ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಪುಸ್ತಕಗಳು ಆತ್ಮ ಸಂತೋಷವನ್ನು ನೀಡುತ್ತವೆ. ಪುಸ್ತಕಗಳ ಅಧ್ಯಯನದಿಂದ ಮನಸ್ಸು ಒತ್ತಡರಹಿತವಾಗಿ ದೇಹದ ಮೇಲೆ ಸಕಾರಾತ್ಮಕವಾದ ಪರಿಣಾಮವನ್ನು ಬೀರುತ್ತವೆ. ಪುಸ್ತಕಗಳೇ ಜಗತ್ತಿನ ಅತ್ಯುತ್ತಮ ಸ್ನೇಹಿತ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ, ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ ಋಗ್ವೇದಿ ಯೂತ್ ಕ್ಲಬ್ ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪುಸ್ತಕ ದಿನಾಚರಣೆ ಹಾಗೂ ಪುಸ್ತಕಗಳ ಮಹತ್ವ ಕುರಿತ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರತಿ ಮನೆಯಲ್ಲಿ ಪುಸ್ತಕ ಬಂಡಾರಕ್ಕಾಗಿ ಮೀಸಲಿಡಬೇಕು. ಪುಸ್ತಕಗಳ ಅನಾವರಣದಿಂದ ಮಕ್ಕಳಲ್ಲಿ ಪುಸ್ತಕ ಪ್ರೀತಿ ಹೆಚ್ಚುತ್ತದೆ. ಪುಸ್ತಕವನ್ನು ಓದುವ ಹವ್ಯಾಸ ಬೆಳೆಸಿದಾಗ ಜ್ಞಾನಾರ್ಜನೆ ಹೆಚ್ಚಿ ವ್ಯಕ್ತಿತ್ವ ನಮ್ಮ ಅರಿವಿಲ್ಲದೆ ವಿಕಾಸವಾಗುತ್ತದೆ. ಜ್ಞಾನ ಲೋಕದಲ್ಲಿರುವ ಜಗತ್ತಿನಲ್ಲಿ ಪುಸ್ತಕಗಳೇ ಆಸ್ತಿಯಾಗಬೇಕು. ಪುಸ್ತಕಗಳ ಅಧ್ಯಯನದಿಂದ ಭಾವ ಚಿಂತನೆ ಹೆಚ್ಚಾಗಿ ಕವಿಯಾಗಿ, ಸಾಹಿತಿಯಾಗಿ, ನಾಟಕಕಾರರಾಗಿ, ಗಾಯಕರಾಗಿ ಸೃಜನಶೀಲತೆ ಬೆಳೆಯಬಹುದು.
ಶಾಲಾ ಕಾಲೇಜುಗಳು, ಸಾರ್ವಜನಿಕ ಗ್ರಂಥಾಲಯಗಳು, ಪಂಚಾಯತಿಗಳು, ವಿಶ್ವವಿದ್ಯಾಲಯಗಳಲ್ಲಿ ಅಪಾರ ಗ್ರಂಥ ಬಂಡಾರಗಳೇ ಇದೆ. ಅವುಗಳ ಸದುಪಯೋಗಕ್ಕೆ ಜಾಗೃತಿಯ ಅಗತ್ಯವಿದೆ. ಪ್ರತಿಯೊಬ್ಬರು ಒಂದು ಗಂಟೆಗಳ ಕಾಲ ಪುಸ್ತಕದ ಅಧ್ಯಯನವನ್ನು ಮಾಡಿದಾಗ ರೋಗಗಳಿಂದ ದೂರ ವಾಗ ಬಹುದು ಎಂದು ತಿಳಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಮತಿ ಹೆಚ್ ಎಂ ಲತಾ ಹರದನಹಳ್ಳಿ ಮಾತನಾಡಿ ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಕ್ಲಬ್ ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಪುಸ್ತಕ ಪ್ರದರ್ಶನವನ್ನು ಮಾಡಿರುವುದು ಹೆಮ್ಮೆಯ ಸಂಗತಿ.ನೂರಾರು ಪುಸ್ತಕಗಳು ಸಂಗ್ರಹ ಮಾಡುವ ಮೂಲಕ ಮಕ್ಕಳಿಗೆ ನೀಡುವ ಕಾರ್ಯವನ್ನು ಮಾಡೋಣ. ಪುಸ್ತಕದ ಪ್ರೀತಿಯನ್ನು ಬೆಳೆಸೋಣ ಎಂದರು.
ಕಾರ್ಯಕ್ರಮದಲ್ಲಿ ಲಕ್ಷಮ್ಮ, ಗಿರೀಗೌಡ, ಬಸವರಾಜು ಪಿ ಕುಮಾರ ರಾಜೇಂದ್ರ ರವಿ, ಶ್ರಾವ್ಯ ಋಗ್ವೇದಿ, ಸಾನಿಕ, ಕುಸುಮ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















