ಭದ್ರಾವತಿ: ಪ್ರತಿಷ್ಠಿತ ವಿಐಎಸ್ಎಲ್ ಕಾರ್ಖಾನೆಯನ್ನು ಕೇಂದ್ರ ಸರಕಾರ ಖಾಸಗೀಕರಣ ಅಥವಾ ಮಾರಾಟ ಮಾಡಲು ಮುಂದಾದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಕ್ಷೇತ್ರಕ್ಕೆ ಪ್ರವೇಶ ಮಾಡದಂತೆ ನಿರ್ಬಂಧ ಮಾಡಬೇಕಾಗುತ್ತದೆ ಎಂದು ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ರಾಘವೇಂದ್ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿಐಎಸ್ಎಲ್ ಕಾರ್ಖಾನೆಯ ಖಾಸಗೀಕರಣ ಅಥವಾ ಮಾರಾಟ ಮಾಡಲು ಬಿಡದೆ ಅಭಿವೃದ್ಧಿ ಮಾಡುವುದಾಗಿ ಕಾರ್ಮಿಕರಿಗೆ ಪೊಳ್ಳು ಭರವಸೆ ನೀಡುವುದರೊಂದಿಗೆ ಮತ ಪಡೆದು ಅಧಿಕಾರ ಪಡೆಯತ್ತಾ ಬಂದಿರುತ್ತಾರೆ. ಆದರೆ ಇವರಿಬ್ಬರು ಕೊಟ್ಟ ಮಾತನ್ನು ಉಳಿಸಿಕೊಳ್ಳದಿರುವುದು ದುರ್ದೈವ ಎಂದು ಟೀಕಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕಾಗದ ಕಾರ್ಖಾನೆಗೆ ಅಗತ್ಯವಾಗಿದ್ದ ಬಂಡವಾಳವನ್ನು ಬ್ಯಾಂಕ್ ಶ್ಯೂರಿಟಿ ಮೂಲಕ ಒದಗಿಸಿದ್ದರೆ ಕಾರ್ಖಾನೆ ಉಳಿಯುತ್ತಿತ್ತು. ಆದರೆ ಅವರು ಕೇವಲ ಕಾರ್ಮಿಕರ ಮತ್ತು ಅವಲಂಭಿತರ ಮತಗಳಿಕೆ ಮೇಲೆ ಕಣ್ಣಿಟ್ಟರೆ ಹೊರತು ಕಾರ್ಮಿಕರಿಗಾಗಿ, ಕಾರ್ಖಾನೆ ಉಳಿಗೆ ಪ್ರಾಮಾಣಿಕತೆ ತೋರಿಸಲಿಲ್ಲ. ಅದರ ಪರಿಣಾಮ ಎಂಪಿಎಂ ಕಾರ್ಖಾನೆಯು ಮುಚ್ಚಲ್ಪಟ್ಟಿತು. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ. ರಾಜ್ಯದಿಂದ 26 ಸಂಸದರು ಆಯ್ಕೆ ಆಗಿದ್ದಾರೆ. ಆದರೆ ಇಲ್ಲಿನ ಕಾರ್ಖಾನೆಯ ಅಭಿವೃದ್ದಿಗೆ ಅಗತ್ಯವಾದ ಬಂಡವಾಳವನ್ನು ತರಿಸುವಲ್ಲಿ ವಿಫಲರಾಗಿದ್ದಾರೆ. ಕಾರ್ಖಾನೆ ಖಾಸಗೀಕರಣ ಆಗುತ್ತದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಆದರೆ ಮೇಲ್ನೋಟಕ್ಕೆ ಖಾಸಗೀಕರಣ ಮಾಡಲು ಬಿಡುವುದಿಲ್ಲ ಎನ್ನುತ್ತಿದ್ದಾರೆ. ಕ್ಷೇತ್ರದ ಜನತೆ ಹಾಕಿರುವ ಮತಗಳ ಕುರಿತು ಅವರಲ್ಲಿ ಕೃತಜ್ಞತೆ ಎನ್ನುವುದಿದ್ದರೆ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಬಿಡುವುದಿಲ್ಲ ಹಾಗೂ ಅಭಿವೃದ್ಧಿಗೆ ಕೇಂದ್ರ ಸರಕಾರದಿಂದ ಅಗತ್ಯವಾದ ಬಂಡವಾಳ ತೊಡಗಿಸುವಂತೆ ಮಾಡುತ್ತೇನೆ ಎಂದು ಮತದಾರರ ಮುಂದೆ ಹೇಳಲಿ ಎಂದರು.
ಎಂಪಿಎಂ ಮತ್ತು ವಿಐಎಸ್ಎಲ್ ಕಾರ್ಖಾನೆಗಳನ್ನು ಉಳಿಸಿದರೆ ನಾನು ರಾಜಕೀಯವಾಗಿ ಸದಾ ನಿಮ್ಮೊಂದಿಗಿರುತ್ತೇನೆ ಎಂದು ಯಡಿಯೂರಪ್ಪ ಮತ್ತು ಬಿ.ವೈ. ರಾಘವೇಂದ್ರ ಅವರಿಗೆ ಹೇಳುತ್ತಲೇ ಬಂದಿದ್ದೇನೆ. ಅವರಿಬ್ಬರಿಗೂ ಭದ್ರಾವತಿಯ ಜನರ ಮತಗಳು ಮಾತ್ರ ಬೇಕೇ ವಿನಾ ಕಾರ್ಮಿಕರ ತರಬೇಡವಾಗಿದೆ. ಆದರೂ ಮತದಾರರು ಅವರನ್ನೇ ಚುನಾಯಿಸುತ್ತಾ ಬಂದಿರುವುದು ಜನರ ಮೂರ್ಖತನವಾಗಿದೆ. ಕಾರ್ಖಾನೆಗಳು ಉಳಿದರೆ ಊರು, ಊರು ಉಳಿದರೆ ರಾಜಕಾರಣ, ವಿಐಎಸ್ಎಲ್ ಕಾರ್ಖಾನೆ ಉಳಿಸಲು ಎಲ್ಲರೂ ಒಂದಾಗಿ ಹೋರಾಟಕ್ಕೆ ಇಳಿಯುವ ಅಗತ್ಯವಿದೆ ಎಂದರು.
ಕಳೆದ ಲೋಕಸಭಾ ಚುನಾವಣೆ ವೇಳೆ ನೀವು ಮತ್ತು ಶಾಸಕ ಬಿ.ಕೆ. ಸಂಗಮೇಶ್ ದೋಸ್ತಿಗಳಾಗಿ ಕೈ-ಕೈ ಹಿಡಿದು ಒಂದಾಗಿದ್ದೀರಿ. ಈಗ ರಾಜ್ಯದಲ್ಲಿ ನಿಮ್ಮ ದೋಸ್ತಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಎಂಪಿಎಂ ಕಾರ್ಖಾನೆಯ ಮರು ಆರಂಭಕ್ಕೆ ಏಕೆ ಪ್ರಯತ್ನಿಸಬಾರದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ದೋಸ್ತಿ ಸರಕಾರದ ಅವಾಂತರಗಳು ಎಲ್ಲರಿಗೂ ತಿಳಿದಿದೆ. ಅಲ್ಲಿ ಏನೂ ಆಗುವುದಿಲ್ಲ. ಇನ್ನು ನಾನು ಮತ್ತು ಶಾಸಕ ಸಂಗಮೇಶ್ ಅವರ ಜೊತೆ ಕೈ ಜೋಡಿಸದೆ ಇದ್ದಿದ್ದರೆ ನಮ್ಮ ಅಭ್ಯರ್ಥಿಗೆ 15 ಸಾವಿರ ಮತಗಳು ಹೆಚ್ಚಾಗಿ ಬರುತ್ತಿದ್ದವು ಎಂದರು.
ತಾವು ಶಾಸಕನಾದರೆ ಎಂಪಿಎಂ ಕಾರ್ಖಾನೆಯನ್ನು ಉಳಿಸುತ್ತೇನೆ. ಕಾರ್ಮಿಕರಿಗೆ ವಾಸಿಸಲು ಮನೆಗಳನ್ನು ಕೊಡಿಸುತ್ತೇನೆ ಎಂದು ಹೇಳುತ್ತಿದ್ದರು. ಇದರಿಂದ ಕ್ಷೇತ್ರದ ಜನತೆ ಅವರನ್ನು ಶಾಸಕರನ್ನಾಗಿ ಮಾಡಿದ್ದಾರೆ. ಆದರೂ ಏನು ಮಾಡದೆ ಸುಮ್ಮನೇಕಿದ್ದಾರೆ ಎಂದು ಶಾಸಕ ಸಂಗಮೇಶ್ ಹೆಸರು ಪ್ರಸ್ತಾಪಿಸದೆ ಅಪ್ಪಾಜಿ ಹೇಳಿದರು.
ವಿಐಎಸ್ಎಲ್ ಕಾರ್ಖಾನೆ ಖಾಸಗೀಕರಣಗೊಳಿಸದಂತೆ ಮತ್ತು ಕೇಂದ್ರ ಸರ್ಕಾರ ಅಗತ್ಯವಾದ ಬಂಡವಾಳ ತೊಡಗಿಸುವಂತೆ ಒತ್ತಾಯಿಸಿ ಶೀಘ್ರದಲ್ಲಿ ಕ್ಷೇತ್ರದ ವಿವಿಧ ಸಂಘಟನೆಗಳ ಜೊತೆ ಚರ್ಚಿಸಿ ಭದ್ರಾವತಿ ಬಂದ್’ಗೆ ಕರೆ ನೀಡುವ ಮೂಲಕ ಹೋರಾಟದ ಮುಂದಿನ ರೂಪುರೇಷೆ ನಿರ್ಧರಿಸಲಾಗುವುದು. ಈ ಎಲ್ಲ ಹೋರಾಟಗಳಲ್ಲಿ ಕ್ಷೇತ್ರದ ಸಮಸ್ತ ನಾಗರಿಕರು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಹೋರಾಟದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಮಾಜಿ ನಗರಸಭಾಧ್ಯಕ್ಷೆ ಸುಧಾಮಣಿ, ವಿಶಾಲಾಕ್ಷಿ, ಸದಸ್ಯರಾದ ಬದ್ರಿ ನಾರಾಯಣ್, ರಾಜು, ಮುಖಂಡರಾದ ಜಿ.ಟಿ. ಶ್ರೀಧರ್, ಕರಿಯಪ್ಪ, ಸುಜಾತ, ರಾಮಕೃಷ್ಣ, ಫೀರ್ ಷರೀಫ್, ರಾಮಕೃಷ್ಣೇ ಗೌಡ ಮುಂತಾದವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post