ಕಲ್ಪ ಮೀಡಿಯಾ ಹೌಸ್ | ಬೀದರ್ |
ಗೊಂಡ ಮತ್ತು ಟೋಕರಿ ಕೋಳಿ ಜಾತಿಗಳ ಸಿಂಧುತ್ವ ಪ್ರಮಾಣ ಪತ್ರವನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಜಾಗೃತ ಕೋಶ) ವರದಿ ಪಡೆದ ನಂತರವೇ ನೀಡುವಂತೆ ಹೊರಡಿಸಿರುವ ಸರ್ಕಾರದ ಆದೇಶವನ್ನು ಕೂಡಲೇ ಹಿಂಪಡೆದು ಸರಳ ರೀತಿಯಲ್ಲಿಯೇ ಸಿಂಧುತ್ವ ಪ್ರಮಾಣ ಪತ್ರವನ್ನು ಒದಗಿಸಿಕೊಡುವಂತೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರ ನೇತೃತ್ವದಲ್ಲಿ ಗೊಂಡ ಮತ್ತು ಟೋಕರಿ ಕೋಳಿ ಸಮಾಜದ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಮನವಿ ಸಲ್ಲಿಸಿದರು.
ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರ 65ನೇ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಸೋಮವಾರ ನಗರದ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಸರ್ಕಲ್ ಬಳಿ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದ ಬಳಿಕ ಸಿಎಂ ಬೊಮ್ಮಾಯಿರವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಗೊಂಡ ಮತ್ತು ಟೋಕರಿ ಕೋಳಿ ಸಮಾಜದ ಪರವಾಗಿ ಸಮಾಜದ ಮುಖಂಡರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ ಎಂದರು.
ಜಾತಿ ಸಿದುಂತ್ವದ ವಿಷಯದಲ್ಲಿ ಈ ಎರಡು ಸಮಾಜದ ಮುಖಂಡರು ಅನೇಕ ಬಾರಿ ನನ್ನೊಟ್ಟಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಈಗಾಗಲೇ ಅನೇಕ ಬಾರಿ ಸಂಬಂಧಿಸಿದ ಸಚಿವರಿಗೆ ಈ ವಿಷಯವಾಗಿ ಮನವಿ ಸಲ್ಲಿಸಲಾಗಿದೆ. ಈಗ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಿದ್ದೇವೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದೇ ತಿಂಗಳು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನ ವೇಳೆ ಸಂಬಂಧಿಸಿದ ಅಧಿಕಾರಿಗಳೊಟ್ಟಿಗೆ ಮಾತನಾಡಿ ಗೊಂಡ ಮತ್ತು ಟೋಕರಿ ಕೋಳಿ ಸಮಾಜದ ಸಿಂಧುತ್ವ ಸಮಸ್ಯೆಗೆ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ರಘುನಾಥ್ ರಾವ್ ಮಲ್ಕಾಪೂರೆ, ಮುಖಂಡರಾದ ಬಾಬುರಾವ್ ಮಲ್ಕಾಪೂರೆ, ಅಮೃತರಾವ್ ಚಿಮ್ಕೊಡೆ, ಬಸವರಾಜ ಮಾಳ್ಗೆ, ಪುಂಡಲಿಕರ್ ರಾವ್ ಇಡ್ಗಂಪಳ್ಳಿ, ಜಗನಾಥ ಜಮಾದಾರ, ಸುನೀಲ್ ಬಾವಿಕಟ್ಟೆ, ಶರಣಪ್ಪ ಖಾಶೆಂಪುರ್, ಅಶೋಕ ಬಗದಲ್, ರವೀಂದ್ರ ಗುಮಾಸ್ತಿ, ರಮೇಶ ಮರ್ಜಾಪೂರ್ ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post