ಭದ್ರಾವತಿ: ಇಲ್ಲಿನ ಬಿಎಚ್ ರಸ್ತೆಯ ಹಾಲಪ್ಪ ಸರ್ಕಲ್’ನಲ್ಲಿರುವ ಸೌತ್ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಇಂದು ಮುಂಜಾನೆ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಶಾಖೆ ಬಹುತೇಕ ಆಹುತಿಯಾಗಿದೆ.
ಬ್ಯಾಂಕ್ ಒಳಭಾಗದಲ್ಲಿ ಭಾರೀ ಬೆಂಕಿ ಹಾಗೂ ಹೊಗೆ ಕಾಣಿಸಿಕೊಂಡಿದ್ದು, ಎರಡು ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಬೆಂಕಿಯ ತೀವ್ರತೆಗೆ ನೂರಕ್ಕೂ ಹೆಚ್ಚು ಅಡಿ ಎತ್ತರದಲ್ಲಿ ಹೊಗೆಯಾಡುತ್ತಿದೆ.
ಬ್ಯಾಂಕ್ ಒಳಗಿನ ಕ್ಯಾಶ್ ಕೌಂಟರ್ ಬಳಿಯಿರುವ ಟ್ಯೂಬ್’ಲೈಟ್ ಬಳಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಪ್ರಿಂಟರ್’ಗೆ ಬೆಂಕಿ ತಾಕಿದೆ. ಈ ಬೆಂಕಿ ಕ್ಷಣಾರ್ಧದಲ್ಲಿ ಇಡಿಯ ಕಟ್ಟಡಕ್ಕೆ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದೆ ಎಂದು ಬ್ಯಾಂಕ್ ಸ್ವಚ್ಛತೆ ಕೆಲಸ ಮಾಡುವ ಪ್ರತ್ಯಕ್ಷದರ್ಶಿ ಮಹಿಳೆಯ ಹೇಳಿಕೆಯಿಂದ ತಿಳಿದುಬಂದಿದೆ.

ಬೆಂಕಿಯ ತೀವ್ರತೆಗೆ ಬ್ಯಾಂಕ್ ಕಂಪ್ಯೂಟರ್ ಉಪಕರಣಗಳು ಸುಟ್ಟು ಕರಕಲಾಗಿದೆ. ಆದರೆ, ಹಣ-ಒಡವೆ ಬಹುತೇಕ ಸುಟ್ಟುಹೋಗಿದೆ ಎಂದು ಹೇಳಲಾಗಿದ್ದು, ಇನ್ನೂ ಈ ಕುರಿತು ಖಚಿತಗೊಳ್ಳಬೇಕಿದೆ.
ಇನ್ನು, ಅಗ್ನಿ ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದಾರೆ.
















