ಕಲ್ಪ ಮೀಡಿಯಾ ಹೌಸ್ | ಕಲಬುರಗಿ |
ಬಿಜೆಪಿ #BJP ಪಕ್ಷ ಅಲುಗಾಡುತ್ತಿರುವ ವಿಕೆಟ್ ಆಗಿದ್ದು, ಈ ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ #PriyankKharge ಲೇವಡಿ ಮಾಡಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಪ್ರತಿಪಕ್ಷಗಳನ್ನು ಬಿಜೆಪಿ ಎಷ್ಟೇ ಹೆದರಿಸಿದರೂ ಈ ಬಾರಿ 400 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ. ಅದು ಅಲುಗಾಡುತ್ತಿರುವ ವಿಕೆಟ್ ಎಂದರು.
ಬಿಜೆಪಿಯವರು ಕೇಂದ್ರಿಯ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ನಮ್ಮನ್ನು ಹೆದರಿಸುತ್ತಿದ್ದು, 1823 ಕೋಟಿ ರೂ. ಪಾವತಿ ಸಂಬಂಧ ಹೊಸದಾಗಿ ನೋಟಿಸ್ ನೀಡಿದ್ದಾರೆ ಎಂದರು.
ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟದ ಪಕ್ಷಗಳನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ನಮ್ಮ ಪಕ್ಷಗಳ ಖಾತೆ ಜಪ್ತಿ ಮಾಡುವ ಮೂಲಕ ತೆರಿಗೆ ಭಯೋತ್ಪಾದನೆ ಮಾಡುತ್ತಿದೆ ಎಂದು ಆರೋಪಿಸಿದರು.
ಐಟಿ, ಇಡಿ, ಸಿಬಿಐ ಬಿಜೆಪಿಯ ಹೊಸ ಘಟಕಗಳು. ಈ ಹೊಸ ಘಟಕಗಳಿಂದ ಪ್ರತಿಪಕ್ಷದವರಿಗೆ ಪ್ರೇಮ ಪತ್ರಗಳು ಬರುತ್ತಿವೆ. ಯಾವ ಆಧಾರದ ಮೇಲೆ ಇಲಾಖೆ ನೋಟಿಸ್ ನೀಡಿದೆ ಎಂಬುದು ಗೊತ್ತಿಲ್ಲ. ಪಕ್ಷದ ಇತಿಹಾಸದಲ್ಲಿ ಎಂದೂ ಕೂಡಾ ಈ ರೀತಿ ಆಗಿರಲಿಲ್ಲ. ಐಟಿ ಇಲಾಖೆ ರೂ. 14 ಲಕ್ಷ ದೇಣಿಗೆಯ ಅಸೆಸ್ ಮೆಂಟ್ ಸಿಗುತ್ತಿಲ್ಲ ಎಂದು ರೂ. 1,823.08 ಕೋಟಿ ತೆರಿಗೆ ಪಾವತಿ ಅಂತ ನೋಟಿಸ್ ನೀಡಿದೆ. 14 ಲಕ್ಷ ರೂ. ಬಗ್ಗೆ ದಾಖಲೆ ನೀಡಿದ್ದೇವೆ, ಆದರೂ ಕೂಡ ದಂಡ ಕಟ್ಟಲು ಹೇಳಿದ್ದಾರೆ ಎಂದು ಕಿಡಿ ಕಾರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















