Read - 2 minutes
ಕಲ್ಪ ಮೀಡಿಯಾ ಹೌಸ್ | ಬೀದರ್ |
ಅಕಾಲಿಕ ಮಳೆಯಿಂದಾಗಿ ಕಷ್ಟಪಟ್ಟು ಬೆಳೆದಿದ್ದ ಬೆಳೆಗಳನ್ನು ಕಳೆದುಕೊಂಡು ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಮುಖ್ಯಮಂತ್ರಿಗಳು ಕೂಡಲೇ ಕೃಷಿ ಬೆಳೆಗಳಿಗೆ ಎಕರೆಗೆ ಕನಿಷ್ಠ 25 ಸಾವಿರ ರೂ. ಹಾಗೂ ತೋಟಗಾರಿಕೆ ಬೆಳೆಗಳಿಗೆ ಎಕರೆಗೆ ಕನಿಷ್ಠ 50 ಸಾವಿರ ರೂ. ತಾತ್ಕಾಲಿಕ ಪರಿಹಾರ ಒದಗಿಸಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ MLA Bandeppa Khashempur ಒತ್ತಾಯಿಸಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಹೊನ್ನಡ್ಡಿ ಗ್ರಾಮದ ರೈತರ ಜಮೀನುಗಳಿಗೆ ಭಾನುವಾರ ಭೇಟಿ ನೀಡಿ, ಅಕಾಲಿಕ ಮಳೆಯಿಂದಾಗಿ ಹಾನಿಯಾದ ಉಳ್ಳಾಗಡ್ಡಿ, ಮಾವು, ಟೊಮ್ಯಾಟೊ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ವೀಕ್ಷಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಎನ್.ಡಿ.ಆರ್.ಎಫ್ ಅದು ಇದು ಅಂತ ಕಾಯದೆ ಕೂಡಲೇ ತಾತ್ಕಾಲಿಕ ಪರಿಹಾರ ನೀಡಬೇಕು. ಸಮೀಕ್ಷೆಯ ವರದಿಯ ನಂತರ ಹೆಚ್ಚಿನ ಪರಿಹಾರ ಒದಗಿಸಬೇಕು ಎಂದರು.
ಅಕಾಲಿಕ ಮಳೆ ಮತ್ತು ಆಣೆಕಲ್ಲುಗಳಿಂದ ಬೀದರ್ ಜಿಲ್ಲೆ ಮತ್ತು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಬೆಳೆಗಳು ಹಾಳಾಗಿವೆ. ಹೊನ್ನಡ್ಡಿ ಗ್ರಾಮದಲ್ಲಿ ಜೋಳ ಚಾಪೆ ರೀತಿ ಮಲ್ಕೊಂಡಿದೆ. ಬೀಜದ ಈರುಳ್ಳಿ ಕೂಡ ನೆಲಕ್ಕೆ ಬಿದ್ದಿದೆ. ಕಲ್ಲಂಗಡಿ ಬೆಳೆ ಕೂಡ ಹಾಳಾಗಿದೆ. ಮಾವು, ನೆಲಗಡಲೆ (ಶೇಂಗಾ), ಟೊಮ್ಯಾಟೊ ಸೇರಿದಂತೆ ಅನೇಕ ಬೆಳೆಗಳು ಹಾಳಾಗಿವೆ. ಅಂದಾಜಿನ ಪ್ರಕಾರ ಎರಡು ಸಾವಿರ ಎಕರೆ ಕೃಷಿ ಬೆಳೆ, ಒಂದರಿಂದ ಎರಡು ಸಾವಿರ ಎಕರೆ ತೋಟಗಾರಿಕೆ ಬೆಳೆಗಳು ಹಾಳಾಗಿವೆ ಎಂದರು.
ರೈತರು ಬಹಳಷ್ಟು ಆತಂಕದಲ್ಲಿದ್ದಾರೆ. ಈರುಳ್ಳಿ ಬೆಳೆಯಲು ರೈತರು ಎಕರೆಗೆ 70 ಸಾವಿರಕ್ಕೂ ಹೆಚ್ಚಿನ ಹಣ ಖರ್ಚು ಮಾಡಿದ್ದಾರೆ. ಮುಖ್ಯಮಂತ್ರಿ ಕೂಡಲೇ ತಾವೇ ನೇರವಾಗಿ ರೈತರಿಗೆ ಪರಿಹಾರ ಒದಗಿಸಿಕೊಡುವ ಕೆಲಸ ಮಾಡಬೇಕು. ಯಾವ ಮಂತ್ರಿಗಳು ಕೂಡ ಪರಿಹಾರ ಒದಗಿಸಲಾರರು. ಬೆಳೆ ಹಾನಿಗೆ ಸಂಬಂಧಿಸಿದ ಸಹಾಯವಾಣಿಯನ್ನು ಕೂಡಲೇ ಆರಂಭಿಸಬೇಕು. ರೈತರು ಅಲೆದಾಡುವ ಪರಿಸ್ಥಿತಿ ತರಬಾರದು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾಧ್ಯಮಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರನ್ನು ಒತ್ತಾಯಿಸಿದರು.
ಇದೇ ವೇಳೆ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೂಡಲೇ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ರೈತರು, ಗ್ರಾಮಸ್ಥರು ಇದ್ದರು.
ಇದೇ ವೇಳೆ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೂಡಲೇ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ರೈತರು, ಗ್ರಾಮಸ್ಥರು ಇದ್ದರು.
Discussion about this post