1990
ನಾನಾಗ ಕಬ್ಬನ್ ಪಾರ್ಕ್ ಠಾಣೆಯ ಎಸ್ಐ ತುರ್ತು ವೈರ್ಲೆಸ್ ಕರೆಗೆ ಓಗೊಟ್ಟು ಕಮಿಷನರ್ ಕಚೇರಿಗೆ ದೌಡಾಯಿಸಿದೆ. ಅಂದಿನ ಪೊಲೀಸ್ ಕಮಿಷನರ್ ಆರ್. ರಾಮಲಿಂಗಂ ಅವರ ಎದುರು ಎಸಿಪಿ, ಇನ್ಸ್ಪೆಕ್ಟರ್ ಮತ್ತು ಎಸ್ಐವೊಬ್ಬರು ಕೈಕಟ್ಟಿಕೊಂಡು ತಲೆಬಗ್ಗಿಸಿ ನಿಂತಿದ್ದರು. ಅವರನ್ನು ಕಮಿಷನರ್ ಏಕ್ಕಾಮಕ್ಕ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದರು. ನಾನು ಚೇಂಬರ್ನೊಳಗೆ ಕಾಲಿಡುತ್ತಲೇ ಫೈಲ್ವೊಂದನ್ನು ನನ್ನ ಕೈಗೆ ಕೊಟ್ಟು `ಮಿ. ಅಶೋಕ್ ಕುಮಾರ್, ಐದು ದಿನದೊಳಗೆ ನೀವು ಈ ಪ್ರಕರಣ ಭೇದಿಸಬೇಕು.’ ಎಂದು ಆರ್ಡರ್ ಮಾಡಿದರು.
ಕುತೂಹಲದಿಂದ ಆ ಫೈಲ್ ಓಪನ್ ಮಾಡಿದೆ. ಮೊದಲ ಪುಟದಲ್ಲೇ ಸ್ಫುರದ್ರೂಪಿ ತರುಣನೊಬ್ಬನ ನಗ್ನಚಿತ್ರಗಳು ರಾರಾಜಿಸುತ್ತಿದ್ದವು. ಒಂದು ಫೋಟೋದಲ್ಲಂತೂ ತನ್ನ ಗುಪ್ತಾಂಗವನ್ನು ಹಿಡಿದುಕೊಂಡು ಆ ಯುವಕ ಉನ್ಮಾದ ಸ್ಥಿತಿಯಲ್ಲಿದ್ದ. ಇದೆಂಥಾ ಕೇಸಪ್ಪ ಎಂದು ಬೆರಗಿನಿಂದ ಆ ಫೋಟೋಗಳನ್ನೇ ದಿಟ್ಟಿಸುತ್ತ ನಿಂತಿದ್ದೆ. ಆಗ ಕಮಿಷನರ್ ` ಫೋಟೋ ನೋಡಿದ್ದು ಸಾಕು. ಈಗ ತನಿಖೆ ಶುರು ಮಾಡಿ.’ ಎಂದು ವ್ಯಂಗ್ಯದ ದನಿಯಲ್ಲಿ ಹೇಳುತ್ತ ಅಲ್ಲಿದ್ದ ಅಧಿಕಾರಿಗಳನ್ನು ಉದ್ದೇಶಿಸಿ `ನೀವೆಲ್ಲ ಯೂಸ್ಲೆಸ್. ಈಗ ನೋಡಿ ಅಶೋಕ್ಕುಮಾರ್ ಈ ಕೇಸನ್ನು ಹೇಗೆ ಹ್ಯಾಂಡಲ್ ಮಾಡ್ತಾರೆ ಅಂತ,’ ಎಂದರು.
ನಾನು ಆ ಫೈಲ್ ಹಿಡಿದು ಹೊರಬಂದೆ. ನನ್ನ ಹಿಂದೆ ಹೊರಬಂದ ಇನ್ಸ್ಪೆಕ್ಟರ್ ನನ್ನ ಬಳಿ ಬಂದು `ಏನು ಅಶೋಕ್ ಐದೇ ದಿನದಲ್ಲಿ ಈ ಕೇಸ್ ಟ್ರೇಸ್ ಮಾಡಿ ಬಿಡ್ತೀರಾ?’ ಎಂದು ಗೇಲಿ ಮಾಡಿದರು. ನಾನು ತಾಳ್ಮೆಯಿಂದ `ನೋಡೋಣ ಸರ್. ಮೊದಲು ಫೈಲ್ ಸ್ಟಡಿ ಮಾಡ್ತೀನಿ’ ಎಂದೆ. ನನ್ನ 35 ವರ್ಷಗಳ ಸರ್ವೀಸ್ನಲ್ಲಿ ಸಾಕಷ್ಟು ಬಾರಿ ಸಹೋದ್ಯೋಗಿಗಳ ಅಸೂಯೆ ಎದುರಿಸಿದ್ದೇನೆ. ಟೀಕೆಗಳಿಗೆ ಸಚಿನ್ ತೆಂಡೂಲ್ಕರ್ ಹೇಗೆ ಬ್ಯಾಟ್ನಿಂದ ಉತ್ತರ ಕೊಡುತ್ತಿದ್ದರೋ ನಾನು ಹಾಗೆಯೇ ಕೇಸ್ ಪತ್ತೆ ಮಾಡುವ ಮೂಲಕ ಉತ್ತರಿಸುತ್ತ ಬಂದಿದ್ದೆ.
ಬಸವೇಶ್ವರ ವೃತ್ತದ ಬಹುಮಹಡಿ ಕಟ್ಟಡದಲ್ಲಿ ಪ್ರಸಿದ್ಧ ಚೈನೀಸ್ ರೆಸ್ಟೋರೆಂಟ್ ಇತ್ತು. ಅಲ್ಲಿ 24 ವರ್ಷದ ಅಜಯ್ ಸಿಂಗ್ ಎಂಬ ಷೆಪ್ (ಬಾಣಸಿಗ) ಇದ್ದ. ಆತನ ತಂದೆ ದಿಲ್ಲಿಯ ಖ್ಯಾತ ಪಂಚತಾರಾ ಹೋಟೆಲೊಂದರಲ್ಲಿ ಮುಖ್ಯ ಷೆಫ್ ಆಗಿದ್ದ. ಆತ ಎಷ್ಟು ಬೇಡಿಕೆಯ ವ್ಯಕ್ತಿಯೆಂದರೆ ಇಂದಿರಾ ಗಾಂಧಿ ಕುಟುಂಬ. ರಾಷ್ಟ್ರಪತಿ ಕುಟುಂಬಗಳಿಗೂ ಬೇಕಾದವನಾಗಿದ್ದ. ತನ್ನ ಮಗ ಅಜಯ್ಗೆ ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಓದಿಸಿ ತರಬೇತಿಗಾಗಿ ಬೆಂಗಳೂರಿನ ರೆಸ್ಟೋರೆಂಟ್ಗೆ ಸೇರಿಸಿದ್ದ.
ಈ ನಡುವೆ, ಅಜಯ್ ವಾಸಿಸುತ್ತಿದ್ದ ಮನೆಯ ಎದುರು ಸುಮಾರು 45 ವರ್ಷದ ಮಹಿಳೆ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಹಿರಿಯವಳು ಬಿಕಾಂ ಫೈನಲ್, ಕಿರಿಯವಳು ಪಿಯುಸಿ ಓದುತ್ತಿದ್ದಳು. ಇಬ್ಬರೂ ಸುರಸುಂದರಿಯರಾಗಿದ್ದರು. ಆಕೆ ಬ್ಯಾಂಕೊಂದರ ಮ್ಯಾನೇಜರ್ ಆಗಿದ್ದಳು. ಗಂಡ ಸೌದಿಯಲ್ಲಿದ್ದ. ಹೀಗಿರುತ್ತ, ಹಿರಿಯ ಮಗಳಿಗೂ ಅಜಯ್ಗೂ ಲವ್ ಉಂಟಾಯಿತು. ಇದು ಎರಡೂ ಕುಟುಂಬಗಳಿಗೆ ಗೊತ್ತಾಗಿ ಎಂಗೇಜ್ಮೆಂಟ್ ದಿನ ನಿಗದಿ ಮಾಡಿದರು. ಇನ್ನೇನು ನಿಶ್ಚಿತಾರ್ಥಕ್ಕೆ ಕ್ಷಣಗಣನೆ ನಡೆಯುತ್ತಿದ್ದಾಗ ಆಘಾತಕಾರಿ ಘಟನೆಯೊಂದು ನಡೆದು ಹೋಯಿತು.
ಆ ದಿನ ಅಜಯ್ ಯಥಾಪ್ರಕಾರ ಬೆಳಗ್ಗೆ 11 ಗಂಟೆ ಸುಮಾರಿಗೆ ರೆಸ್ಟೋರೆಂಟ್ಗೆ ಹೋಗಿದ್ದ. ಕೌಂಟರ್ ಬಳಿ ಇದ್ದ ನೋಟಿಸ್ ಬೋರ್ಡ್ ನೋಡಲು ಯುವಕ, ಯುವತಿಯರು ಮುಗಿಬಿದ್ದಿದ್ದರು. ಇದೇನಿದು ಎಂದು ಅಜಯ್ ಅವರ ನಡುವೆ ದಾರಿ ಮಾಡಿಕೊಂಡು ಬೋರ್ಡ್ ನೋಡಿದಾಗ ಮೂರ್ಛೆ ಹೋಗುವುದೊಂದು ಬಾಕಿ. ಆತನ ನಾನಾ ಭಂಗಿಯ ನಗ್ನಾವತಾರದ ಚಿತ್ರಗಳನ್ನು ಅಂಟಿಸಲಾಗಿತ್ತು! ನಾಚಿಕೆಯಿಂದ ಮನೆಗೆ ವಾಪಸ್ ಬಂದವನು ಕೆಲವು ದಿನ ಕೆಲಸಕ್ಕೆ ಹೋಗದೆ ತಲೆಮರೆಸಿಕೊಂಡ.
ಇದರ ಬೆನ್ನಿಗೇ, ಆತ ಪ್ರೀತಿಸುತ್ತಿದ್ದ ಹುಡುಗಿ ಓದುತ್ತಿದ್ದ ಪ್ರತಿಷ್ಠಿತ ಕಾಲೇಜಿನ ಪ್ರಿನ್ಸಿಪಾಲರಿಗೆ ಒಂದು ಲಕೋಟೆ ತಲುಪಿತು. ಅವರು ನನ್ ಆಗಿದ್ದರು. ಲಕೋಟೆ ಬಿಚ್ಚಿ ನೋಡಿದಾಗ ಅಜಯ್ನ ಬೆತ್ತಲೆ ಚಿತ್ರಗಳು ಅವರನ್ನು ಬೆಚ್ಚಿ ಬೀಳಿಸಿತು. ಸಾಲದೆಂಬಂತೆ ಒಂದು ಪತ್ರವನ್ನೂ ಟೈಪ್ ಮಾಡಿ ಇಡಲಾಗಿತ್ತು. `ನಿನಗಷ್ಟೇ ಅಲ್ಲ. ನಿನ್ನ ಅಮ್ಮನಿಗೂ ಪ್ರೀತಿ ಕೊಡಲು ನಾನು ಸಮರ್ಥ ಎನ್ನುವುದಕ್ಕೆ ಈ ಚಿತ್ರಗಳೇ ಸಾಕ್ಷಿ’ ಎಂದು ತಾನು ಮದುವೆಯಾಗಲಿರುವ ಹುಡುಗಿಗೆ ಹೇಳುವ ಧಾಟಿಯಲ್ಲಿ ಆ ಪತ್ರ ಇತ್ತು. ಇನ್ನೊಂದು ಲಕೋಟೆ ಆ ಹುಡುಗಿಯ ತಾಯಿ ಕೆಲಸ ಮಾಡುವ ಬ್ಯಾಂಕ್ನ ಅಸಿಸ್ಟೆಂಟ್ ಮ್ಯಾನೇಜರ್ ಹೆಸರಿಗೆ ಕಳಿಸಲಾಗಿತ್ತು. ಅದರಲ್ಲಿ ನಗ್ನ ಚಿತ್ರಗಳ ಜತೆಗೆ, ಆ ಹುಡುಗಿಯ ತಾಯಿ ಜತೆ ಸರಸವಾಡುವ ಬಯಕೆ ಉಂಟಾಗಿದೆ ಎಂಬ ಒಕ್ಕಣೆಯ ಪತ್ರ ಬರೆಯಲಾಗಿತ್ತು. ಆ ಕುಟುಂಬದ ಮಾನಹಾನಿ ಮಾಡಲೆಂದೇ ದುಷ್ಕರ್ಮಿ ಇತರರ ವಿಳಾಸಕ್ಕೆ ಲಕೋಟೆ ಕಳಿಸಿದ್ದ. ಇಷ್ಟೇ ಅಲ್ಲ, ಆ ಮಹಿಳೆಯ ಮನೆಯ ದೂರವಾಣಿ ಸಂಖ್ಯೆಯನ್ನು ನಗರದ ಎಲ್ಲ ಪ್ರಮುಖ ಪಬ್ಗಳ ಶೌಚಾಲಯಗಳ ಗೋಡೆಯ ಮೇಲೆ ಗೀಚಿ, ಸುಂದರ ಯುವತಿಯರಿಗಾಗಿ ಸಂಪರ್ಕಿಸಿ ಎಂದು ಬರೆಯಲಾಗಿತ್ತು.
ನಿಮ್ಮ ಮನೆಯಲ್ಲಿ ವೇಶ್ಯೆಯರು ಸಿಕ್ತಾರಂತೆ ಹೌದಾ? ಗಂಟೆಗೆ ಎಷ್ಟು ಚಾರ್ಜ್ ಮಾಡ್ತಾರೆ? ಮನೆಯ ವಿಳಾಸ ಕೊಡ್ತೀರಾ? ಎಂದೆಲ್ಲ ಆ ಮನೆಗೆ ಫೋನ್ಗಳ ಸುರಿಮಳೆ ಬರಲಾರಂಭಿಸಿದವು. ಇದರಿಂದ ಬೇಸತ್ತ ಅವರು ಫೋನ್ ರಿಸೀವರ್ ಎತ್ತಿಡಬೇಕಾಯಿತು. ಗಂಡ ಸೌದಿಯಿಂದ ಫೋನ್ ಮಾಡಬಹುದು ಎಂದು ಹತ್ತು ನಿಮಿಷ ರಿಸೀವರ್ ಸುಸ್ಥಿತಿಯಲ್ಲಿಟ್ಟರೆ ಸಾಕು, ಪಡ್ಡೆಗಳ ಪೋಲಿ ಕರೆಗಳು ಕಂಗೆಡಿಸುತ್ತಿದ್ದವು. ಕೊನೆಗೆ ಅವರು ಶಾಶ್ವತವಾಗಿ ಫೋನ್ ಕಟ್ ಮಾಡಿಬಿಟ್ಟರು. ಮನೆಗೆ ಫೋನ್ ಮಾಡಿ ಸುಸ್ತಾದ ಗಂಡ ಗಾಬರಿಯಿಂದ ವಿದೇಶದಿಂದ ಧಾವಿಸಿ ಬರಬೇಕಾಯಿತು!
(ಮುಂದುವರೆಯುವುದು)
Discussion about this post