ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಈಗಾಗಲೇ ಗಣಿಗಾರಿಕೆ ಅದ್ವಾನದಿಂದ ನಾವು ಹೈರಾಣಾಗಿದ್ದೇವೆ. ಮತ್ತೆ ಈ ಭಾಗಕ್ಕೆ ಗಣಿಗಾರಿಕೆಗೆ ಯಾವುದೇ ಪರವಾನಿಗೆ ಕೊಡಕೂಡದು ಎಂದು ಬಸ್ತಿಕೊಪ್ಪ ಗ್ರಾಮಸ್ಥರು ಆಗ್ರಹಿಸಿದರು.
ಚಂದ್ರಗುತ್ತಿ ಹೋಬಳಿ ಬಸ್ತಿಕೊಪ್ಪದಲ್ಲಿ ನಡೆದ ವಾರ್ಡ್ ಸಭೆ ಉದ್ಧೇಶಿಸಿ ಮಾತನಾಡಿದ ಗ್ರಾಮಸ್ಥರು ಜನರಿಗೆ ಮಾರಕವಾಗುವ ಅಭಿವೃದ್ಧಿ ನಮಗೆ ಬೇಡ, ಜನರೊಂದಿಗೆ ಒಟ್ಟಾಗಿ ಬದುಕುವ ಸೌಲಭ್ಯ ಇದ್ದರೆ ಸಾಕು. ವರ್ಷವಿಡಿ ಸಾಗವಾಗಿ ಓಡಾಡಲು ರಸ್ತೆಯಿಲ್ಲ. ಕೃಷಿಗೆ ಪೂರಕವಾಗಿ ಇರುವ ಬೋರ್ವೆಲ್ ಗಳು ನಿಷ್ಕ್ರಿಯಗೊಂಡಿದೆ. ಅಸ್ತಮ, ಹೃದಯ ಬೇನೆಯಂತಹ ಕಾಯಿಲೆಗಳು ಸಾಮಾನ್ಯವೆನಿಸಿದೆ. ಕೂಲಿನಾಲಿ ಮಾಡಿ ಜೀವನ ನಿರ್ವಹಿಸುವ ನಮಗೆ ಇಲ್ಲಿನ ಗಣಿಗಾರಿಕೆಯೆ ಶಾಪವಾಗಿ ಪರಿಣಮಿಸಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಈ ಹಿಂದೆ ಗಣಿಗಾರಿಕೆಯ ದುಷ್ಪರಿಣಾಮಗಳನ್ನು ಜಿಲ್ಲಾಧಿಕಾರಿಗಳೂ ಸೇರಿದಂತೆ ಸಂಬಂಧಪಟ್ಟ ಎಲ್ಲ ಮೇಲಾಧಿಕಾರಿಗಳೂ ಗಮನಿಸಿದ್ದಾರೆ. ಈಗಿರುವ ಗಣಿಗಾರಿಕೆಗೆ ಸರ್ಕಾರವೇ ಮಾನ್ಯತೆ ನೀಡಿದ್ದು ಇನ್ನೂ ನಾಲ್ಕು ವರ್ಷ ಪರವಾನಿಗೆ ಇರುವುದರಿಂದ ಅಲ್ಲಿಯವರೆಗೆ ಗಣಿ ನಿಯಮಾನುಸಾರ ಜನರಿಗೆ ತೊಂದರೆಯಾಗದಂತೆ ಮುಂದುವರೆಸಲು ಗ್ರಾಮ ಒಪ್ಪಿದೆ. ಸಾಲದೆಂಬಂತೆ ಇಲ್ಲಿನ ಸನಂ 24ರಲ್ಲಿ ಇನ್ನೊಂದು ಕ್ವಾರೆ ಸಿಡಿಯಲು ಸಜ್ಜಾಗಿದೆ. ಇರುವ ಜಲಮೂಲ ರಕ್ಷಿತ ಅರಣ್ಯವೂ ಸೇರಿದಂತೆ ಹಲವಾರು ವೈವಿಧ್ಯವುಳ್ಳ ಜೀವಿಗಳೂ ನಾಶವಾಗುತ್ತವೆ. ಹಾಗಾಗಿ ಇಂತಹ ಯೋಜನೆ ಇಲ್ಲಿ ಕೂಡದು. ಹಠಾತ್ ನಡೆಸಲು ಮುಂದಾದರೆ ಇಡೀ ಗ್ರಾಮ, ಪರಿಸರ ಸಂಘಟನೆಗಳು ಒಟ್ಟಾಗಿ ಶಾಂತಿಯುತ ಹೋರಾಟಕ್ಕೆ ಸಜ್ಜಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮದ ಅಭಿವೃದ್ಧಿ, ಜನಸಾಮಾನ್ಯರಿಗೆ ದೊರಕುವ ಸರ್ಕಾರದ ಸೌಲಭ್ಯಗಳ ಲೋಪದೋಷಗಳು, ಗ್ರಾಮಕ್ಕೆ ತುರ್ತು ಅಗತ್ಯವಿರುವ ಸೌಕರ್ಯಗಳ ಕುರಿತಂತೆ ಚರ್ಚೆ ನಡೆದವು. ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮದ ಕುರಿತಂತೆ ಪೂರ್ವಭಾವಿ ಮಾಹಿತಿ ನೀಡಲಾಯಿತು.
ಚಂದ್ರಗುತ್ತಿ ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀ, ಪಿಡಿಒ ನಾಗೇಂದ್ರಪ್ಪ, ತಾಪಂ ಜೀವವೈವಿಧ್ಯ ನಿರ್ವಹಣ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ, ಎಸ್ಡಿಎ ರೇಖಾ, ಸದಸ್ಯ ಸಲೀಂ, ಡಿಇಒ ಮಂಜುನಾಥ, ಕರವಸೂಲಿಗಾರ ಸಂತೋಷ್, ಮಂಜು, ವಾಟರ್ಮನ್ ಹರ್ಷ, ಎಸ್ಡಿಎಂಸಿ ಅಧ್ಯಕ್ಷ ಮಂಜು, ಗ್ರಾಮ ಪ್ರಮುಖರು ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post