ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಮಾರಕ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್’ಡೌನ್ ಘೋಷಣೆ ಮಾಡಿದ್ದರೂ, ಇದನ್ನು ಉಲ್ಲಂಘಿಸಿ ನಗರದ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸಿದ್ದು ಕಂಡು ಬಂದಿತು.
ಬಸವೇಶ್ವರ ಸರ್ಕಲ್ ಬಳಿಯಿರುವ ಮಾರುಕಟ್ಟೆಯನ್ನು ಅಧಿಕಾರಿಗಳು ಮುಚ್ಚಿಸಿದ್ದರು. ಆದರೆ, ನಗರಸಭೆಯ ನಿರ್ದೇಶನವನ್ನು ಉಲ್ಲಂಘಿಸಿ ಚನ್ನಗಿರಿ ಮುಖ್ಯರಸ್ತೆಯಲ್ಲಿ ಮುಂಜಾನೆಯಿಂದಲೇ ರಾಜಾರೋಷವಾಗಿ ತರಕಾರಿ, ಹಣ್ಣು, ಹೂ ವ್ಯಾಪಾರ ನಡೆಯುತ್ತಿತ್ತು.
ನಿನ್ನೆ ರಾತ್ರಿ 12 ಗಂಟೆಯಿಂದಲೇ ದೇಶದಾದ್ಯಂತ ಲಾಕ್’ಡೌನ್ ಘೋಷಣೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಆದೇಶಿಸಿದ್ದರು. ಆದರೆ, ಅಗತ್ಯ ವಸ್ತುಗಳಿಗೆ ಯಾವುದೇ ಕೊರತೆಯಾಗುವುದಿಲ್ಲ ಎಂದವರು ಹೇಳಿದ್ದರೂ ಈ ಕುರಿತಂತೆ ರಾಜ್ಯ ಸರ್ಕಾರವೂ ಸಹ ಯಾವುದೇ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಿಲ್ಲ. ಹೀಗಾಗಿ, ಕಡ್ಡಾಯವಾಗಿ ಲಾಕ್’ಡೌನ್ ಮಾಡಬೇಕಿದ್ದರೂ ಈ ರೀತಿ ನೂರಾರು ಮಂದಿ ಮಾರುಕಟ್ಟೆಯಲ್ಲಿ ಸೇರಿದ್ದು, ಆತಂಕದ ವಿಚಾರವೇ ಹೌದು…
ವ್ಯಾಪಾರ ಮುಚ್ಚುವಂತೆ ನಗರಸಭೆ ವತಿಯಿಂದ ನಿರಂತರವಾಗಿ ಎಚ್ಚರಿಕೆ ಸಂದೇಶ ನೀಡುತ್ತಿದ್ದರೂ ಯಾವುದನ್ನೂ ಕಿವಿಗೆ ಹಾಕಿಕೊಳ್ಳದೇ ವ್ಯಾಪಾರ ಮಾಡುತ್ತಿದ್ದು, ಇವರನ್ನು ಮನೆಗಳತ್ತ ಕಳುಹಿಸಲು ಆಡಳಿತ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಡಬೇಕಾಯಿತು.
ಉಪವಿಭಾಗಾಧಿಕಾರಿ ಸಿಟಿ ರೌಂಡ್ಸ್
ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಲಾಕ್’ಡೌನ್ ಕಟ್ಟುನಿಟ್ಟಿನ ಜಾರಿಗಾಗಿ ಭದ್ರಾವತಿಯಲ್ಲಿ ಸ್ವತಃ ಉಪವಿಭಾಗಾಧಿಕಾರಿ, ನಗರಸಭೆಯ ಆಢಳಿತಾಧಿಕಾರಿ ಡಾ. ಪ್ರಕಾಶ್ ಸಿಟಿ ರೌಂಡ್ಸ್ ನಡೆಸುತ್ತಿದ್ದು, ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸುವಂತೆ ಎಚ್ಚರಿಕೆ ನೀಡುತ್ತಿದ್ದರು.
ಈ ವೇಳೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಅವರು, ಬೆಳಗ್ಗಿನಿಂದಲೂ ಓಡಾಡುತ್ತಿದ್ದೇವೆ. ಒಂದು ಕಡೆ ಮುಚ್ಚಿಸಿದರೆ, ಇನ್ನೊಂದು ಕಡೆ ವ್ಯಾಪಾರ ಆರಂಭಿಸುತ್ತಿದ್ದಾರೆ. ಹೇಳಿ ಹೇಳಿ ಸಾಕಾಗಿದೆ. ಕೇಂದ್ರ ಸರ್ಕಾರ ಜನರ ಆರೋಗ್ಯದ ದೃಷ್ಠಿಯಿಂದಲೇ ಲಾಕ್’ಡೌನ್ ಘೋಷಣೆ ಮಾಡಿದೆ. ಗುಂಪು ಗುಂಪಾಗಿ ಜನ ಸೇರುವುದರಿಂದ ಸೋಂಕು ಹರಡುವ ಅಪಾಯವಿದೆ. ಇದನ್ನು ಜನರು ಅರಿತು ಮನೆಯಲ್ಲಿಯೇ ಇರಬೇಕು ಎಂದರು.
ಒಂದು ಬಡಾವಣೆಯಲ್ಲಿ ಮುಚ್ಚಿಸಿ ಬರುವ ವೇಳೆಗೆ ಇನ್ನೊಂದು ಬಡಾವಣೆಯಲ್ಲಿ ವ್ಯಾಪಾರ ಮಾಡುವುದು, ಹಬ್ಬ ಎಂದು ಗುಂಪು ಸೇರುವುದು ಮಾಡುತ್ತಿದ್ದಾರೆ. ಇದರಿಂದ ಅಪಾಯವೇ ಹೆಚ್ಚು. ಜನರೇ ಅರ್ಥ ಮಾಡಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಕಠಿಣ ಕ್ರಮ ಅನಿವಾರ್ಯ ಎಂದರು.
ಇನ್ನು, ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಕುರಿತಾಗಿ ನಮಗೆ ಯಾವುದೇ ರೀತಿಯಲ್ಲಿ ಅಧಿಕೃತ ಸರ್ಕಾರದಿಂದ ಆದೇಶ ಬಂದಿಲ್ಲ. ಹೀಗಾಗಿ, ವ್ಯಾಪಾರ ವಹಿವಾಟು ನಡೆಸಲು ಅವಕಾಶವಿಲ್ಲ. ಸದ್ಯ ಸಂಪೂರ್ಣ ಲಾಕ್’ಡೌನ್ ಮಾಡಿಸುವುದು ನಮ್ಮ ಕರ್ತವ್ಯ. ಒಂದು ವೇಳೆ ಆದೇಶ ಬಂದಲ್ಲಿ ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಲಾಗುವುದು ಎಂದರು.
ಯುವಕರ ಬೈಕ್, ಇಸ್ಪೀಟ್, ಒಸಿ ಹಾವಳಿ
ಸಂಪೂರ್ಣ ಲಾಕ್’ಡೌನ್ ಇದ್ದರೂ ಸಹ ನಗರದಲ್ಲಿ ಹಲವು ಪೋಲಿ ಯುವಕರು ರಾಜಾರೋಷವಾಗಿ ಬೈಕ್’ನಲ್ಲಿ ಅನಾವಶ್ಯಕವಾಗಿ ಸುತ್ತಾಡುವುದು, ಖಾಲಿ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುವುದು ಕಂಡುಬಂದಿದೆ. ಅಲ್ಲದೇ, ಹೊಸಮನೆ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಜನರು ಗುಂಪು ಗುಂಪಾಗಿ ಸೇರಿ ಇಸ್ಪೀಟ್, ಓಸಿ ಆಡುವುದು ಕಂಡುಬಂದಿದ್ದು, ಪೊಲೀಸರು ಇದರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕಿದೆ.
Get in Touch With Us info@kalpa.news Whatsapp: 9481252093
Discussion about this post