ಭದ್ರಾವತಿ: ನ್ಯೂಟೌನ್ ಸರಕಾರಿ ವಿಐಎಸ್ಎಸ್ಜೆ ಪಾಲಿಟೆಕ್ನಿಕ್ನಲ್ಲಿ ಡಿಪ್ಲೊಮಾ ತರಗತಿಗಳಿಗೆ ಸೀಟುಗಳ ಆಯ್ಕೆಯ ನೋಡಲ್ ಕೇಂದ್ರ ತೆರೆಯಲು ಸಕಲ ಸಿದ್ದತೆ ಕೈಗೊಳ್ಳಲಾಗಿದೆ. ಬಿಎಸ್ಎನ್ಎಲ್ ಇಲಾಖೆಯು ಓಎಫ್ಸಿ ಕೇಬಲ್ ಅಳವಡಿಕೆ ಪ್ರಗತಿಯಲ್ಲಿದೆ. ಜೂ: 10 ರಂದು ಶಾಸಕ ಬಿ.ಕೆ. ಸಂಗಮೇಶ್ವರ್ ಕೌನ್ಸಿಲಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ ಎಂದು ಪ್ರಾಂಶುಪಾಲ ಮಂಜುನಾಥ ರೆಡ್ಡಿ ತಿಳಿಸಿದರು.
ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ಅವರು 2 ವರ್ಷಗಳು ಯಶಸ್ವಿಯಾಗಿ ಕೌನ್ಸಿಲಿಂಗ್ ನಡೆದರೆ, ಕಳೆದ ವರ್ಷ ಆನ್ ಲೈನ್ ಅಡಚಣೆಯಿಂದ ಸಮಸ್ಯೆ ಉಂಟಾಗಿತ್ತು. ಇದರಿಂದ ರಾಜ್ಯಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿ ರಾಜ್ಯದೆಲ್ಲೆಡೆಯ ನೋಡಲ್ ಕೇಂದ್ರಗಳಲ್ಲೂ ಸೀಟು ಹಂಚಿಕೆಗೆ ತೊಂದರೆ ಉಂಟಾಗಿತ್ತು. ಸೀಟು ಹಂಚಿಕೆಯ ಆನ್ಲೈನ್ ಪ್ರಕ್ರಿಯೆ ನಡೆಯುವಾಗ ಅಡಚಣೆ ಉಂಟಾದರೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಆ ಕ್ಷಣದಲ್ಲಿ ಅನ್ಯಾಯವಾಗುತ್ತದೆ. ಅಲ್ಲದೆ ಆ ವಿದ್ಯಾರ್ಥಿಗೆ ಧಕ್ಕ ಬೇಕಾದ ಸೀಟು ರಾಜ್ಯದ ಯಾವುದೊ ಮೂಲೆಯ ನೋಡಲ್ ಕೇಂದ್ರದಲ್ಲಿನ ಅಭ್ಯರ್ಥಿಗೆ ವರ್ಗಾವಣೆಗೊಳ್ಳುತ್ತದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗೆ ಅನ್ಯಾಯವಾಗಿ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಗೊಂದಲ ಏರ್ಪಡುತ್ತದೆ.
ಅದ್ದರಿಂದ ತಾಂತ್ರಿಕ ದೋಷವನ್ನು ಸರಿಪಡಿಸುವಂತೆ ಹಾಗು ಹಳೇ ಕೇಬಲ್ ಲೈನ್ ತೆಗೆದು ನೂತನವಾಗಿ ಕೇಬಲ್ ಎಳೆದು ಕೌನ್ಸಿಲಿಂಗ್ ವ್ಯವಸ್ಥೆಗೆ ಅನುವು ಮಾಡಿಕೊಡುವಂತೆ ಬಿಎಸ್ಎನ್ಎಲ್ ಇಲಾಖೆಗೆ ಮನವಿ ಮಾಡಲಾಗಿತ್ತು. ದೂರವಾಣಿ ಇಲಾಖೆಯು ಕ್ರಮ ಕೈಗೊಂಡು ನೂತನವಾಗಿ ಓಎಫ್ಸಿ ಕೇಬಲ್ ವ್ಯವಸ್ಥೆ ಮಾಡಿಕೊಡಲು ಮುಂದಾಗಿದೆ. ಈ ವ್ಯವಸ್ಥೆ ಕಲ್ಪಿಸಿದ್ದಲ್ಲಿ ಕೌನ್ಸಿಲಿಂಗಿಗೆ ಯಾವುದೇ ಅಡಚಣೆ ಆಗುವುದಿಲ್ಲವೆಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಭದ್ರಾವತಿಯು ಸೇರಿದಂತೆ ಒಟ್ಟು 25 ಕೇಂದ್ರಗಳಲ್ಲಿ ಏಕಕಾಲದ ಮೆರಿಟ್ ಹಾಗು ಮೀಸಲಾತಿ ಅನುಗುಣವಾಗಿ ಕೌನ್ಸಿಲಿಂಗ್ ನಡೆಯಲಿದೆ.
ಪಾರದರ್ಶಕ ವ್ಯವಸ್ಥೆಯಿಂದಾಗಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅನುಕೂಲ ಸಿಂಧುವಾಗಲಿದೆ. ಜೂ: 10 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆಯವರೆಗೆ ರ್ಯಾಂಕ್ 1 ರಿಂದ 3 ಸಾವಿರದ ವರೆಗೆ ಸೀಟು ಹಂಚಿಕೆಯ ಪ್ರಕ್ರಿಯೆ ಆರಂಭಗೊಳ್ಳಲಿದೆ. ಜೂ: 11 ರಂದು 3001 ರಿಂದ 6000, ಜೂ: 12 ರಂದು 6001 ರಿಂದ 9000, ಜೂ: 13 ರಂದು 9001 ರಿಂದ 11000, ಜೂ: 14 ರಂದು 11001 ರಿಂದ 13000, ಜೂ: 15 ರಂದು 13001 ರಿಂದ 15000, ಜೂ: 17 ರಂದು 15001 ರಿಂದ 17000, ಜೂ: 18 ರಂದು 17001 ರಿಂದ 19000, ಜೂ: 19 ರಂದು 19001 ರಿಂದ 21000, ಜೂ: 20 ರಂದು 21001 ರಿಂದ 24000, ಜೂ: 21 ರಂದು 24001 ರಿಂದ 27000, ಜೂ: 22 ರಂದು 27001 ರಿಂದ 29251 ಕ್ಕಿಂತ ಮೇಲ್ಪಟ್ಟ ರ್ಯಾಂಕಿಂಗ್ಗಳಿಗೆ ಸೀಟು ಹಂಚಿಕೆಯಾಗಲಿದೆ.
ಜೂ: 3 ರಂದು ಕೌನ್ಸಿಲಿಂಗಿನ ಎಲ್ಲಾ ಸಿದ್ದತೆಗಳಾಗಬೇಕಿದೆ. ಬಿಎಸ್ಎನ್ಎಲ್ ಇಲಾಖೆ ಓಎಫ್ಸಿ ಕೇಬಲ್ ಸಿದ್ದತೆ ಮಾಡಿಕೊಟ್ಟನಂತರ ಸೀಟು ಹಂಚಿಕೆಯ ಅಣಕು ಪ್ರದರ್ಶನ ನಡೆಯಲಿದೆ. ಜೂ: 4 ರಂದು ವಿಶೇಷ ಕೋಟಾದಡಿ ವಿಕಲಾಂಗ, ಜೆಟಿಎಸ್, ಡಿಫೆನ್ಸ್, ಎಕ್ಸ್ ಡಿಫೆನ್ಸ್ ಕೋಟಾದಡಿ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಜೂ: 10 ರಂದು ಶಾಸಕ ಬಿ.ಕೆ.ಸಂಗಮೇಶ್ವರ್ ಕೌನ್ಸಿಲಿಂಗ್ ವ್ಯವಸ್ಥೆಗೆ ಚಾಲನೆ ನೀಡಿ ಸಮಸ್ಯೆಗಳನ್ನು ಆಲಿಸಲಿದ್ದಾರೆಂದು ಪ್ರಾಂಶುಪಾಲ ಮಂಜುನಾಥರೆಡ್ಡಿ ತಿಳಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರುಗಳಾದ ಡಾ.ಶ್ಯಾಂ, ಯೋಗೀಶ್ವರ್, ಮೃತ್ಯುಂಜಯ ಹೊಂಬಾಳ್, ಎಚ್.ಎಸ್.ಪ್ರವೀಣ್, ರಂಗನಾಥ ಪ್ರಸಾದ್, ಮಂಜುನಾಥ್, ಸ್ಟ್ಯಾನ್ಲಿ ಮುಂತಾದವರು ಇದ್ದರು.
ಕೇಬಲ್ ಗುತ್ತಿಗೆದಾರ ಕೃಷ್ಣಮೂರ್ತಿ ಸ್ಪಷ್ಟನೆ:
ಸರಕಾರಿ ಪಾಲಿಟೆಕ್ನಿಕ್ ಕೌನ್ಸಿಲಿಂಗ್ ನೋಡಲ್ ಕೇಂದ್ರಕ್ಕೆ ಪ್ರತ್ಯೇಕವಾಗಿ ಓಎಫ್ಸಿ ಕೇಬಲ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ನಗರದ ಅಂಡರ್ ಬ್ರಿಡ್ಜ್ ಬಳಿಯ ರೈಲ್ವೇ ಕ್ರಾಸಿಂಗ್ ಬಳಿ ಕೇಬಲ್ ಜಾಮ್ ಆಗಿದೆ. ತಲಾಶ್ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ನೀಡದಂತೆ ಸಂಪರ್ಕ ನೀಡುವ ಕಾರ್ಯ ಮಾಡಲಾಗುತ್ತದೆ ಎಂದು ಕೇಬಲ್ ಗುತ್ತಿಗೆದಾರ ಕೃಷ್ಣಮೂರ್ತಿ ಪತ್ರಿಕೆಗೆ ಸ್ಪಷ್ಟಪಡಿಸಿದರು.
Discussion about this post