ಕಲ್ಪ ಮೀಡಿಯಾ ಹೌಸ್ | ಬೀದರ್ |
ಎಲ್ಲಿ ಭಕ್ತಿ ಇರುತ್ತದೆ ಅಲ್ಲಿ ಶಕ್ತಿ ಇರುತ್ತದೆ. ಶಕ್ತಿ ಇದ್ದಲ್ಲಿ ಭಯ ಇರುವುದಿಲ್ಲ. ಎಷ್ಟೇ ಸಂಕಷ್ಟದಲ್ಲಿದ್ದಾಗಲೂ ಆ ತಾಯಿಯನ್ನು ನೆನಪಿಸಿಕೊಂಡಾಗ ಎಲ್ಲೋ ಒಂದು ಕಡೆ ದೊಡ್ಡ ಶಕ್ತಿ ಸಿಗುತ್ತದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಮನ್ನಾಎಖೇಳ್ಳಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಬಾಲಮ್ಮದೇವಿ ದೇವಸ್ಥಾನದಲ್ಲಿ ನಾಡಹಬ್ಬ ದಸರಾ ಮಹೋತ್ಸವ ನಿಮಿತ್ತವಾಗಿ ನಡೆಯುತ್ತಿರುವ ‘ಶಕ್ತಿ ಭಕ್ತಿ ದರ್ಶನ ಪ್ರವಚನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೀವಮಾನದಲ್ಲಿ ನಾವು ಯಾವುದನ್ನು ಅಳವಡಿಸಿಕೊಳ್ಳುತ್ತೇವೆ. ಆ ರೀತಿ ನಮ್ಮ ಜೀವನ ನಡೆಯುತ್ತದೆ. ಮನುಷ್ಯ ತನ್ನ ಮನಸ್ಸಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕಾಗಿರುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಕೊರೋನಾ ಮಹಾಮಾರಿಯ ಕಾರಣದಿಂದಾಗಿ ಅನೇಕ ಜಾತ್ರೆಗಳಿಗೆ ತಡೆಬಿದ್ದಿವೆ. ನಮ್ಮ ಭಾಗದಲ್ಲಿ ಬಾಲಮ್ಮಾ ತಾಯಿಯ ದೇವಸ್ಥಾನದಲ್ಲಿ ದಸರಾ ನಿಮಿತ್ತ ಪ್ರವಚನ ಕಾರ್ಯಕ್ರಮಗಳು ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ. ಪುರಾಣ, ಪ್ರವಚನಗಳ ಮೂಲಕ ಅಪಾರ ಜ್ಞಾನ ಪಡೆದುಕೊಳ್ಳಬಹುದಾಗಿದೆ. ದೇವಸ್ಥಾನಗಳಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಅನೇಕ ಮಹತ್ವದ ವಿಷಯಗಳನ್ನು ತಿಳಿದುಕೊಳ್ಳುವ ಮೂಲಕ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕಾಗಿದೆ ಎಂದರು.
ಕಳೆದ ವರ್ಷ ಮೊದಲನೇ ಕೊರೋನಾ ಅಲೆ ಇತ್ತು. ಬಳಿಕ ಎರಡನೇ ಅಲೆ ಬಂತು. ಕೊರೋನಾ ಮೊದಲನೇಯ ಅಲೆಯ ಸಂದರ್ಭದಲ್ಲೇ ಸಿರಾ ಉಪಚುನಾವಣೆಯ ಪ್ರಚಾರದ ವೇಳೆ ನನಗೆ ಕೊರೋನಾ ಪಾಸಿಟಿವ್ ಬಂದಿತ್ತು. ದೇವರ ಆಶಿರ್ವಾದ, ನಿಮ್ಮೆಲ್ಲರ ಶುಭ ಹಾರೈಕೆಯಿಂದ ಕೊರೊನಾದಿಂದ ಹೊರಬಂದಿದ್ದೇನೆ ಎಂದರು.
ಮನ್ನಾಎಖೇಳ್ಳಿಯ ಬಾಲಮ್ಮಾ ತಾಯಿಯ ಶಕ್ತಿ ಅಗಾದವಾಗಿದೆ. ಗ್ರಾಮದ ಹೊರವಲಯದಲ್ಲಿ ಇರುವ ಸುಪ್ರಸಿದ್ಧ ಈ ದೇವಸ್ಥಾನಕ್ಕೆ ಅನೇಕ ವರ್ಷಗಳ ಇತಿಹಾಸವಿದೆ. ಬಾಲಮ್ಮಾ ತಾಯಿಯ ದೇವಸ್ಥಾನದಲ್ಲಿ ಕಳೆದ 12 ವರ್ಷಗಳಿಂದ ಪ್ರವಚನ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಅನೇಕ ಭಕ್ತರು ತಾಯಿಯ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದರು.
ದೇವಸ್ಥಾನವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಕೆಲಸವಾಗಬೇಕಾಗಿದ್ದು, ದೇವಸ್ಥಾನ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡುತ್ತೇನೆ. ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ತಂಗುವ ವ್ಯವಸ್ಥೆಯಾಗಬೇಕಾಗಿದೆ. ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಹಂತಹಂತವಾಗಿ ಮಾಡೋಣ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರವಚನಕಾರರಾದ ಬೇಮಳಖೇಡಾ (ಗೋರ್ಟಾ)ದ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ.ವೇ.ಬ್ರ. ಡಾ.ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಸದಲಾಪೂರ ಹಿರೇಮಠದ ಪೂಜ್ಯ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಹಣಮಂತಪ್ಪ ಡಿ. ಮರಕುಂದಾ, ಮುಖಂಡರಾದ ಅಮೃತರಾವ್ ಚಿಮಕೋಡೆ, ಸಂತೋಷ ಎಸ್ ರಾಸೂರ, ಪಾಂಡುರಂಗ ಕಿರಣ್, ನವಲಿಂಗ ಪಾಟೀಲ್, ಬಾಬುರಾವ್ ಕೊಟಗಾ, ರಮೇಶ ಕ್ಯಾತಾ, ಮಲ್ಲಪ್ಪ ಮನ್ನಾಎಖೇಳ್ಳಿ ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post