ಭದ್ರಾವತಿ: ನಗರದ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನೆ ಗಣಪತಿ ವಿಸರ್ಜನೆಯ ಮೆರವಣಿಗೆಯಲ್ಲಿ ಭಾಗವಹಿಸುವ ಸಹಸ್ರಾರು ಭಕ್ತರಿಗೆ ಹಲವೆಡೆ ಪ್ರಸಾದ ವಿನಿಯೋಗ ಮಾಡಲು ನಳಪಾಕ ಕೇಂದ್ರಗಳನ್ನು ತೆರೆಯಲಾಗಿತ್ತು.
ಹೊಸಮನೆ ಮುಖ್ಯರಸ್ತೆಯ ಹತ್ತಾರು ಕಡೆ ವ್ಯಾಪಾರಸ್ಥರು ಅಂಗಡಿಗಳ ಮುಂದೆ ಶಾಮಿಯಾನ ಹಾಕಿಕೊಂಡು ಪ್ರಸಾದಕ್ಕೆ ನಳಪಾಕ ತಯಾರು ಮಾಡಿ ಹಂಚುತ್ತಿದ್ದರೆ, ರಂಗಪ್ಪವೃತ್ತದ ಮಾರುತಿ ಮೆಡಿಕಲ್ಸ್ ಮಾಲೀಕ ಆನಂದ್ ಭಕ್ತರಿಗೆ ರೈಲುಗಾಡಿಯಲ್ಲಿ ನೀಡುವಂತೆ ಪ್ರಸಾದದ ಪ್ಯಾಕೇಟ್ ಮತ್ತು ಕುಡಿಯಲು ಬಿಸ್ಲೇರಿ ನೀರಿನ ಬಾಟಲಿಗಳನ್ನು ವಿತರಿಸಿ ವಿಶೇಷತೆ ಮೆರೆದರು.
ಸಿ.ಎನ್.ರಸ್ತೆಯಲ್ಲಿ ಹಲವೆಡೆ ಚಿತ್ರನ್ನ, ಮೊಸರನ್ನ, ಕುಡಿಯಲು ನೀರು, ಪಾನಕ, ಮಜ್ಜಿಗೆ ವಿತರಿಸಿದರು. ಬಿ.ಎಚ್.ರಸ್ತೆಯ ಆಟೋ ನಿಲ್ದಾಣಗಳಲ್ಲಿ ನಳಪಾಕಗಳನ್ನು ಮಾಡಿ ಬಡಿಸಲಾಯಿತು. ತರೀಕೆರೆ ರಸ್ತೆಯ ಗಾಂಧಿವೃತ್ತದಲ್ಲಿ ಬಾಳೆಎಲೆ ಊಟ ಬಡಿಸಿದರೆ, ಮುಖ್ಯ ಬಸ್ನಿಲ್ದಾಣ ಬಳಿಯ ಖಾಸಗೀ ಪ್ರವಾಸಿ ವಾಹನಗಳ ಮಾಲೀಕರ ಮತ್ತು ಚಾಲಕರ ಸಂಘದಿಂದ ಬಿಸಿಯೂಟ ತಯಾರಿಸಿ ವಿತರಿಸಲಾಯಿತು. ಪ್ರಸ್ತುತ ವರ್ಷ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಭಕ್ತರಿಗೆ ಕೊರತೆಯಾಗದಂತೆ ಪ್ರಸಾದ ಮತ್ತು ನೀರು ವಿತರಣೆಯಾಗಿದ್ದು ವಿಶೇಷವಾಗಿತ್ತು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post