ಭದ್ರಾವತಿ: ಸ್ವಯಂ ನಿವೃತ್ತಿ ಪಡೆದ ಎಂಪಿಎಂ ಕಾರ್ಖಾನೆಯ ಕಾರ್ಮಿಕರು ಮತ್ತು ಕುಟುಂಬ ಸದಸ್ಯರು ಎರಡನೆ ಹಂತದ ಬಾಕಿ ಪಾವತಿಸುವಂತೆ ಒತ್ತಾಯಿಸಿ ಗುರುವಾರ ಕಾರ್ಖಾನೆಯ ಮುಖ್ಯದ್ವಾರದ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಸ್ಥಳಕ್ಕಾಗಿಮಿಸಿ ಕಾರ್ಮಿಕರ ಹಾಗು ಕುಟುಂಬ ಸದಸ್ಯರ ಬೇಡಿಕೆಗಳನ್ನು ಆಲಿಸಿ ಕಾರ್ಖಾನೆಯ ಅಧಿಕಾರಿಗಳೊಂದಿಗೆ ಸಮಸ್ಯೆಗಳನ್ನು ಬಗೆಹರಿಸುವಂತೆ ಚರ್ಚಿಸುವುದಾಗಿ ಹೇಳಿದ ಅವರು ಕಾರ್ಮಿಕರಿಗೆ ನ್ಯಾಯಬದ್ದವಾಗಿ ನೀಡಬೇಕಾದ ಸೌಲತ್ತುಗಳು ನೀಡಲಿ. ಮನೆಗಳನ್ನು ಖಾಲಿ ಮಾಡುವ ಮುನ್ನ ಬಾಕಿ ಹಣ ನೀಡಿದರೆ ಮಾತ್ರ ಖಾಲಿ ಮಾಡುವಂತೆ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಕಮಲಾಕರ್, ಶೇಷಪ್ಪ, ಬಸವರಾಜ್, ಅನಂತಕುಮಾರ್, ಡಿ.ಕೆ.ಶ್ರೀನಿವಾಸ್ ಮುಂತಾದವರು ಮಾತನಾಡಿ, ಎಂಪಿಎಂ ಆಡಳಿತ ಮಂಡಳಿ ಕಳೆದ 3 ವರ್ಷಗಳ ಹಿಂದೆ ಕಾರ್ಖಾನೆಯ ಉತ್ಪಾದನೆ ಸ್ಥಗಿತಗೊಳಿಸಿ, ಸ್ವಯಂ ನಿವೃತ್ತಿ ಪಡೆದ ಕಾರ್ಮಿಕರಿಗೆ ನೀಡಬೇಕಾದ ವೇತನದಲ್ಲಿ ಶೇ: 20 ರಷ್ಟು ಹಣವನ್ನು ಕಠಾವುಮಾಡಿ ಕಾನೂನು ಬದ್ದವಾಗಿ ನೀಡಬೇಕಾದ ಬಾಕಿ ಹಣವನ್ನು ನೀಡದೆ ವಿಳಂಬಧೋರಣೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಮಕ್ಕಳ ವ್ಯಾಸಂಗಕ್ಕೆ ಹಣ ಪಾವತಿಸಲಾಗದೆ ಪರಿತಪಿಸುವಂತಾಗಿದೆ ಹಾಗು ಕುಟುಂಬ ನಿರ್ವಹಣೆಗೆ ಕಷ್ಟಸಾಧ್ಯವಾಗಿದೆ. ಕಾರ್ಮಿಕರ ಹೋರಾಟ ಹತ್ತಿಕ್ಕಲು ಹಾಗು ಹೋರಾಟ ಮಾಡಿದ ಕಾರ್ಮಿಕರಿಗೆ ಬೇಕೆಂದೆ ಬಾಕಿ ಹಣ ನೀಡದೆ ಸತಾವಣೆ ಮಾಡುತ್ತಿದ್ದಾರೆ. ಅಧಿಕಾರಿಗಳು ಆಡಿಟ್ ನೆಪದಲ್ಲಿ ಮನಬಂದಂತೆ ವರ್ತಿಸುತ್ತಾ ಕಾರ್ಮಿಕರಿಗೆ ಸಲ್ಲಬೇಕಾದ ಸೌಲತ್ತುಗಳು ನೀಡದೆ, ಸಮಸ್ಯೆಗಳನ್ನು ಪರಿಹರಿಸಲಾಗದೆ ಕಾರ್ಮಿಕರನ್ನು ಬೀದಿ ಪಾಲು ಮಾಡಿದ್ದಾರೆ. ಅಲ್ಲದೆ ಮನೆಗಳನ್ನು (ಕ್ವಾಟ್ರಸ್) ತೆರವು ಗೊಳಿಸುವಂತೆ ಅಧಿಕಾರಿಗಳು ನೋಟೀಸ್ಗಳನ್ನು ಜಾರಿ ಮಾಡಿ ಆತಂಕ ಹುಟ್ಟಿಸಿದ್ದಾರೆ.
ಸೂಪರ್ ಆನಿಯೇಷನ್, ಪಿಎಫ್, ಲೇಟ್ ಆಫ್ ಸ್ಯಾಲರಿ, ಎನ್ಕ್ಯಾಷ್ಮೆಂಟ್, ಬೋನಸ್ ಸೇರಿದಂತೆ ಮುಂತಾದ ಸೌಲತ್ತುಗಳು ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇಂತಹ ಬೃಹತ್ ಕಾರ್ಖಾನೆಯಲ್ಲಿ ಲೆಕ್ಕಪತ್ರಗಳು ಸರಿಇಲ್ಲದೆ ಕಾರ್ಮಿಕರನ್ನು ವಂಚಿಸಲಾಗುತ್ತಿದೆ. ನಿಖರವಾದ ಲೆಕ್ಕಾಧಿಕಾರಿಗಳಿಲ್ಲದೆ, ಆಡಿಟ್ ಮಾಡಿಸಲಾಗದೆ ಸರಕಾರಕ್ಕೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಅದ್ದರಿಂದ ಕಾರ್ಮಿಕರಿಗೆ ನೀಡಬೇಕಾದ ನ್ಯಾಯಬದ್ದ ಬಾಕಿ ಹಣವನ್ನು ಪಾವತಿಸಬೇಕೆಂದು ಒತ್ತಾಯಿಸಿದರು.
ಕಾರ್ಮಿಕ ಕುಟುಂಬ ಮಹಿಳಾ ಸದಸ್ಯರಾದ ನಿಧ ಫಾತೀಮಾ, ಶೋಭಾ, ಪುಷ್ಪ, ಜಯಲಕ್ಷ್ಮೀ, ಮರಿಯಮ್ಮ, ಲಲಿತಾ ಮುಂತಾದವರು ಅಳಲನ್ನು ತೋಡಿಕೊಂಡು ಮಾತನಾಡಿ, ಕಾರ್ಖಾನೆಯ ಅಧಿಕಾರಿಗಳು ಮುಖನೋಡಿ ಮಣೆ ಹಾಕುತ್ತಿದ್ದಾರೆ. ಕಾರ್ಮಿಕರ ಹಾಗು ಕುಟುಂಬ ಸದಸ್ಯರ ಶಾಪ ಅವರಿಗೆ ತಟ್ಟದಿರುವುದಿಲ್ಲ. ಸುಮಾರು 100 ಮಂದಿ ನಿವೃತ್ತಿಯಾದವರಿಗೂ ಮನೆಗಳನ್ನು ನೀಡಿದ್ದಲ್ಲದೆ ಸ್ವಯಂ ನಿವೃತ್ತಿಯ ಸಂಪೂರ್ಣ ಹಣವನ್ನು ಪಾವತಿಸಿದ್ದಾರೆ. ಮಿಕ್ಕ ಸ್ವಯಂ ನಿವೃತ್ತಿ ಪಡೆದ ನೂರಾರು ಮಂದಿಗೆ ಬಾಕಿ ಹಣ ಪಾವತಿಸದೆ ನಿರ್ಲಕ್ಷಧೋರಣೆ ತಾಳುತ್ತಿದ್ದಾರೆ. ಮನೆಗಳನ್ನು ಖಾಲಿ ಮಾಡುವಂತೆ ನೋಟೀಸ್ ಜಾರಿಗೊಳಿಸಿ ಆತಂಕ ಹುಟ್ಟಿಸಿದ್ದಾರೆ. ಮಕ್ಕಳನ್ನು ಪೋಷಿಸುತ್ತಾ ಮನೆಗಳನ್ನು ತೆರವುಗೊಳಿಸಿ ಎಲ್ಲಿಗೆ ಹೋಗುವುದು ಎಂಬುದು ಪ್ರಶ್ನೆಯಾಗಿದೆ. ನಮಗೆ ನೀಡಬೇಕಾದ ಬಾಕಿ ಹಣ ನೀಡಿದರೆ ಖಾಲಿ ಮಾಡುವುದಾಗಿ ತಮ್ಮ ಅಳಲನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಕಮಲಾಕರ್, ಶೇಷಪ್ಪ, ರಾಮಕೃಷ್ಣ, ಬಿ.ಬಸವರಾಜ್, ಅನಂತಕುಮಾರ್, ಡಿ.ಎಸ್.ಬಸವರಾಜ್, ರವಿಕುಮಾರ್, ಚನ್ನಿಗಪ್ಪ, ಡಿ.ಕೆ.ಶ್ರೀನಿವಾಸ್, ನಗರಸಭಾ ಸದಸ್ಯರಾದ ಬದರಿನಾರಾಯಣ, ಮಹೇಶ್ ಸೇರಿದಂತೆ ಅನೇಕ ಕಾರ್ಮಿಕ ಕುಟುಂಬ ಮಹಿಳಾ ಸದಸ್ಯರು ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post