ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಭಾರತದ ಗುರು ಪರಂಪರೆ ಇಡೀ ಜಗತ್ತಿನಲ್ಲಿ ಮಾದರಿ. ಶಿಕ್ಷಣ ನೀಡುವ ಜೊತೆಗೆ ಸಂಸ್ಕಾರ,ಪರಂಪರೆ, ಆತ್ಮವಿಶ್ವಾಸ ಜೀವನ ಮೌಲ್ಯಗಳನ್ನು ಅಪಾರವಾಗಿ ತಿಳಿಸುವ ಗುರುಗಳಿಗೆ ಇಂದಿಗೂ ಅಪಾರ ಬೆಲೆ ಇದೆ. ಉತ್ತಮ ಶಿಕ್ಷಕರು ಸಮಾಜದ ಬಹುದೊಡ್ಡ ಆಸ್ತಿ. ಶಿಕ್ಷಕರು ಜಗತ್ತಿನಲ್ಲಿ ಅತಿ ಹೆಚ್ಚು ಗೌರವಕ್ಕೆ ಪಾತ್ರ ವಾಗುವ ವೃತ್ತಿ ಮತ್ತು ಸಂಸ್ಕೃತಿ ಎಂದು ಉಪನ್ಯಾಸಕರು, ಸಂಸ್ಕೃತಿ ಚಿಂತಕರು, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಹರದನಹಳ್ಳಿ ಪ್ರಾಥಮಿಕ ಮತ್ತು ಪ್ರೌಢಶಾಲಾ1999ರ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚಾಮರಾಜನಗರ ಸಮೀಪವಿರುವ ಹರದನಹಳ್ಳಿಗೆ ಐತಿಹಾಸಿಕ,ಪೌರಾಣಿಕ, ಸಾಂಸ್ಕೃತಿಕ, ಸುದೀರ್ಘ ಇತಿಹಾಸವಿದೆ. ಹರದನಹಳ್ಳಿ ಜನ ಪ್ರೀತಿಗೆ ಹೆಸರಾದವರು. ಹರದನಹಳ್ಳಿಯ ಜನರಿಗೆ ರಕ್ತದಲ್ಲೇ ಸಾಂಸ್ಕೃತಿಕ ಮೌಲ್ಯ, ಗುರುಪರಂಪರೆಯ ಭಕ್ತಿ ಇದೆ.ಶ್ರೀ ದಿವ್ಯಲಿಂಗೇಶ್ವರ, ಶ್ರೀ ವೇಣುಗೋಪಾಲಸ್ವಾಮಿ, ಆಂಜನೇಯ,ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಗುರು ಪರಂಪರೆಯನ್ನು ನೀಡಿದೆ.1999 ರಲ್ಲಿ ಹರದನಹಳ್ಳಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹಿರಿಯ ವಿದ್ಯಾರ್ಥಿಗಳು ಸಮಾಜದಲ್ಲಿ ವಿವಿಧ ವೃತ್ತಿಯನ್ನು ಅನುಸರಿಸುತ್ತಿರುವ ವಿದ್ಯಾರ್ಥಿಗಳು ತಮಗೆ ಬೋಧಿಸಿದ 17 ಶಿಕ್ಷಕರನ್ನು ವಿವಿಧ ಭಾಗಗಳಿಂದ ಕರೆತಂದು ಗೌರವಿಸಿ ಆನಂದ ಪಟ್ಟ ಕ್ಷಣ ಮರೆಯಲಾಗದು. ನಿಮ್ಮ ಈ ಗುರು ಪ್ರೀತಿಗೆ ಗುರುಗಳ ಶುಭ ಹಾರೈಕೆ,ಆಶೀರ್ವಾದ ಸದಾ ಇರುತ್ತದೆ. ವಿದ್ಯಾರ್ಥಿಗಳ ಜೀವನ ಬರೀ ಶಿಕ್ಷಣ ಪಡೆಯುವುದೇ ಅಲ್ಲ. ಜೀವನವನ್ನು ಪ್ರೀತಿಸುವುದು. ಸ್ನೇಹ ಬೆಳೆಸುವುದು. ಗುರು ಪರಂಪರೆಗೆ ಗೌರವಿಸುವುದು ಹಾಗೆಯೇ ಅತ್ಯಮೂಲ್ಯವಾದ ಆತ್ಮವಿಶ್ವಾಸದ ಆನಂದವನ್ನು ಪಡೆಯುವ ಕಾರ್ಯವನ್ನು ಗುರುವಂದನೆಯ ಮೂಲಕ ಮಾಡಿರುವ ಎಲ್ಲ ವಿದ್ಯಾರ್ಥಿಗಳಿಗೂ ಧನ್ಯವಾದಗಳು ಅರ್ಪಿಸುತ್ತಾ ವಿದ್ಯಾರ್ಥಿ ಜೀವನದ ಸ್ನೇಹ ಅಂತಸ್ತಿನ ಸ್ನೇಹವಲ್ಲ,ಅಧಿಕಾರದ ಸ್ನೇಹವಲ್ಲ,ಅದು ಪ್ರೀತಿ, ಕರುಣೆ, ವಿಶ್ವಾಸ,ನಂಬಿಕೆ, ಮಾನವೀಯತೆ ಶಕ್ತಿ, ಆತ್ಮೀಯತೆಯ ಸ್ನೇಹ ಸಂಭಂದ.ಸ್ನೇಹವನ್ನು ಮುಂದುವರಿಸಿ ಗಟ್ಟಿಗೊಳಿಸಿಕೊಳ್ಳಿ. ದ್ವೇಷ, ಸೂಯೆ,ಅಹಂಕಾರವನ್ನು ಬಿಡೋಣ. ಸರ್ವರನ್ನು ಪ್ರೀತಿಸೋಣ. ಗುರು ಭಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ಸಮಾಜವನ್ನು ಕೌಟುಂಬಿಕ ಪ್ರಜ್ಞೆಯನ್ನು ಬೆಳೆಸುವ ಕೆಲಸವನ್ನು ಮಾಡೋಣ ಎಂದು ಋಗ್ವೇದಿ ತಿಳಿಸಿದರು.
ಹರದನಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ 80 ವರ್ಷದ ಶ್ರೀ ವೆಂಕಟರಮಣಗೌಡರವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ತಮಗೆ ಬೋಧಿಸಿದ ಶಿಕ್ಷಕರನ್ನು ಕರೆತಂದು ಗೌರವಿಸುವ ಮೂಲಕ ಬಹುದೊಡ್ಡ ಕೆಲಸವನ್ನು ಮಾಡಿದ್ದಾರೆ. ನಿಮ್ಮ ಶ್ರಮಕ್ಕೆ ನಿಮ್ಮ ಕಾರ್ಯಕ್ಕೆ ನಮ್ಮ ಅಭಿನಂದನೆಗಳು. ಶುಭ ಹಾರೈಕೆಗಳು ಸದಾ ಇರುತ್ತದೆ. ಗುರುವೇ ಸರ್ವಸ್ವವಾಗಿದೆ ಗುರುಗಳಿಗೆ ಧನ್ಯವಾದಗಳು ಅರ್ಪಿಸುವ ಮೂಲಕ ನಿಮ್ಮ ಗೌರವವನ್ನು ಸಲ್ಲಿಸಿರುವುದು ನಮಗೆಲ್ಲರಿಗೂ ಬಹಳ ಸಂತೋಷವನ್ನು ತಂದಿದೆ. ಹತ್ತಾರು ವರ್ಷಗಳ ಹಿಂದೆ ಬೋಧಿಸಿದ ನೆನಪು ನಮಗೆ ಮತ್ತೆ ಮತ್ತೆ ಮೇಲಕ್ಕೆ ಹಾಕಲು ಸಾಧ್ಯವಾಗಿದೆ ಎಂದರು.
ಚಾಮರಾಜನಗರ ಡಯಟ್ ನ ಹಿರಿಯ ಉಪನ್ಯಾಸಕರಾಗಿ ನಿವೃತ್ತಿ ಹೊಂದಿದ ಟಿ ವಿ ಸಿದ್ದರಾಜಾಚಾರಿ ಮಾತನಾಡಿ ಹರದನಹಳ್ಳಿಯ ವಿದ್ಯಾರ್ಥಿಗಳ ಗುಣ ಮರೆಯಲಾಗದು. ಬಹಳ ಭಕ್ತಿ, ಶ್ರದ್ಧೆ,ಪ್ರೀತಿ,ಪ್ರೇಮ ಹಾಗೂ ಸರಳತೆಯ ಪ್ರತಿರೂಪವಾಗಿ ವಿದ್ಯಾರ್ಥಿಗಳು ರೂಪಿತವಾಗಿರುವುದು ಬಹಳ ಹೆಮ್ಮೆ.ಇಂದು ಅನೇಕ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತಾವೆಲ್ಲರೂ ಅಭಿನಂದನೆಗೆ ಅರ್ಹರು ಎಂದು ತಿಳಿಸಿದರು.
ಹರದನಹಳ್ಳಿ ಪ್ರೌಢಶಾಲಾಯಲ್ಲಿ ಸೇವೆ ಸಲ್ಲಿಸಿದ ಗಣಿತ ಶಿಕ್ಷಕ ಮಂಜುನಾಥ ಮಾತನಾಡಿ ವಿದ್ಯಾರ್ಥಿಗಳ ಈ ಮಾದರಿ ಕಾರ್ಯಕ್ರಮ ಬಹಳ ಅಚ್ಚು ಕಟ್ಟುತನದಿಂದ ಕೊಡಿದೆ. ಗೌರವ ತರುವ ಕೆಲಸವನ್ನು ಬಹು ಮಾಡಿದ್ದೀರಿ. ಸನ್ಮಾನಿಸುವ ಮೂಲಕ ಶಿಕ್ಷಕರೆಲ್ಲರೂ ಒಂದೆಡೆ ಸೇರುವ ಹಾಗೆ ಎಲ್ಲ ವಿದ್ಯಾರ್ಥಿಗಳ ಅಭಿವೃದ್ಧಿ ಮತ್ತು ಸಾಧನೆಯನ್ನು ಕಾಣುವ ಅವಕಾಶ ಮಾಡಿಕೊಟ್ಟಿರುವ ಈ ಗುರುವಂದನಾ ಕಾರ್ಯಕ್ರಮ ಸಂತೋಷ ಉಂಟು ಮಾಡಿದೆ ಎಂದರು.
ಹಿರಿಯ ಶಿಕ್ಷಕರದ ಹನುಮಂತ ನಾಯಕ, ಹೊಂಗನೂರು ನಂಜಯ್ಯ,ಉತ್ತುವಳ್ಳಿ ರಂಗಸ್ವಾಮಿ, ರಾಮಸಮುದ್ರದ ವೆಂಕಟೇಶ್, ಚಾಮರಾಜನಗರದ ಟೈಟಸ್, ಮಲ್ಲಿಕಾರ್ಜುನ್,ಜಗದೀಶ್ ಕುಮಾರ್, ಶಿಕ್ಷಕಿಯರಾದ ಶ್ರೀಮತಿ ರಾಜೇಶ್ವರಿ, ನಾಗರತ್ನ ಪಾರ್ವತಿ, ಪುಟ್ಟನಂಜಮ್ಮ, ನಾಗರತ್ನಮ್ಮ, ನಳಿನಿ ಮುಂತಾದ 17 ಶಿಕ್ಷಕರನ್ನು ವಿದ್ಯಾರ್ಥಿಗಳು ತುಂಬು ಹೃದಯದಿಂದ ಭಕ್ತಿ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಹರದನಹಳ್ಳಿ ಲತಾ,ಬಸವರಾಜು,ವಿಶಾಲಾಕ್ಷಿ , ಲಕ್ಷಮ್ಮ, ಗಿರಿ ಗೌಡ,ಮಹೇಶ, ಇಮ್ರಾನ್ ಪಾಷಾ,ಜಹೀರ್, ಸುಜಾತ,ಮಮತಾ, ಲಕ್ಷ್ಮಮ್ಮ, ಭಾನುಮತಿ, ರಂಗಪ್ಪ, ಸುರೇಶ, ರಾಘವೇಂದ್ರ, ಕುಮಾರ್, ರಾಜೇಂದ್ರ,ಬಸವರಾಜು, ಮುಂತಾದ ನಲವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
17 ಶಿಕ್ಷಕರ ಅಭಿನಂದನಾ ಸಮಾರಂಭ ವಿದ್ಯಾರ್ಥಿಗಳ ಅಭಿನಂದನ ನುಡಿ,ಶಿಕ್ಷಕರ ಶುಭ ಹಾರೈಕೆ,ಸಾಂಸ್ಕೃತಿಕ ಕಾರ್ಯಕ್ರಮ ಕಣ್ಣಲ್ಲಿ ನೀರನ್ನು ಉಂಟು ಮಾಡಿ ಭಾವಸಂಗಮದ, ಹೃದಯ ಪ್ರೀತಿಯ ಕಾರ್ಯಕ್ರಮವಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















