ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಪ್ರಸ್ತುತ ನಗರಸಭೆ ವ್ಯಾಪ್ತಿಯಲ್ಲಿ ಪ್ರತಿ ಭಾನುವಾರ ನಡೆಯುತ್ತಿರುವ ವಾರದ ಸಂತೆ ಸ್ಥಳ ಬದಲಾವಣೆ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿರುವಂತೆಯೇ ನಗರಸಭೆ ಬಜೆಟ್ ಭಾಷಣದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗಿದೆ.
ಬಜೆಟ್ ಮಂಡಿಸಿ ಮಾತನಾಡಿದ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ನಗರಸಭೆ ವ್ಯಾಪ್ತಿಯ ಸಂತೆ ಮೈದಾನದಲ್ಲಿ ನಡೆಯುವ ವಾರದ ಸಂತೆಯನ್ನು ಎಲ್ಲರ ಅಭಿಪ್ರಾಯ ಪಡೆದು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಿ ಸಂತೆ ಮೈದಾನದ ಜಾಗದಲ್ಲಿ ನಗರಸಭೆಯ ನೂತನ ಕಟ್ಟಡವನ್ನು ನಿರ್ಮಾಣ ಮಾಡಲು ಉದ್ದೇಶಿಸಿದ್ದು, ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದರು.
ಹೊಸ ಘೋಷಣೆಗಳು
ಆಡಳಿತ ವಿಭಾಗ: ಕಚೇರಿಯ ಅಭಿಲೇಖಾಲಯವನ್ನು ಆಧುನೀಕರಣಗೊಳಿಸಿ ಕಡತಗಳನ್ನು ಡಿಜಿಟಲೀಕರಣಗೊಳಿಸಿ ಕಡತಗಳನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡಿಸಲು ಕ್ರಮವಹಿಸಲಾಗುತ್ತಿದ್ದು, ಸದರಿ ಆರ್ಥಿಕ ವರ್ಷದಲ್ಲಿ ಶೇ.80 ರಷ್ಟು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದಿದ್ದಾರೆ.
ಇ-ಆಡಳಿತ ತಂತ್ರಜ್ಞಾನ ಅನುಷ್ಠಾನ
ಭದ್ರಾವತಿ ನಗರಸಭೆಯು ಕಚೇರಿ ಆಡಳಿತವನ್ನು ಪಾರದರ್ಶಕ, ನಾಗರೀಕ ಸ್ನೇಹಿಯನ್ನಾಗಿಸುವ ನಿಟ್ಟಿನಲ್ಲಿ ಈ ಹಿಂದೆ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಗಣಕೀಕೃತ ಕಾಗದರಹಿತ ಕಚೇರಿಯನ್ನಾಗಿ ಪರಿವರ್ತಿಸಿ ಆಡಳಿತ ನಡೆಸುತ್ತಿದೆ. ಈಗಾಗಲೇ ಕಛೇರಿಯ ಎಲ್ಲಾ ಆಡಳಿತ ಅಧಿಕಾರಿಗಳು ಮತ್ತು ಸಿಬ್ಬಂದಿ ಸರ್ಕಾರದ ಸುತ್ತೋಲೆಯನುಸಾರ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದರಿಂದ ಪರಿಣಿತ ಸಿಬ್ಬಂದಿಯನ್ನು ನಗರಸಭೆಯು ಹೊಂದಿರುವುದು ದೃಢಪಟ್ಟಿರುವುದರಿಂದ ಈ ಕಾಗದರಹಿತ ಆಡಳಿತವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಪರಿಣಾಮಕಾರಿಯಾಗಿ ವಿವಿಧ ಇಲಾಖೆಗಳ ಸಮನ್ವಯತೆಯೊಂದಿಗೆ ಅತ್ಯಂತ ಹೆಚ್ಚಿನ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಲನುವಾಗುವಂತೆ ನಗರಸಭೆಯ ಸಮಗ್ರ ಆಡಳಿತ ನಿರ್ವಹಣೆಯನ್ನು ಇ-ಆಫೀಸ್ ತಂತ್ರಾಾಂಶವನ್ನು ಅಳವಡಿಸಿ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post