ಕಲ್ಪ ಮೀಡಿಯಾ ಹೌಸ್ | ಬೀದರ್ |
ಮೂರು ಸಾವಿರ ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿದೆ ಎಂದು ಹೇಳಲಾಗುತ್ತಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಂಗನಕೋಟ್ ನಲ್ಲಿರುವ ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನಕ್ಕೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ MLA Bandeppa Khashempur ಭೇಟಿ ನೀಡಿದರು.
ಕಂಗನಕೋಟ್ ಗ್ರಾಮದ ಹೊರವಲಯದಲ್ಲಿರುವ ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಈ ದೇವಸ್ಥಾನ ಐತಿಹಾಸಿಕ ಹಿನ್ನೆಲೆ ಹೊಂದಿದೆ ಎನ್ನಲಾಗುತ್ತಿದೆ. ದೇವಸ್ಥಾನದ ಅಭಿವೃದ್ಧಿಗಾಗಿ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕ್ರಮಕೈಗೊಳ್ಳುತ್ತೇನೆ. ಸಂಬಂಧಿಸಿದವರಿಗೆ ತಿಳಿಸುತ್ತೇನೆ ಎಂದರು.
ಗ್ರಾಮಸ್ಥರೆಲ್ಲ ಸೇರಿ ಶ್ರೀ ಸಿದ್ದೇಶ್ವರ ಚಾರಿಟೇಬಲ್ ಟ್ರಸ್ಟ್ ಎಂಬ ಟ್ರಸ್ಟ್ ರಚಿಸಿಕೊಂಡಿರುವುದು ಖುಷಿಯ ವಿಷಯವಾಗಿದೆ. ಆ ಟ್ರಸ್ಟ್ ಮೂಲಕ ದೇವಸ್ಥಾನದ ಜೀರ್ಣೋದ್ಧಾರ, ಇತಿಹಾಸ ಸಾರುವ ಕೆಲಸ ಮಾಡಬಹುದಾಗಿದೆ. ಮಾಸ್ಟರ್ ಪ್ಲಾನ್ ಮೂಲಕ ದೇವಸ್ಥಾನ ಮತ್ತು ಇಲ್ಲಿರುವ ಐತಿಹಾಸಿಕ ಹೊಂಡಗಳನ್ನು ಅಭಿವೃದ್ಧಿ ಮಾಡಬಹುದಾಗಿದೆ.
ದೇವಸ್ಥಾನದ ಜೀರ್ಣೋದ್ಧಾರಕ್ಕೆ ನಾನು ವೈಯಕ್ತಿಕ ಧನಸಹಾಯ ಮಾಡುತ್ತೇನೆ. ಅಷ್ಟೇ ಅಲ್ಲದೇ ಯಾವು ರೂಪದಲ್ಲಿ ಅನುದಾನ ಒದಗಿಸಲು ಸಾಧ್ಯವಾಗುತ್ತದೆಯೋ ಆ ರೂಪದಲ್ಲಿ ಅನುದಾನವನ್ನು ಒದಗಿಸಿಕೊಡುತ್ತೇನೆ. ಐತಿಹಾಸಿಕ ಹಿನ್ನೆಲೆ ಇರುವ ದೇವಸ್ಥಾನಗಳನ್ನು ಉಳಿಸಿಕೊಂಡು, ಬೆಳಸಿಕೊಂಡು ಸಾಗಬೇಕಾಗಿದೆ. ಇದು 2023ರಲ್ಲಿ ನಾನು ಭೇಟಿ ನೀಡುತ್ತಿರುವ ಮೊದಲ ಗ್ರಾಮವಾಗಿದೆ. ಅದರಲ್ಲೂ ಇಂತಹ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿರುವುದು ವಿಶೇಷ ಎನಿಸುತ್ತಿದೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಜೆಡಿಎಸ್ ಮುಖಂಡ ಗಣಪತಿ ಶಂಭು, ಗ್ರಾಮದ ಸಿದ್ದೇಶ್ವರ ದೇವಸ್ಥಾನ ಪ್ರಾಚೀನ ಕಾಲದ ದೇವಸ್ಥಾನವಾಗಿದೆ. ಸುಮಾರು 3000 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ವ್ಯಾಸ ಮಹರ್ಷಿಗಳು ಬಂದೋಗಿರುವ ಕಡೆಗಳಲ್ಲಿ ಈ ರೀತಿಯ ದೇವಸ್ಥಾನಗಳು ಇವೆ ಎಂದು 2016ರಲ್ಲಿ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಕಾಶಿಯ ಜಗದ್ಗುರುಗಳು, ದೇವಸ್ಥಾನದ ಐತಿಹಾಸಿಕ ಹಿನ್ನಲೆ ತಿಳಿಸಿದ್ದರು ಎಂಬ ಮಾಹಿತಿ ಹಂಚಿಕೊಂಡರು.
ಮಕ್ಕಳಿಗೆ ಕಾಯಿಲೆಗಳು ಬಂದಾಗ ಈ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರೆ ಕಾಯಿಲೆಗಳು ವಾಸಿಯಾಗುತ್ತವೆ. ಹುಣ್ಣುಗಳು, ತುರಿಕೆ ಕಾಯಿಲೆಗಳು ಬಂದಾಗ ದೇವರ ಸನ್ನಿಧಿಗೆ ಬಂದು ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರೆ ಕಾಯಿಲೆಗಳಿಂದ ಮುಕ್ತಿ ದೊರೆಯುತ್ತದೆ ಎಂಬ ಮಾಹಿತಿಯನ್ನು ಗ್ರಾಮಸ್ಥರು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಾಜಿ ಎಪಿಎಮ್ಸಿ ಅಧ್ಯಕ್ಷ ಚನ್ನಮಲ್ಲಪ್ಪ ಹಜ್ಜರಗಿ, ಜೆಡಿಎಸ್ ಮುಖಂಡ ಗಣಪತಿ ಶಂಭು, ಶ್ರೀ ಸಿದ್ದೇಶ್ವರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂತೋಷ ತೋರಣೆ, ಕಾರ್ಯದರ್ಶಿ ಖೇದರನಾಥ್ ಶಂಭು, ನಿಲಕಂಟ ಹೊತಿ, ನಿಲಕಂಠ ರಾಠೋಡ್, ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ನಿರ್ಮಲಾ ಶಾಂತಕುಮಾರ್, ಕಾರ್ಯದರ್ಶಿ ಸಂಗೀತಾ, ಗ್ರಾಮಸ್ಥರಾದ ಸಚಿನ್, ವೀರಸಂಗಪ್ಪ, ಓಂಕಾರ್, ಅಶೋಕ್, ಸುರೇಶ್ ಪಾಟೀಲ್, ರವೀಂದ್ರ ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post