ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಮಹಿಳೆಯೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ, ನ್ಯಾಯಾಲಯ ತೀರ್ಪು ನೀಡಿದೆ.
ಈ ಕುರಿತಂತೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದ್ದು, ಒಂದೇ ಕುಟುಂಬದ ಐವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಭದ್ರಾವತಿ ತಾಲೂಕು ಸಂಕ್ಲಿಪುರ ಗ್ರಾಮದ ನಿವಾಸಿ ಆರ್. ಮೋಹನ್ (33), ಇವರ ತಾಯಿ ಸರೋಜಮ್ಮ (60), ತಂದೆ ರಂಗಪ್ಪ (66), ಸಹೋದರ ಶೇರ್ಖ (44) ಹಾಗೂ ಮೂರ್ತಿ (41) ಜೈಲು ಶಿಕ್ಷೆಗೆ ಗುರಿಯಾದವರೆಂದು ಗುರುತಿಸಲಾಗಿದೆ.
ಜೈಲು ಶಿಕ್ಷೆಯ ಜೊತೆಗೆ ಅಪರಾಧಿಗಳಿಗೆ 1.50 ಲಕ್ಷ ರೂ. ದಂಡವನ್ನು ನ್ಯಾಯಾಲಯ ವಿಧಿಸಿದ್ದು, ಮೃತ ಮಹಿಳೆಯ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪಿ. ರತ್ನಮ್ಮ ಅವರು ವಾದ ಮಂಡಿಸಿದ್ದರು.
ಏನಿದು ಪ್ರಕರಣ?
ಪ್ರೇಮಾ ಎಂಬ ಮಹಿಳೆ ಮೃತರಾದವರಾಗಿದ್ದಾರೆ. ಪ್ರೇಮಾ ಅವರಿಗೆ ಪತಿ ಹಾಗೂ ಅವರ ಮನೆಯವರು ದೈಹಿಕ – ಮಾನಸಿಕ ಕಿರುಕುಳ ನೀಡುತ್ತಿದ್ದರು. ಹಾಗೆಯೇ ತವರು ಮನೆಗೆ ವಾಪಾಸ್ ಕಳುಹಿಸಿದ್ದರು.
ಇದರಿಂದ ಬೇಸರಗೊಂಡ ಪ್ರೇಮಾರವರು 2017ರ ಮಾರ್ಚ್ 26ರಂದು ವಿಷ ಸೇವಿಸಿದ್ದರು. ಆನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಎಪ್ರಿಲ್ 7ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
ಈ ಕುರಿತಂತೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















