ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಆಧುನಿಕ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸುವುದರಿಂದ ನಮ್ಮ ನೆನಪಿನ ಶಕ್ತಿ ಆಲೋಚನೆ ಮಾಡುವ ವಿಧಾನ ಹಾಗೂ ಬುದ್ದಿ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇವೆ ನಾಗೇನಹಳ್ಳಿ ಚಲುಮೇರುದ್ರಸ್ವಾಮಿಮಠದ ಶ್ರೀ ಬಸವಕಿರಣ ಸ್ವಾಮೀಜಿ ಹೇಳಿದರು.
ಚಳ್ಳಕೆರೆ ತಾಲೂಕಿನ ಕಾಮಸಮುದ್ರದ ತಿಪ್ಪೇಸ್ವಾಮಿ ಅವರ ಮನೆಯಲ್ಲಿ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಉಪನ್ಯಾಸ ನೀಡಿದ ಅವರು, ಮಾನವ ಅಂಗೈಯಲ್ಲಿ ಜಗತ್ತನ್ನು ನೋಡುವ ಸಾಧನ ಸಂಶೋಧನೆ ಮಾಡಿದ್ದಾನೆ. ತಂತ್ರಜ್ಞಾನವು ಬೆಳೆದಂತೆ ಮಾನವ ತತ್ವ ಜ್ಞಾನದಿಂದ ವಿಮುಖನಾಗುತ್ತಿದ್ದಾನೆ ಎಂದು ಅವರು ಆತಂಕ ವಕ್ತಪಡಿಸಿದರು.
ಸಮಾಜದಲ್ಲಿ ಮೊದಲಿನಕ್ಕಿಂತಲೂ ಹೆಚ್ಚು ಅಪರಾಧ ಪ್ರಕರಣಗಳನ್ನು ಕಾಣುತ್ತಿದ್ದೇವೆ. ತಂತ್ರಜ್ಞಾನದಿಂದ ನಾವು ಕೆಲವು ಸೌಕರ್ಯಗಳನ್ನು ಹೊಂದಬಹುದು. ಆದರೆ ಮಾನವನಿಗೆ ನಿಜವಾದ ಸಂತೋಷ, ನೆಮ್ಮದಿ, ಶಾಂತಿ ತತ್ವಜ್ಞಾನದಿಂದ ಮಾತ್ರ ಅನುಭವಿಸಲು ಸಾಧ್ಯ. ತಂತ್ರಜ್ಞಾನವೇ ಎಲ್ಲವನ್ನು ತಾನಾಗಿಯೇ ತಿಳಿಸಲು ಸಾಧ್ಯವಿಲ್ಲ. ಮನುಷ್ಯ ಅದರಲ್ಲಿ ಫಿಡ್ ಮಾಡಿದ ವಿಷಯವನ್ನು ಮಾತ್ರ ಹೇಳುವುದು. ಕಾರಣ ಮ್ಯಾನ್ ಪವರ್ ತಂತ್ರಜ್ಞಾನಕ್ಕೆ ಮುಖ್ಯವಾಗಿರುತ್ತೆ ಎಂಬುದನ್ನು ಮೊದಲು ನಾವು ಅರಿತಿರಬೇಕು ಎಂದು ಹೇಳಿದರು.
ಅಂತರಂಗವನ್ನು ಅವಲೋಕನ ಮಾಡಲು ಯಾವ ಸಾಧನದಿಂದಲೂ ಸಾಧ್ಯ ಇಲ್ಲ. ನಮ್ಮ ಬೇಕು ಬೇಡ ಹಾಗೂ ನಮ್ಮ ಬಾವನೆಗಳನ್ನು ಅರ್ಥೈಸಿಕೊಂಡು ಸ್ಪಂದಿಸಲು ಜಗತ್ತಿನ ಯಾವ ವಿಜ್ಞಾನಿಯು ಇದೂವರೆಗೆ ಉಪಕರಣ ಸಂಶೋಧನೆ ಮಾಡಲು ಸಾಧ್ಯವಾಗಿಲ್ಲ. ಹಾಗೂ ಉಪಕರಣದ ಅವಶ್ಯಕತೆ ಇಲ್ಲ. ಅದಕ್ಕೆ ಬೇಕಿರುವುದು ಅಂತಃಕರಣ. ಅದು ಯಾವ ಬಜಾರದಲ್ಲಿಯೂ ಸಿಗುವ ವಸ್ತು ಅಲ್ಲ. ಪರಿಶುದ್ದ ಮನದಲ್ಲಿ ಮಾತ್ರ ಅಂತಃಕರಣವೆಂಬುದು ಹುಟ್ಟಿ ಅರಳಲು ಸಾದ್ಯ. ತಾಯಿ ಹಾಗೂ ಗುರುವಿನಲ್ಲಿ ಅಂತಃಕರಣ ನೋಡಲು ಸಾಧ್ಯ. ಅಂತಃಕರಣಿಗಳು ತಮ್ಮ ಬೇಕು ಬೇಡಗಳಿಗೆ ಸ್ಪಂದಿಸುತ್ತಾ ಆತಂಕವನ್ನು ದೂರ ಮಾಡುವರು ಎಂದು ವಿವರಿಸಿದರು.
ಆಧುನಿಕ ಜಗತ್ತಿನಲ್ಲಿ ಸಂಬಂಧಗಳಿಗಿಂತ ಹಣ, ಅಧಿಕಾರ, ಸ್ಥಾನಮಾನಕ್ಕೆ ಬಹಳ ಬೆಲೆ ಕೊಡುವರು. ಇದರಿಂದ ಮೌಲ್ಯಗಳು ಆದರ್ಶಗಳು ಮರೆಯಾಗುತ್ತಿವೆ. ಆದರ್ಶ ಮೌಲ್ಯಗಳು ಇಲ್ಲದ ಸಮಾಜ ಎಂದರೆ ರಕ್ತ ಮಾಂಸ ಇಲ್ಲದ ದೇಹದಂತೆ. ಆಡಂಬರ ವಿಜೃಂಭಿಸಿದಾಗ ಮೌಲ್ಯಗಳು ಮೂಲೆ ಗುಂಪಾಗುತ್ತವೆ. ಆಗ ಸಮಾಜ ಬರಡಾಗುತ್ತದೆ. ಎಲ್ಲ್ಲಾ ಸಮಾಜ ಸುಧಾರಕರು ಮೌಲ್ಯಗಳನ್ನು ಬೋಧಿಸುತ್ತಾ ಬಂದಿದ್ದಾರೆ. ನಮ್ಮ ಘನತೆ, ವ್ಯಕ್ತಿತ್ವ ಉನ್ನತವಾದ ಮೌಲ್ಯಗಳಿಂದ ನಿರ್ಮಾಣ ಆಗುತ್ತದೆಯೇ ವಿನಹ ಬಾಹ್ಯ ಪರಿಕರಗಳಿಂದಲ್ಲ. ತಮ್ಮ ಘನತೆ ಗೌರವಗಳನ್ನು ಸತ್ಯ ಶುದ್ಧ ನಡೆ ನುಡಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಹೆಚ್ಚಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಹಾಲಗೊಂಡನಹಳ್ಳಿ ಪ್ರಗತಿಪರ ರೈತರು, ರುದ್ರಮುನಿಯಪ್ಪ, ನಾಗರಾಜಪ್ಪ, ಮಲ್ಲೇಶಪ್ಪ, ತಿಪ್ಪೇಸ್ವಾಮಿ, ಭಜನ ಮಂಡಳಿ ಸದಸ್ಯರು ಹಾಗೂ ಗಾಮಸ್ಥರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post