ಬೆಂಗಳೂರು: ಕಳೆದ 18 ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಬೃಹನ್ನಾಟಕಕ್ಕೆ ತೆರೆ ಬಿದ್ದಿದ್ದು, ವಿಶ್ವಾಸಮತದಲ್ಲಿ ಸೋಲುವ ಮೂಲಕ ಎಚ್.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಯಾಗಿದ್ದಾರೆ.
ವಿಶ್ವಾಸಮತ ನಿರ್ಣಯದ ಪರವಾಗಿ 99 ಮತಗಳು, ವಿರುದ್ಧವಾಗಿ 105 ಮತಗಳು ದೊರೆಯಿತು. ಸದನದಲ್ಲಿ ಸ್ಪೀಕರ್ ಹೊರತುಪಡಿಸಿ ಒಟ್ಟು 204 ಮಂದಿ ಸದಸ್ಯರು ಹಾಜರಿದ್ದರು. 7-10ನಿಮಿಷದವರೆಗೆ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಪ್ರಸ್ತಾಪದ ಮೇಲೆ ಚರ್ಚೆ ನಡೆಸಿದ ಬಳಿಕ ಸ್ಪೀಕರ್ ರಮೇಶ್ ಕುಮಾರ್ ಅವರ ಸೂಚನೆ ಮೇರೆಗೆ ಸದಸ್ಯರ ತಲೆ ಎಣಿಕೆ ನಡೆಸುವ ಮೂಲಕ ಸದನದಲ್ಲಿ ವಿಶ್ವಾಸಮತ ಯಾಚನೆ ನಡೆಯಿತು.
ಜೆಡಿಎಸ್ ಹಾಗೂ ಕಾಂಗ್ರೆಸ್’ನ ರೆಬಲ್ ಶಾಸಕರು ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ 18 ದಿನಗಳಿಂದ ರಾಜ್ಯ ರಾಜಕೀಯವನ್ನು ಹೊಲಸು ಮಾಡುವಂತಹ ಬೆಳವಣಿಗೆಗಳು ನಡೆದಿದ್ದು, ಬಹುಮತ ಸಾಬೀತು ಮಾಡುವಂತೆ ಮುಖ್ಯಮಂತ್ರಿಗಳಿಗೆ ರಾಜ್ಯಪಾಲರು ಎರಡು ಬಾರಿ ಸೂಚನೆ ನೀಡಿದ್ದರು.
ಆದರೆ, ರಾಜ್ಯಪಾಲರ ಸೂಚನೆಯನ್ನೇ ಉಲ್ಲಂಘನೆ ಮಾಡಿದ್ದು ಕುಮಾರಸ್ವಾಮಿ ಸರ್ಕಾರ ಬಹುಮತ ಸಾಬೀತು ಮಾಡುವುದನ್ನು ಕ್ಷುಲ್ಲಕ ಕಾರಣಗಳನ್ನು ನೀಡಿ ಮುಂದೂಡುತ್ತಾ ಬಂದಿತ್ತು. ಪರಿಣಾಮ ಬಿಜೆಪಿ ರಾಜ್ಯಪಾಲರ ಮೇಲೆ ಒತ್ತಡ ಹೇರುವ ಜೊತೆಯಲ್ಲಿ ಭಾರೀ ಪ್ರತಿಭಟನೆ ನಡೆಸಿತ್ತು.
ನಿನ್ನೆ ತಡರಾತ್ರಿ 12 ಗಂಟೆಯವರೆಗೂ ನಡೆದ ವಿಧಾನಸಭಾ ಕಲಾಪದಲ್ಲಿ ಇಂದು ಅಂದರೆ ಮಂಗಳವಾರ ಸಂಜೆ ಆರು ಗಂಟೆಯೊಳಗೆ ಬಹುಮತ ಸಾಬೀತು ಮಾಡುವಂತೆ ಸಭಾಧ್ಯಕ್ಷ ತಾಕೀತು ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಸಂಜೆ ವಿಧಾನಸಭೆಯಲ್ಲಿ ವಿದಾಯ ಭಾಷಣ ಮಾಡಿದ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಿದರು. ಆದರೆ, ಇದರಲ್ಲಿ ಸೋಲುವ ಮೂಲಕ ಸಮ್ಮಿಶ್ರ ಸರ್ಕಾರ ಪತನಗೊಂಡಿದೆ.
2018ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಹುಮತದ ಸನಿಹಕ್ಕೆ ಬಿಜೆಪಿ ಬಂದು ನಿಂತಿತ್ತು. ಆದರೆ, ಬಹುಮತವಿಲ್ಲದ ಕಾರಣ ಅಧಿಕಾರವನ್ನು ಕೈತಪ್ಪಿಸಿಕೊಂಡಿತ್ತು. ಈ ನಡುವೆಯೇ ತೆರೆ ಮರೆಯಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡ ಜೆಡಿಎಸ್-ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು.
Discussion about this post