ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಖಾಶೆಂಪುರ್ (ಪಿ) ಗ್ರಾಮದಲ್ಲಿ ನಡೆಯುತ್ತಿದ್ದ ಕೊರೊನಾ ವ್ಯಾಕ್ಸಿನ್ ಪ್ರಕ್ರಿಯೆಯ ವೇಳೆ ವ್ಯಾಕ್ಸಿನ್ ಪಡೆದುಕೊಳ್ಳಲು ಹಿಂದೇಟಾಕುತ್ತಿದ್ದ ವೃದ್ಧೆಯೊಬ್ಬರ ಮನವೊಲಿಸಿ ವ್ಯಾಕ್ಸಿನ್ ಕೊಡಿಸುವಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಯಶಸ್ವಿಯಾದರು.
ಖಾಶೆಂಪುರ್ ಗ್ರಾಮದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಪ್ರತಿ ಶನಿವಾರ ಭೇಟಿ ನೀಡುವಂತೆ ಈ ಭಾರಿ ಕೂಡ ಭೇಟಿ ನೀಡಿ, ದರ್ಶನ ಪಡೆಯಲು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಶನಿವಾರ ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ದೇವಸ್ಥಾನದ ಪಕ್ಕದಲ್ಲೇ ಕೊರೊನಾ ವ್ಯಾಕ್ಸಿನ್ ಪ್ರಕ್ರಿಯೆ ನಡೆಯುತ್ತಿರುವುದನ್ನು ಗಮನಿಸಿ, ಸ್ಥಳದಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಆಶಾ, ಅಂಗನವಾಡಿ ಕಾರ್ಯಕರ್ತೆಯರಿಂದ ವ್ಯಾಕ್ಸಿನ್ ಪ್ರಮಾಣದ ಬಗ್ಗೆ ಮಾಹಿತಿ ಪಡೆದರು.
ಈ ವೇಳೆ ಮಾಹಿತಿ ನೀಡಿದ ಸಿಬ್ಬಂದಿಗಳು, ಖಾಶೆಂಪುರ್ ಗ್ರಾಮದಲ್ಲಿ ಶೇ.92ರಷ್ಟು ವ್ಯಾಕ್ಸಿನ್ ಪ್ರಕ್ರಿಯೆ ಮುಗಿದಿದೆ. ಇಲ್ಲಿರುವ ಸುಮಾರು 85 ವರ್ಷದ ಅಜ್ಜಿ ರತ್ಮಮ್ಮ ಗಂಡ ಬಸಪ್ಪ ಶಿವಗೊಂಡ ಎಂಬುವವರು ವ್ಯಾಕ್ಸಿನ್ ತೆಗೆದುಕೊಳ್ಳುತ್ತಿಲ್ಲವೆಂದು ಶಾಸಕರಿಗೆ ತಿಳಿಸಿದರು. ಅಜ್ಜಿಯ ಬಗ್ಗೆ ಮಾಹಿತಿ ನೀಡುವಂತೆ ಶಾಸಕರು ಕೇಳಿದಾಗ, ಈ ಅಜ್ಜಿ ಗ್ರಾಮದ ಪ್ರಗತಿಪರ ರೈತ ರಾಜು ಎಂಬುವವರ ಅಜ್ಜಿ ಎಂದು ಸಿಬ್ಬಂದಿಗಳು, ಶಾಸಕರಿಗೆ ಮಾಹಿತಿ ನೀಡಿದರು. ಈ ವೇಳೆ ರಾಜುರವರೊಂದಿಗೆ ಮಾತನಾಡಿದ ಶಾಸಕರು ನಿಮ್ಮ ಅಜ್ಜಿಗೆ ವ್ಯಾಕ್ಸಿನ್ ಯಾಕ್ ಕೊಡಿಸಿಲ್ಲ? ಕೊಡಿಸಬೇಕಲ್ಲವೇ? ಎಂದು ಪ್ರಶ್ನಿಸುತ್ತಿದ್ದಂತೆ ಈಗಲೇ ವ್ಯಾಕ್ಸಿನ್ ಕೊಡಿಸಿ ಎಂದು ರಾಜು, ಶಾಸಕರಿಗೆ ಮನವಿ ಮಾಡಿದರು.
ಅಲ್ಲೇ ಕುಳಿತಿದ್ದ ಅಜ್ಜಿಯ ಹತ್ತಿರ ಹೋದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಅಜ್ಜಿಯನ್ನು ಆತ್ಮೀಯತೆಯಿಂದ ಮಾತನಾಡಿಸಿ, ನೀನು ಯಾಕೆ ವ್ಯಾಕ್ಸಿನ್ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ನನಗೆ ಆರೋಗ್ಯ ಸರಿ ಇಲ್ಲ. ಆಗಾಗ ಆಸ್ಪತ್ರೆಗೆ ಹೋಗುತ್ತಿದ್ದೇನೆ. ಕೆಮ್ಮು, ಜ್ವರ ಇದೆ ಹಾಗಾಗಿ ವ್ಯಾಕ್ಸಿನ್ ತೆಗೆದುಕೊಳ್ಳುವುದಿಲ್ಲವೆಂದು ಅಜ್ಜಿ ವ್ಯಾಕ್ಸಿನ್ ತೆಗೆದುಕೊಳ್ಳಲು ಹಿಂದೆಟಾಕಿದರು. ಈ ವೇಳೆ ಕಮಠಾಣಾದ ವೈದ್ಯಾಧಿಕಾರಿಗಳಿಗೆ ಪೋನ್ ಮಾಡಿ ಮಾತನಾಡಿದ ಶಾಸಕರು, ಅಜ್ಜಿಗೆ ಇರುವ ಆರೋಗ್ಯದ ಸಮಸ್ಯೆ, ಹಿಮೋಗ್ಲೋಬಿನ್ ಕಡಿಮೆ ಇರುವುದನ್ನು ತಿಳಿಸಿ, ವ್ಯಾಕ್ಸಿನ್ ನೀಡಬಹುದೇ? ಹೇಗೆ? ಎಂದು ಪ್ರಶ್ನಿಸಿದಾಗ ನೀಡಬಹುದು, ಏನು ಸಮಸ್ಯೆ ಆಗಲ್ಲವೆಂದು ವೈದ್ಯಾಧಿಕಾರಿಗಳು ಹೇಳಿದರು.
ಈ ವೇಳೆ ಕೂಡ ವೃದ್ಧೆ ರತ್ಮಮ್ಮ ನನಗೆ ವ್ಯಾಕ್ಸಿನ್ ಬೇಡವೇ ಬೇಡವೆಂದು ಪಟ್ಟು ಹಿಡಿದಳು. ಮತ್ತೆ ಅಜ್ಜಿಯೊಂದಿಗೆ ಮಾತನಾಡಿದ ಶಾಸಕರು ನಾನು ಪ್ರತಿ ಶನಿವಾರ ನಿಮ್ಮ ಮನೆಯ ಹತ್ತಿರವೇ ಇರುವ ಆಂಜನೇಯ ದೇವಸ್ಥಾನಕ್ಕೆ ಬರುತ್ತೇನೆ. ಬಂದಾಗಲೆಲ್ಲ ನಿನ್ನ ಆರೋಗ್ಯ ನೋಡಿಕೊಂಡು ಹೋಗುತ್ತೇನೆ. ವ್ಯಾಕ್ಸಿನ್ ಪಡೆಯುವುದರಿಂದ ಏನು ಸಮಸ್ಯೆಯಾಗುವುದಿಲ್ಲ ಎಂದು ಮನವೊಲಿಸಿದರು.
ಶಾಸಕರ ಮಾತುಕತೆಯ ಬಳಿಕ ಅಜ್ಜಿ ರತ್ಮಮ್ಮ ವ್ಯಾಕ್ಸಿನ್ ಪಡೆದುಕೊಳ್ಳಲು ಸಂತಸದಿಂದ ಒಪ್ಪಿಕೊಂಡರು. ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸ್ವತಃ ತಾವೇ ಮುಂದೆ ನಿಂತು ಅಜ್ಜಿಗೆ ವ್ಯಾಕ್ಸಿನ್ ಕೊಡಿಸಿದರು. ನಗು ನಗುತ್ತಲ್ಲೇ ವ್ಯಾಕ್ಸಿನ್ ಪಡೆದ ಅಜ್ಜಿಗೆ ದೈರ್ಯ ತುಂಬಿದ ಶಾಸಕರು, ಅಜ್ಜಿಗೆ ಹಿಮೋಗ್ಲೋಬಿನ್, ವಿಟಮಿನ್ ಗೆ ಸಂಬಂಧಿಸಿದ ಔಷಧಿಗಳನ್ನು ನೀಡಿ, ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಜ್ಜಿ ರತ್ಮಮ್ಮಳ ಮೊಮ್ಮಗ ಪ್ರಗತಿಪರ ರೈತ ರಾಜು, ಆಶಾ ಕಾರ್ಯಕರ್ತೆ ಪಿಂಕುವಂತಿ, ಅಂಗನವಾಡಿ ಕಾರ್ಯಕರ್ತೆಯರಾದ ಇಂದುಮತಿ, ರೇಖಾ, ಕಲಾವತಿ, ಗ್ರಾಮ ಲೆಕ್ಕಾಧಿಕಾರಿ ನಾಗವೇಣಿ, ಗೌರಮ್ಮ, ಲಕ್ಷ್ಮೀ, ಆಸ್ಪತ್ರೆಯ ಸಿಬ್ಬಂದಿಗಳು, ಗ್ರಾಮಸ್ಥರು, ಮುಖಂಡರು ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post