗುಡಿಸಲು ವಾಸಿಗಳಿಗೆ ಜೇಡಿಕಟ್ಟೆ-ಹೊಸೂರಿನಲ್ಲಿ ಪುನರ್ ವಸತಿ ಕಲ್ಪಿಸಿ ಶಾಶ್ವತ ಪರಿಹಾರ ನೀಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಟಿ.ವಿ. ಪ್ರಕಾಶ್ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತ ಮನೋಹರ್ ರವರಿಗೆ ತಿಳಿಸಿದ ಮೇರೆಗೆ ಪೌರಾಯುಕ್ತರು ಸಮಜಾಯಿಸಿ ನೀಡಿ ಈ ತಗ್ಗು ಪ್ರದೇಶದ 30 ಫಲಾನುಭವಿಗಳನ್ನು ಗುರುತಿಸಲಾಗಿದೆ. ಆಶ್ರಯ ಸಮಿತಿಯಲ್ಲಿ ಪುನರ್ ವಸತಿ ಕಲ್ಪಿಸಲು ಅನುಮೋದನೆ ಪಡೆಯಲಾಗಿದೆ. ಈ ಕುಟುಂಬಗಳಿಗೆ ಜೇಡಿಕಟ್ಟೆ ಹೊಸೂರಿನ ಆಶ್ರಯ ನಿವೇಶನಗಳಲ್ಲಿ ಪುನರ್ ವಸತಿ ಕಲ್ಪಿಸಲು ನಿವೇಶನಗಳನ್ನು ಹಂಚಿಕೆ ಮಾಡಲು ಜಿಲ್ಲಾಧಿಕಾರಿಗಳಿಗೆ ಕಳೆದ ಜೂನ್ ತಿಂಗಳಲ್ಲಿ ಪಟ್ಟಿಯನ್ನು ಅನುಮೋದನೆಗೆ ಕಳುಹಿಸಿಕೊಡಲಾಗಿದೆ ಎಂದು ವಿವರಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post