ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮನ್ನಾಎಖೇಳ್ಳಿ ಗ್ರಾಮದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸಿಕೊಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ಏಳನೇ ದಿನದ ವಿಧಾನಸಭೆ ಕಲಾಪದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಮನ್ನಾಎಖೇಳ್ಳಿಯಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸುವ ಕುರಿತು ಮಂಗಳವಾರ ನಡೆದ ಕಲಾಪದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಯನ್ನು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಕೇಳಿದರು. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ಸಂಪೂರ್ಣ ಹಳ್ಳಿಗಳಿಂದ ಕೂಡಿದ ಕ್ಷೇತ್ರವಾಗಿದೆ. ಸುಮಾರ 80 ಹಳ್ಳಿಗಳು ಬೀದರ್ ತಾಲೂಕಿಗೆ ಒಳಪಟ್ಟರೆ, 20 ಹಳ್ಳಿಗಳು ಚಿಟಗುಪ್ಪಾ ತಾಲೂಕಿಗೆ ಒಳಪಟ್ಟಿವೆ. ಸುಮಾರು 55 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಒಂದೇ ಒಂದು ಅಗ್ನಿಶಾಮಕ ಠಾಣೆಗಳು ಇರುವುದಿಲ್ಲ.
ಅಗ್ನಿಶಾಮಕ ಠಾಣೆಗಳು ಸುಮಾರು 25-30 ಕೀ.ಮಿ ದೂರದಲ್ಲಿದ್ದು, ಚಿಟಗುಪ್ಪಾಕ್ಕೆ ಹೋದರೆ 30 ಕಿ.ಮೀ ದೂರವಾಗುತ್ತದೆ. ಇನ್ನೂ ಬೀದರ್ ಗೆ ಹೋದರೆ 35-40 ಕಿ.ಮೀ ದೂರ ಹೋಗಬೇಕಾಗಿದೆ. ಮನ್ನಾಎಖೇಳ್ಳಿ ಬಹಳ ದೊಡ್ಡ ಗ್ರಾಮವಾಗಿದೆ. ಇದು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಗ್ರಾಮವಾಗಿದ್ದು, 30 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಈ ಗ್ರಾಮವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂಬ ಮನವಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಇನ್ನೂ ಸುಮಾರು ಎರಡು ತಿಂಗಳಲ್ಲೇ ಈ ಭಾಗದ 10-15 ಕಬ್ಬಿನ ತೋಟಗಳು ಸುಟ್ಟು ಭಸ್ಮವಾಗಿವೆ. ಆಗಾಗಿ ಅಗ್ನಿ ಶಾಮಕ ಠಾಣೆ ನಿರ್ಮಿಸಿ ಕೊಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.
ಇದೇ ವೇಳೆ ಉತ್ತರ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರರವರು, ಬೀದರ್ ಜಿಲ್ಲೆಯ ಆರು ತಾಲೂಕುಗಳಲ್ಲಿ ಈಗಾಗಲೇ ಅಗ್ನಿಶಾಮಕ ಠಾಣೆಗಳಿವೆ. 24 ಕಿ.ಮೀ ಹಂತರದ ಚಿಟಗುಪ್ಪಾ, 27 ಕಿ.ಮೀ ಹಂತರದ ಹುಮನಾಬಾದ್ ನಲ್ಲಿ ಕೂಡ ಇವೆ. ನಿಯಮಗಳ ಅನ್ವಯ ನಗರ ವ್ಯಾಪ್ತಿಯಲ್ಲಿ ಪ್ರತಿ ಹತ್ತು ಚದರ್ ಕಿ.ಮೀಟರ್ ಗೆ ಒಂದು, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಐವತ್ತು ಚದರ್ ಕಿ.ಮೀಟರ್ ಗೆ ವೊಂದರಂತೆ ಅಗ್ನಿಶಾಮಕ ಠಾಣೆಗಳನ್ನು ನಿರ್ಮಿಸಬೇಕಿದೆ.
ನಗರ ಪ್ರದೇಶಗಳಲ್ಲಿ ಗರಿಷ್ಟ ಐದರಿಂದ ಏಳು ನಿಮಿಷಗಳಲ್ಲಿ ತಲುಪುವ ಅಂತರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಪತ್ತು ನಿಮಿಷಗಳೊಳಗೆ ಹೋಗಿ ತಲುಪುವ ಅಂತರವಿರಬೇಕು. ಆದ್ದರಿಂದ ಸದ್ಯಕ್ಕೆ ಮನ್ನಾಎಖೇಳ್ಳಿಯಲ್ಲಿ ಅಗ್ನಿಶಾಮಕ ಠಾಣೆ ನಿರ್ಮಿಸುವುದು ಕಷ್ಟವಾಗುತ್ತದೆ. ಕೈಗಾರಿಕೆಗಳು ಅಭಿವೃದ್ಧಿಯಾದರೇ ನೀಡಬಹುದು ಎಂದರು.
ಸಚಿವರ ಉತ್ತರದಿಂದ ತೃಪ್ತರಾಗದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಅಗ್ನಿಶಾಮಕ ವಾಹನಗಳು ಹಳ್ಳಿಗಳಿಗೆ ಇಪತ್ತು ನಿಮಿಷದಲ್ಲೇ ತಲುಪುತ್ತದೆ ಎನ್ನುತ್ತಿರಿ. ಆದರೆ ಅದು ಸಾಧ್ಯವಾಗದ ಮಾತು. ಬೀದರ್ ಗೆ ಬಂದರೆ ಮೂವತ್ತು ಕಿ.ಮೀ. ದೂರ ಬರಬೇಕು ಅದೇಗೆ ತಲುಪುತ್ತವೆ. ಎಷ್ಟು ಹಾನಿಗಳನ್ನು ನೀವು ತಡೆಗಟ್ಟಿದ್ದಿರಿ.
ಮನ್ನಾಎಖೇಳ್ಳಿಯಲ್ಲಿ ದೊಡ್ಡ ಪೊಲೀಸ್ ಠಾಣೆಯಿದೆ ಅಲ್ಲೇ ಅಗ್ನಿಶಾಮಕ ಠಾಣೆ ಮಾಡಬಹುದು. ಕೆ.ಕೆ.ಆರ್.ಡಿ.ಬಿಯಲ್ಲಿ ಹಣವಿದೆ ಅದನ್ನು ಬೇಕಾದರು ನಾವು ನೀಡುತ್ತೇವೆ. ಅಗ್ನಿಶಾಮಕ ಠಾಣೆಗಳಿಲ್ಲದೇ 15-20 ಕಬ್ಬಿನ ಗದ್ದೆಗಳು ಹಾಳಾಗಿವೆ ಅದರ ವರದಿ ತರಿಸಿಕೊಂಡಾದರು ಅಗ್ನಿಶಾಮಕ ಠಾಣೆ ನೀಡಿ ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಜಮೀನು ಮೂಂಜುರಾತಿಗೆ ಈಗಾಗಲೇ ಪತ್ರ ವ್ಯವಹಾರವನ್ನು ಇಲಾಖೆಯ ವತಿಯಿಂದ ಮಾಡಲಾಗಿದೆ. ಹಿರಿಯ ಅಧಿಕಾರಿಗಳೊಂದಿಗೆ ಕುಳಿತು ಮಾತನಾಡಿ ಕ್ರಮ ಕೈಗೊಳ್ಳುತ್ತೇವೆಂದು ಭರವಸೆ ನೀಡಿದರು.
ಬೀದರ್ ನಲ್ಲೇ ಆಯುಷ್ ವಿಶ್ವವಿದ್ಯಾಲಯ ನಿರ್ಮಿಸಿ:
ಸಚಿವ ಡಾ. ಕೆ. ಸುಧಾಕರ್ ರವರು ಮಂಡಿಸಿದ ಆಯುಷ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ವಿಧೆಯಕದ ವಿಷಯವಾಗಿ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಬೀದರ್ ಜಿಲ್ಲೆ ಗಡಿ ಜಿಲ್ಲೆಯಾಗಿದೆ. ಇಲ್ಲಿ ಕೂಡ ಆಯುಷ್ ವಿಶ್ವವಿದ್ಯಾಲಯ ಸ್ಥಾಪನೆಗೆ ಒಳ್ಳೆಯ ವಾತವರಣವಿದೆ. ಬೀದರ್ ಜಿಲ್ಲೆಯ ಯಾವುದೇ ಭಾಗದಲ್ಲಾದರೂ ಆಯುಷ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕೆಂದು ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post