ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ : ಇಂದಿನಿಂದ ತಾಲೂಕಿನ ಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆ ಆರಂಭವಾಗಿದ್ದು, ದೇವಾಲಯದ ಪ್ರಾಂಗಣದಲ್ಲಿ ದೇವಿಯ ಪೂಜೆಗೆ ಮಾತ್ರ ಅವಕಾಶ ನೀಡಲಾಗಿದ್ದು, ಮೆರವಣಿಗೆ, ಸಿಡಿ ಹಾಗೂ ಅಂಗಡಿ ಮುಂಗಟ್ಟುಗಳನ್ನು ದೇವಸ್ಥಾನದ ಆವರಣದಲ್ಲಾಗಲಿ ಅಥವಾ ತುಮುಲುನಲ್ಲಾಗಲಿ ನಿರ್ಬಂಧಿಸಿದೆ ಎಂದು ತಹಶೀಲ್ದಾರ್ ಎನ್, ರಘುಮೂರ್ತಿ ಸ್ಪಷ್ಟನೆ ನೀಡಿದರು.
ತಾಲ್ಲೂಕಿನ ತಳಕು ಹೋಬಳಿಯ ಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆಯು ಸೆ.13ರಿಂದ 15ರವರೆಗೆ ನಡೆಯಲಿದ್ದು, ಈ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆಗೆ ಹೊರಭಾಗದಿಂದ ವಾಹನಗಳಲ್ಲಿ ಜನರನ್ನು ಕರೆದೊಯ್ಯುವುದನ್ನು ನಿಷೇಧಿಸಿದೆ.
ದೇವಾಲಯದ ಪ್ರಾಂಗಣದಲ್ಲಿ ದೇವಿಯ ಪೂಜೆ ಹೊರತುಪಡಿಸಿ ಯಾವುದೇ ಮೆರವಣಿಗೆ, ಸಿಡಿ, ದೇವಸ್ಥಾನದ ಆವರಣದಲ್ಲಾಗಲಿ ಅಥವಾ ತುಮುಲುನಲ್ಲಾಗಲಿ ಅಂಗಡಿ ಮುಂಗಟ್ಡುಗಳನ್ನು ನಿಭಂದಿಸಲಾಗಿದೆ. ಜಾತ್ರೆ ನಡೆಯುವ 8 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಧ್ಯ ಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ದೇವಸ್ಥಾನದ ಪೂಜೆಗೆ ಬರುವ ಭಕ್ತಾದಿಗಳು ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿಸಿಕೊಂಡಿರಬೇಕು. ಮಾಸ್ಕ್ ಧರಿಸಿರಬೇಕು. ಒಂದು ವೇಳೆ ಕೊರೋನಾ ನಿಯಮಗಳನ್ನು ನಿರ್ಲಕ್ಷಿಸಿದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಹಾಗೂ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಇರುವಂತಹ ಜಗನ್ಮಾತೆ ಅಧಿದೇವತೆ ಗೌರಸಮುದ್ರ ಮಾರಮ್ಮನ ದೇವಿಯ ಭಕ್ತಾಧಿಗಳು ಜಾತ್ರೆಗೆ ಆಗಮಿಸದೆ ತಾವೆಲ್ಲಿದ್ದಿರೋ ಅಲ್ಲೆ ಪ್ರಾರ್ಥಿಸಿ, ಜಗನ್ಮಾತೆ ಮಾರಮ್ಮ ದೇವಿ ಸವಾಂತರಯಾಮಿ ಸಕಲರಿಗೂ ಮಂಗಳವನ್ನುಂಟು ಮಾಡುತ್ತಾಳೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೋವಿಡ್ಗೆ ಸಂಬಂಧಿಸಿದ ಮಾರ್ಗ ಸೂಚಿ ಜಾರಿಯಲ್ಲಿದೆ. ಅದರಂತೆ ಜಾತ್ರೆ, ಸಭೆ ಸಮಾರಂಭಗಳಿಗೆ ಅವಕಾಶವಿಲ್ಲ. ದೇವಿಯ ಜಾತ್ರಾ ಮಹೋತ್ಸವವನ್ನು ವ್ವೆಭವದಿಂದ ಆಚರಿಸಬೇಕಿತ್ತು. ಆದರೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ಜಿಲ್ಲಾಡಳಿತ, ಈ ಬಗ್ಗೆ ತೀರ್ಮಾನಿಸಿ, ಭಕ್ತ ಸಮೂಹದ ಪ್ರಾಣ ರಕ್ಷಣೆ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಕಳೆದ ಕೋವಿಡ್ ಎರಡನೇ ಅಲೆಯಲ್ಲಿ ಅದೆಷ್ಟೋ ಭಕ್ತ ಸಮೂಹ ಮತ್ತು ನಮ್ಮ ಸಹೋದರ ಸಹೋದರಿಯರು ಕಣ್ಮರೆಯಾಗಿದ್ದಾರೆ. ಮುಂದೆ ಮೂರನೇ ಅಲೆಯ ಕಾರ್ಮೋಡ ನಮ್ಮ ಮುಂದಿದೆ. ಈ ಭಾಗಕ್ಕೆ ಮೂರನೇ ಅಲೆಯನ್ನು ಪ್ರತಿಬಂಧಿಸುವ ಕಂಕಣವನ್ನು ಚಳ್ಳಕೆರೆ ತಾಲ್ಲೂಕು ಆಡಳಿತ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸೆ.14ರ ಜಾತ್ರೆಯನ್ನು ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಆದ್ದರಿಂದ ಭಕ್ತಾಧಿಗಳು ಗೌರಸಮುದ್ರ ಮಾರಮ್ಮ ದೇವಿಯನ್ನು ತಾವೆಲ್ಲಿದ್ದಿರೋ ಅಲ್ಲೆ ಪ್ರಾರ್ಥಿಸಿ, ಆರಾಧಿಸಿ, ತಮ್ಮೆಲ್ಲರ ಅಮೂಲ್ಯವಾದ ಜೀವ ನಮಗೆ ಬಹು ಮುಖ್ಯ. ಕೋವಿಡ್ ಕೊನೆಯಾದಲ್ಲಿ ಮುಂದಿನ ವರ್ಷ ದೇವಿಯ ಜಾತ್ರೆಯನ್ನು ವೈಭವದಿಂದ ಆಚರಿಸೋಣ ಎಂದು ಮನವಿ ಮಾಡಿದ್ದಾರೆ.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post