ಕಲ್ಪ ಮೀಡಿಯಾ ಹೌಸ್ | ನರಸಿಂಗಪುರ(ಮಧ್ಯಪ್ರದೇಶ) |
ದೇಶ ಕಂಡ ಮಹಾನ್ ಸಂತರಲ್ಲಿ ಒಬ್ಬರಾದ ದ್ವಾರಕಾಪೀಠ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಸ್ವಾಮೀಜಿಯವರು(99) ಇಂದು ದೇಹತ್ಯಾಗ ಮಾಡಿದ್ದಾರೆ.
ಹೃದಯಾಘಾತಕ್ಕೆ ಒಳಗಾದ ಅವರು, ಇಂದು ಮಧ್ಯಾಹ್ನ 3.50ಕ್ಕೆ ತಮ್ಮ ನರಸಿಂಗಪುರದ ಆಶ್ರಮದಲ್ಲೇ ಕೊನೆಯುಸಿರೆಳೆದಿದ್ದಾರೆ.
ಶಂಕರಾಚಾರ್ಯರು 1924 ರಲ್ಲಿ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ದಿಘೋರಿ ಗ್ರಾಮದಲ್ಲಿ ಪೋತಿರಾಮ್ ಉಪಾಧ್ಯಾಯರಾಗಿ ಜನಿಸಿದರು. ಅವರು 9ನೇ ವಯಸ್ಸಿನಲ್ಲಿ ದೇವರ ಅನ್ವೇಷಣೆಯಲ್ಲಿ ತಮ್ಮ ಮನೆಯನ್ನು ತೊರೆದರು. ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದ ಅವರು ಎರಡು ಬಾರಿ ಜೈಲು ವಾಸ ಅನುಭವಿಸಿದ್ದರು. 1981ರಲ್ಲಿ ಸನ್ಯಾಸ ಸ್ವೀಕರಿಸಿ ಶಂಕರಾಚಾರ್ಯರು ಎಂದು ನಾಮಾಂಕಿತಗೊಂಡರು. ಇತ್ತೀಚೆಗಷ್ಟೇ ಸ್ವಾಮಿಗಳ 99ನೆಯ ವರ್ಧಂತಿಯನ್ನು ಆಚರಿಸಲಾಗಿತ್ತು.
ಅಯೋಧ್ಯೆಯಲ್ಲಿಯೇ ರಾಮಮಂದಿರ ನಿರ್ಮಾಣವಾಗಬೇಕು ಎಂಬ ಹೋರಾಟದಲ್ಲಿ ಇವರ ಪಾತ್ರ ಮಹತ್ವದ್ದಾಗಿತ್ತು. ಇದಕ್ಕಾಗಿ ನಡೆದ ಹೋರಾಟದಲ್ಲಿ ಇವರು ನಿರಂತರವಾಗಿ ಪಾಲ್ಗೊಂಡು, ದೇಶದಾದ್ಯಂತ ಜನರನ್ನು ಜಾಗೃತಿ ಮೂಡಿಸಿದ್ದರು.
ಶ್ರೀಗಳವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಮುಖಂಡ ರಾಹುಲ್ ಗಾಂಧಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post