ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೋವರ್ಧನ ಟ್ರಸ್ಟ್ ಶಿವಮೊಗ್ಗ ವತಿಯಿಂದ ಏ.27ರಂದು ಬೆಳಿಗ್ಗೆ 10 ಗಂಟೆಗೆ ಶುಭ ಮಂಗಳ ಸಮುದಾಯ ಭವನದಲ್ಲಿ ಗೋವುಗಳ ಸೇವೆಗೆ ಆಂಬುಲೆನ್ಸ್ ಸಮರ್ಪಣೆ, ಗೋಶಾಲೆ, ಸಾವಯವ ಕೃಷಿಕರ ಟ್ರಸ್ಟ್ ಉದ್ಘಾಟನೆ ಮತ್ತು ಗೋಸೇವಾ ಹಿತೈಷಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಗೋವರ್ಧನಾ ಅಧ್ಯಕ್ಷ ಕೆ.ಈ. ಕಾಂತೇಶ್ ಹೇಳಿದರು.
ಅವರು ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಗೋವರ್ಧನ ಟ್ರಸ್ಟ್ ಸ್ಥಾಪನೆಯಾಗಿ ಕೇವಲ 4 ತಿಂಗಳಲ್ಲಿ ಗೋವಿನ ರಕ್ಷಣೆಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಗರದ ಮೂರು ಗೋಶಾಲೆಗಳಿಗೆ ಹತ್ತು ಲೋಡ್ನಷ್ಟು ಮೇವುಗಳನ್ನು ನೀಡಿದೆ. ಗೋವಿನ ಕುರಿತು ಜಾಗೃತಿ ಮೂಡಿಸುವುದು, ಗೋಶಾಲೆಗಳನ್ನು ನಡೆಸುತ್ತಿರುವವರಿಗೆ ಸಹಕಾರ ನೀಡುವುದು, ಗೋವುಗಳಿಗಾಗಿ ಮೇವು ಮತ್ತು ವೈದ್ಯಕೀಯ ಸವಲತ್ತು ಒದಗಿಸುವುದು, ಪೋಷಕರಿಲ್ಲದ ಬೀಡಾಡಿ ಹಸುಗಳನ್ನು ರಕ್ಷಿಸಿ ಗೋಶಾಲೆಗಳಿಗೆ ಒಪ್ಪಿಸುವುದು. ದೀಪಾವಳಿ ಸಮಯದಲ್ಲಿ ಸಾರ್ವಜನಿಕರಿಗೆ ನಗರದ ಎಲ್ಲಾ ಕಡೆ ಗೋಪೂಜೆಗೆ ವ್ಯವಸ್ಥೆ ಮಾಡುವ ಉದ್ದೇಶದಿಂದ ಈ ಗೋವರ್ಧನ ಟ್ರಸ್ಟ್ ರಚನೆಯಾಗಿದೆ ಎಂದರು.
ಏ.27ರ ಕಾರ್ಯಕ್ರಮದ ಉದ್ಘಾಟನೆಯನ್ನು ಧರ್ಮಸ್ಥಳದ ಎಸ್ಡಿಎಂ ಎಜುಕೇಷನ್ ಟ್ರಸ್ಟ್ನ ಉಪಾಧ್ಯಕ್ಷರಾದ ಶ್ರೀ ಧರ್ಮಸ್ಥಳ ಸುರೇಂದ್ರಕುಮಾರ್ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್. ಈಶ್ವರಪ್ಪ ವಹಿಸಲಿದ್ದಾರೆ ಎಂದರು.
ಟ್ರಸ್ಟ್ನ ಮಹಾಪೋಷಕರಾದ ಕೆ.ಎಸ್. ಈಶ್ವರಪ್ಪ ಮಾತನಾಡಿ, ಶೃಂಗೇರಿ ಶ್ರೀ ವಿದುಶೇಖರ ಭಾರತೀ ಸ್ವಾಮೀಜಿಗಳಿಂದ ಉದ್ಘಾಟನೆಗೊಂಡ ಈ ಟ್ರಸ್ಟ್ 5 ಸಾವಿರ ಸದಸ್ಯರನ್ನು ಹೊಂದಿದೆ. ಆದರೆ ಅವರು ಆಶೀರ್ವಾದಪೂರಕವಾಗಿ 3 ಲಕ್ಷ ರೂ. ನೀಡಿದ್ದರು. ಜೈನಮಠದ ಶ್ರೀ ದೇವೇಂದ್ರ ಕೀರ್ತಿ ಸ್ವಾಮೀಜಿಯವರು 2 ಲಕ್ಷ ರೂ. ನೀಡಿದ್ದರು. ಈಗ ಸುರೇಂದ್ರಕುಮಾರ್ ಅವರು 5 ಲಕ್ಷ ರೂ.ಗಳ ಮಂಜೂರಾತಿ ಪತ್ರ ನೀಡಿದ್ದಾರೆ. ಈಗಾಗಲೇ 11 ಎಕರೆ ಭೂಮಿಯಲ್ಲಿ ಮೇವು ಬೆಳೆಯಲು ತೀರ್ಮಾನಿಸಲಾಗಿದೆ. 6 ಎಕರೆಯಲ್ಲಿ ಈಗಾಗಲೇ ಬೆಳೆದು ಗೋಶಾಲೆಗಳಿಗೆ ಮೇವನ್ನು ನೀಡಲಾಗಿದೆ. ರೈತರು ತಮ್ಮಲ್ಲಿ ನಿರುಪಯುಕ್ತ ಭೂಮಿ ಇದ್ದರೆ ಮೇವು ಬೆಳೆಯಲು ಗೋವರ್ಧನ ಟ್ರಸ್ಟ್ಗೆ ನೀಡುವಂತೆ ವಿನಂತಿಸಿದರು.
ಭೂಪಾಳಂ ಶಿವಸ್ವಾಮಿಯವರು ಬಿ.ಹೆಚ್.ರಸ್ತೆಯ ಮೂರು ಎಕರೆ ಪ್ರದೇಶವನ್ನು ಮೇವು ಬೆಳೆಯಲು ಹಾಗೂ ಶಿವಮೊಗ್ಗ ನಗರಸಭೆಯ ಮಾಜಿ ಅಧ್ಯಕ್ಷರಾದ ದಿ.ಎನ್.ಜೆ. ರಾಜಶೇಖರ್ ಅವರ ಪುತ್ರ ಕಾರ್ತೀಕ್ರವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಬೆಳೆದ ಹುಲ್ಲನ್ನು ಪ್ರತೀವರ್ಷ ಗೋಶಾಲೆಗೆ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದರು.
ಅಪಘಾತವಾದ ಸಂದರ್ಭದಲ್ಲಿ ದನಗಳನ್ನು ಆಸ್ಪತ್ರೆಗೆ ಸಾಗಿಸಲು ಸುಮಾರು 25 ಲಕ್ಷ ರೂ.ಗಳಲ್ಲಿ ವಿಶೇಷವಾಗಿ ನಿರ್ಮಾಣಗೊಂಡಿರುವ ಆಂಬುಲೆನ್ಸ್ ವಾಹನವನ್ನು ಆ ದಿನ ಲೋಕಾರ್ಪಣೆ ಮಾಡುತ್ತಿದ್ದೇವೆ ಎಂದರು.
ಏ.27ರಂದು ಬೆಳಿಗ್ಗೆ 12ಕ್ಕೆ ಹರಿಗೆಯಲ್ಲಿ ಮತ್ತು 12.30ಕ್ಕೆ ಗೋಂದಿಚಟ್ನಹಳ್ಳಿಯಲ್ಲಿ ಹಾಗೂ ಮಧ್ಯಾಹ್ನ 1ಕ್ಕೆ ಗಾಜನೂರಿನ ಶರಣ್ಯದಲ್ಲಿ ಒಟ್ಟು 11 ಎಕರೆಗಳಲ್ಲಿ ಗೋವಿಗಾಗಿ ಮೇವು ಬಿತ್ತನೆ ಕಾರ್ಯಕ್ರಮ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗೋವರ್ಧನ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಉಮೇಶ್ ಆರಾಧ್ಯ, ಖಜಾಂಚಿ ಎಸ್.ಕೆ. ಶೇಷಾಚಲ, ಪ್ರಮುಖರಾದ ಸತ್ಯನಾರಾಯಣ್, ಉಷಾ ಅರುಣ್, ಶುಭಾ ರಾಘವೇಂದ್ರ, ಗುರುಶೇಟ್, ಯಶೋಧರ, ಹರೀಶ್ ಕಾರ್ಣೀಕ್, ಶ್ರೀಕಾಂತ್, ಶ್ಯಾಂಸುಂದರ್, ನರೇಶ್ಜೈನ್, ದಿನೇಶ್ ವೈಷ್ಣವ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















