ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಒಳಮೀಸಲಾತಿ ಪ್ರಕಟಣೆ Internal reservation ಸರ್ಕಾರದಿಂದ ದಲಿತರಿಗೆ ಆಗುತ್ತಿರುವ ಮೋಸ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ K S Eshwarappa ಗುಡುಗಿದ್ದಾರೆ.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಈ ಸರ್ಕಾರ ಬಂದಾಗಿನಿಂದ ಒಂದಲ್ಲಾ ಒಂದು ರೀತಿಯಲ್ಲಿ ದಲಿತರಿಗೆ ಮತ್ತು ಹಿಂದುಳಿದ ವರ್ಗಕ್ಕೆ ಮೋಸ ಮಾಡುತ್ತಾ ಬಂದಿದೆ. 165 ಕೋಟಿ ರೂ. ವೆಚ್ಚದಲ್ಲಿ ಮಾಡಿದ ಕಾಂತ್ರಾಜ್ ವರದಿಯನ್ನು ಮೂಲೆಗುಂಪು ಮಾಡಿದೆ. 2ನೇ ವರದಿಗೆ 120 ಕೋಟಿ ರೂ. ಖರ್ಚು ಮಾಡಿತ್ತು. ಅದು ಜಾರಿಗೆ ಬಂದಿಲ್ಲ. ನಂತರ ನ್ಯಾಯಮೂರ್ತಿ ನಾಗಮೋಹನ್ದಾಸ್ ನೇತೃತ್ವದಲ್ಲಿ 180 ಕೋಟಿ ರೂ. ವೆಚ್ಚದಲ್ಲಿ ಒಳಮೀಸಲಾತಿ ಜಾರಿಗೆ ವರದಿಗೆ ನೀಡುವಂತೆ ಸೂಚಿಸಲಾಗಿತ್ತು. ಆದನ್ನು ಈಡೇರಿಸಲಿಲ್ಲ. ನಿನ್ನೆ ಮುಖ್ಯಮಂತ್ರಿಗಳು ತರಾತುರಿಯಲ್ಲಿ 5.5, 4.5 ಮತ್ತು ಶೇ.5ರ ಒಳಮೀಸಲಾತಿಯನ್ನು ಘೋಷಿಸಿದೆ. ಸರಿಯಾದ ಮಾರ್ಗದರ್ಶನ ಪಡೆಯದೇ ಕೋರ್ಟ್ ಆದೇಶವನ್ನು ಧಿಕ್ಕರಿಸಿ ಏಕಾಏಕಿ ಘೋಷಣೆ ಮಾಡಿದೆ.
ಇದು ಇನ್ನಷ್ಟು ಗೊಂದಲಕ್ಕೀಡುಮಾಡಿದ್ದು, ನಿನ್ನೆಯಿಂದಲೇ ಅನೇಕ ದಲಿತ ಮುಖಂಡರು ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ತಮ್ಮ ಅವಧಿಯಲ್ಲಿ ಒಳಮೀಸಲಾತಿಯ ಘೋಷಣೆ ಮಾಡಿದ್ದೇನೆ ಎಂದು ತೋರ್ಪಡಿಕೆಗೆ ಕ್ರೆಡಿಟ್ ಪಡೆಯಲು ಸರಿಯಾದ ಮಾನದಂಡ ಇಲ್ಲದ ಇದನ್ನು ಘೋಷಣೆ ಮಾಡಿ ಮುಖ್ಯಮಂತ್ರಿಗಳು ಸಿಹಿ ತಿಂದಿದ್ದಾರೆ. ಅವರೇ ನಾಲ್ಕುಜನ ಕುಳಿತುಕೊಂಡು ಮಾಡಿದ ಈ ಘೋಷಣೆಯನ್ನು ದಲಿತ ಮುಖಂಡರೇ ಸ್ವೀಕಾರ ಮಾಡುತ್ತಿಲ್ಲ. ಸರ್ಕಾರದ ಈ ಪ್ರಚಾರ ತಂತ್ರದ ಬಗ್ಗೆ ಜನರಿಗೆ ಅರಿವಿದೆ ಎಂದರು.
ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆದಿದ್ದು ಕಾನೂನು ವಿರೋಧಿ ಕ್ರಮ. ಈ ಸರ್ಕಾರ ಕುಡುಕರ ಸರ್ಕಾರವಾಗಿದೆ. ಹಿಂದೂಗಳ ತಾಳ್ಮೆಯನ್ನು ಇನ್ನೇಷ್ಟು ಪರೀಕ್ಷೆ ಮಾಡುತ್ತೀರಿ ? ಹಿಂದೂಗಳ ತಾಳ್ಮೆ ದೌರ್ಬಲ್ಯವಲ್ಲ, ಸುಮ್ಮನೆ ಕೂತಿದ್ದಾರೆ ಎಂದು ಭಾವಿಸಬೇಡಿ. ಯಾವಾಗ ಈ ಸರ್ಕಾರವನ್ನು ಬಲಿಹಾಕಬೇಕೋ ಆಗ ಹಾಕುತ್ತಾರೆ. ಸಿಎಂ-ಡಿಸಿಎಂ ಈ ಬಗ್ಗೆ ಚಕಾರವೆತ್ತಿಲ್ಲ. ಜನಿವಾರ ತೆಗೆಸಿದವರನ್ನು ಅಮಾನತ್ತು ಮಾಡಿದರೆ ಈ ಸಮಸ್ಯೆ ಬಗೆಹರಿಯುವುದಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂದೂ ವಿದ್ಯಾರ್ಥಿಗಳ ಮೇಲೆ ನಿರಂತರ ಈ ರೀತಿಯ ದಬ್ಬಾಳಿಕೆ ನಡೆಯುತ್ತಿದೆ. ಹಿಜಾಬ್ ವಿವಾದವಾದಾಗ ಬಾಯಿ ಬಡಕೊಂಡ ಕಾಂಗ್ರೆಸ್ಸಿಗರು ಈಗ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು. ಐದು ರಾಜ್ಯಗಳ ಚುನಾವಣಾ ಫಲಿತಾಂಶ ಮತ್ತು ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಬಂದ ಮೇಲೆ ಕಾಂಗ್ರೆಸ್ ಹೊತ್ತಿ ಉರಿಯಲಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















