ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿರಸಿ ತಾಲ್ಲೂಕಿನ ಮಠದೇವಳದ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ Sonda Swarnavalli Mutt ಫೆ.22ರಂದು ಶಿಷ್ಯ ಸ್ವೀಕಾರ ಮಹೋತ್ಸವವನ್ನು ಆಯೋಜಿಸಲಾಗಿದೆ ಎಂದು ವಕೀಲ ಅಶೋಕ್ ಜಿ.ಭಟ್ ಹೇಳಿದರು.
ಅವರು ಇಂದು ಗುಂಡಪ್ಪಶೆಡ್ನಲ್ಲಿ ಇರುವ ಸ್ವರ್ಣವಲ್ಲೀ ಮಹಾಸಂಸ್ಥಾನದ ಶಾಖಾ ಮಠದಲ್ಲಿ ಆಯೋಜಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಫೆ.18ರಿಂದ 22ರವರೆಗೆ ಶಿಷ್ಯ ಸ್ವೀಕಾರ ಮಹೋತ್ಸವದ ಅಂಗವಾಗಿ ಹಲವು ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯುತ್ತಿವೆ. ಮುಖ್ಯವಾಗಿ 22ರಂದು ಸ್ವರ್ಣವಲ್ಲೀ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವ ಆಯೋಜಿಸಲಾಗಿದೆ ಎಂದರು.
ಶಿಷ್ಯ ಸ್ವೀಕಾರ ಎಂಬುವುದು ವಿಶಿಷ್ಠವಾದುದು, ಯಾವುದೇ ಸಂಸ್ಥಾನಗಳಲ್ಲಿ ಅಥವಾ ಮಠಗಳಲ್ಲಿ ತಮ್ಮ ಉತ್ತರಾಧಿಕಾರಿಗಳನ್ನು ನಿರ್ಧರಿಸಲು ಪೀಠಾಧಿಪತಿಗಳು ತೀರ್ಮಾನ ಮಾಡುತ್ತಾರೆ. ಇದೇ ರೀತಿ ಶ್ರೀಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ತಮ್ಮ ದಿವ್ಯ ಸಂಕಲ್ಪದಂತೆ ಮುಂದಿನ ಉತ್ತರಾಧಿಕಾರಿಳನ್ನಾಗಿ ಯಲ್ಲಾಪುರ ತಾಲ್ಲೂಕಿನ ಈರಾಪುರದ ವೇದ ಬ್ರಹ್ಮ ನಾಗರಾಜ ಭಟ್ಟ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಲು ನಿರ್ಧರಿಸಿದ್ದಾರೆ. ಅವರ ನಂತರ ನಾಗರಾಜ ಭಟ್ಟರು ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಗಳಾಗಿ ಮುಂದುವರೆಯುತ್ತಾರೆ ಎಂದರು.
Also read: ಆಚಾರ್ಯ ಮಧ್ವರ ಸಂದೇಶಗಳು ಎಲ್ಲ ಕಾಲಕ್ಕೂ ಅನ್ವಯ: ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅಭಿಮತ
22ರಂದು ನಡೆಯುವ ಕಾರ್ಯಕ್ರಮದಲ್ಲಿ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ವಿರಚಿತ ಯೋಗವಾಸಿಷ್ಠ ಪ್ರಥಮ ಸಂಪುಟ ಕೂಡ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮದಲ್ಲಿ ಹಲವು ಸ್ವಾಮೀಜಿಗಳು ಉಪಸ್ಥಿತರಿರುತ್ತಾರೆ. ಹಾಗೆಯೇ ಕೇಂದ್ರ ಸಚಿವ ಪ್ರಹ್ಲಾದ ಜೋಷಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ಇವರೊಂದಿಗೆ ಮಂತ್ರಿಗಳು ಜನಪ್ರತಿನಿಧಿಗಳು ವಿದ್ವಾಂಸರು ಮತ್ತು ಗಣ್ಯರು ಕೂಡ ಭಾಗವಹಿಸಲಿದ್ದಾರೆ ಎಂದರು.
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನವು ಅತ್ಯಂತ ಪ್ರಾಚೀನವಾದುದು, ಶಂಕರಾಚಾರ್ಯ ಪರಂಪರೆಯ ಇತಿಹಾಸವನ್ನು ಹೊಂದಿದೆ. 1300 ವರ್ಷಗಳ ಇತಿಹಾಸ ಇದಕ್ಕಿದೆ. ಅತ್ಯಂತ ಸಾಮಾಜಿಕ ಕಾರ್ಯಕ್ರಮಗಳನ್ನು, ಚಟುವಟಿಕೆಗಳನ್ನು ನಡೆಸುತ್ತ ಬಂದಿದೆ. ಇಂತಹ ಇತಿಹಾಸವುಳ್ಳ ಮಠಕ್ಕೆ ಒಳ್ಳೆಯ ಉತ್ತರಾಧಿಕಾರಿ ಶಿಷ್ಯರ ಅಗತ್ಯ ಇದ್ದು, ಈಗಿರುವ ಶ್ರೀಗಳ ನಿರ್ಣಯದಂತೆ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಮಠದ ಭಕ್ತರಾದ ಡಾ. ಬಾಲಕೃಷ್ಣ ಹೆಗಡೆ ಮಾತನಾಡಿ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಪರಿಸರ ಪ್ರೇಮಿಗಳು ಹಲವು ಪರಿಸರ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಸಾರ್ವಜನಿಕ ಕ್ಷೇತ್ರ ಸಂಕಷ್ಟಗಳಿಗೆ ಸ್ಪಂಧಿಸುತ್ತಾರೆ. ಅವರನ್ನು ಹಸಿರು ಸ್ವಾಮಿ ಎಂದೇ ಕರೆಯುತ್ತಾರೆ. ಇಂತಹ ಮಹಾನ್ ವ್ಯಕ್ತಿತ್ವದ ಶ್ರೀಗಳು ತಮ್ಮದೇ ದಾರಿಯಲ್ಲಿ ಸಾಗುವ ಶಿಷ್ಯರನ್ನು ನಿರ್ಣಯಿಸಿದ್ದಾರೆ, ಅವರ ಜೊತೆಗೆ ಅಪಾರ ಶಿಷ್ಯ ಭಕ್ತರ ದಂಡೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಲಕ್ಷ್ಮೀ ನಾರಾಯಣ ಜೋಷಿ, ಡಿ.ಎಂ. ಹೆಗಡೆ, ದೇವೇಂದ್ರ ಭಟ್, ಪಿ.ಪಿ.ಹೆಗಡೆ, ಬಾಲಾಜಿ ದೇಶಪಾಂಡೆ, ಮೋಹನ್ ಹೆಗಡೆ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post