ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಮೃತಪಟ್ಟರೆಂದು ಕುಟುಂಬಸ್ಥರು ಹಾಗೂ ನೆಂಟರಿಷ್ಟರೆಲ್ಲರೂ ಗೋಳಾಡುತ್ತಿದ್ದ ವೇಳೆ ಮಹಿಳೆಯೊಬ್ಬರು ಏಕಾಏಕಿ ಕಣ್ಣು ಬಿಟ್ಟು, ಎದ್ದು ಕುಳಿತ ಘಟನೆ ಗಾಂಧಿ ನಗರದಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಸಿವಿಲ್ ಕಾಂಟ್ರಾಕ್ಟರ್ ಸುಬ್ರಹ್ಮಣಿ ಎಂಬುವವರ ಪತ್ನಿ ಮೀನಾಕ್ಷಿ(52) ಎಂಬಾಕೆಯೇ ಮೃತಪಟ್ಟು ಪುನಃ ಬದುಕಿದ ಮಹಿಳೆ.
Also Read>> ಗಮನಿಸಿ! ಫೆ.26-27ರಂದು ಶಿವಮೊಗ್ಗದ ಈ ಮಾರ್ಗದಲ್ಲಿ ಸಂಚಾರ ಬದಲಾವಣೆ ಆದೇಶ
ನಡೆದಿದ್ದು ಏನು?
ಅನಾರೋಗ್ಯದ ಹಿನ್ನೆಲೆಯಲ್ಲಿ ಮೀನಾಕ್ಷಿ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾರೆಂದು ಆಸ್ಪತ್ರೆಯ ವೈದ್ಯರು ಸೋಮವಾರ ರಾತ್ರಿ ಧೃಢೀಕರಿಸಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಆಕೆಯ ಕುಟುಂಬದ ಸದಸ್ಯರು ಮಂಗಳವಾರ ಬೆಳಗ್ಗೆ ಭದ್ರಾವತಿಯ ಗಾಂಧಿನಗರದಲ್ಲಿರುವ ಅವರ ನಿವಾಸಕ್ಕೆ ಮೀನಾಕ್ಷಿ ಅವರ ದೇಹವನ್ನು ವಾಹನದಲ್ಲಿ ತಂದರು. ವಾಹನದಿಂದ ಇಳಿಸಿ ಮನೆಯೊಳಗೆ ತೆಗೆದುಕೊಂಡು ಹೋಗುವಾಗ ಬಾಗಿಲ ಬಳಿ ಮೀನಾಕ್ಷಿ ಏಕಾಏಕಿ ಕಣ್ಣು ತೆರೆದು ಉಸಿರಾಡಿದ್ದಾರೆ.
ಆ ವೇಳೆಗಾಗಲಿ ಆಕೆಯ ಸಾವಿನ ಸುದ್ಧಿ ಎಲ್ಲೆಡೆ ಹಬ್ಬಿದ ಕಾರಣ ನೆಂಟರು, ಪರಿಚಯಸ್ಥರು ಆ ಬಡಾವಣೆಯ ನಿವಾಸಿಗಳೆಲ್ಲರೂ ಅವರ ಮನೆ ಮುಂದೆ ಜಮಾಯಿಸಿದ್ದರು.
ಮೃತರಾದ ಮಹಿಳೆ ಬದುಕುಳಿದ ಈಘಟನೆ ಆಕೆಯ ಮನೆಯ ಸದಸ್ಯರಿಗೆ ಹಾಗೂ ಅಲ್ಲಿದ್ದ ಎಲ್ಲರಿಗೂ ಅಚ್ಚರಿ ಮತ್ತು ಸಂತಸವನ್ನು ಉಂಟುಮಾಡಿತು. ಮನೆ ಬಳಿ ನೆರೆದಿದ್ದ ನೂರಾರು ಮಂದಿ ಪುಷ್ಪ ಹಾರಗಳನ್ನು ಹಿಂದಕ್ಕೆ ತರುತ್ತಾ ಭಗವಂತ ಅವರಿಗೆ ಶತಾಯುಷ್ಯವನ್ನು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಅಲ್ಲಿಂದ ತೆರಳಿದರು.
ಘಟನೆ ಕುರಿತಂತೆ ಮಹಿಳೆಯ ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿದ್ದು, ಮೃತರಾದರು ಎಂದುಕೊಂಡಿದ್ದ ಮೀನಾಕ್ಷಿಯವರು ಬದುಕುಳಿದಿರುವುದು ಸಂತಸ ಮೂಡಿಸಿದೆ. ಅವರ ಪತಿ ಹಾಗೂ ಮಕ್ಕಳು ತಮಗೆ ಅತೀವವಾದ ಸಂತೋಷ ತರಿಸಿದೆ ಎಂದಿದ್ದಾರೆ.
ಏಕಾಏಕಿ ಆಕೆ ಉಸಿರಾಡುತ್ತಿದ್ದುದನ್ನು ಕಂಡು ಕೂಡಲೆ ಮನೆಯ ಬಳಿ ಇರುವ ಖಾಸಗಿ ನರ್ಸಿಂಗ್ ಹೋಂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಲಾಯಿತು. ವೈದ್ಯರು ಮತ್ತು ನರ್ಸ್ ಅವರುಗಳು ಆಕೆಯ ನಾಡಿ ಬಡಿತವನ್ನು ಪರಿಶೀಲಿಸಿ ಉಸಿರಾಟ ಮತ್ತು ನಾಡಿಬಡಿತ ಎಲ್ಲವೂ ಸಹಜವಾಗಿದೆ ಎಂದು ಖಚಿತ ಪಡಿಸಿದರು. ನಂತರ ಅವರನ್ನು ಶಿವಮೊಗ್ಗದ ಖಾಸಗಿ ಅಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಅವರು ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ.
ಪ್ರತಿ ವರ್ಷ ಮಹಾಶಿವರಾತ್ರಿ ಹೋಮ ಕರ್ತೃ
ಭದ್ರಾ ನದಿ ತೀರದಲ್ಲಿ ಪ್ರತಿವರ್ಷ ವೀರಶೈವ ಸಮಾಜದಿಂದ ಶಿವರಾತ್ರಿ ಹಬ್ಬದ ಹಿಂದಿನ ದಿನ ಸಂಜೆಯಿಂದ ಲೋಕ ಕಲ್ಯಾಣಾರ್ಥ ನಡೆಯುವ ಹೋಮಹವನ ಮತ್ತಿತರೆ ವಿಶೇಷ ಪೂಜೆಗೆ ಇದೇ ಮೀನಾಕ್ಷಮ್ಮ ಹಾಗೂ ಅವರ ಪತಿ ಮತ್ತು ಕುಟುಂಬದ ಸದಸ್ಯರು ಕುಳಿತುಕೊಳ್ಳುತ್ತಿದ್ದರು.
ಆದರೆ ಹಬ್ಬಕ್ಕೆ ಒಂದು ದಿನ ಮುಂಚೆಯೇ ಈ ರೀತಿ ಮೀನಾಕ್ಷಮ್ಮ ಮೃತಪಟ್ಟರೆಂದು ತಿಳಿದ ಕಾರ್ಯಕ್ರಮ ಆಯೋಜಕರು ದುಖಃದಿಂದ ಅವರಿಗೆ ಅಂತಿಮ ನಮನ ಸಿಲ್ಲಿಸುವ ಸಲುವಾಗಿ ಹಾರವನ್ನು ಹಿಡಿದ ಅವರ ಮನೆಗೆ ತೆರಳಿದ್ದರು. ಆದರೆ ಅಲ್ಲಿ ಅವರ ಕಣ್ಣೇದುರಿಗೆ ಮೀನಾಕ್ಷಮ್ಮ ಬದುಕುಳಿದ ಘಟನೆ ಅವರೆಲ್ಲರಿಗೂ ಆಶ್ಚರ್ಯ ಮತ್ತು ಆನಂದವನ್ನು ಉಂಟುಮಾಡಿ, ಎಲ್ಲವೂ ಶಿವ ಮಹಿಮೆ ಎಂದು ತೆರಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post