ಕಲ್ಪ ಮೀಡಿಯಾ ಹೌಸ್ | ಮಲೆನಾಡು ಸುದ್ದಿ |
ಚಿಕ್ಕಮಗಳೂರು #Chikkamaluru ಜಿಲ್ಲೆಯ ಕಳಸ ಹಾಗೂ ಎನ್ ಆರ್ ಪುರ ತಾಲೂಕಿನ ವ್ಯಾಪ್ತಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಲಘು ವಿಮಾನವೊಂದು ತೀರಾ ಕೆಳಭಾಗದಲ್ಲಿ ಹಾರಾಟ ನಡೆಸಿರುವುದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲಾ ವ್ಯಾಪ್ತಿಯಲ್ಲಿನ ಭದ್ರಾ ನದಿಯ ತೀರದುದ್ದಕ್ಕೂ ಈ ಲಘು ವಿಮಾನ #LightAircraft ಎರಡು ಬಾರಿ ಹಾರಾಟ ನಡೆಸಿದೆ ಎಂದು ವರದಿಯಾಗಿದೆ.
ಅದರಲ್ಲೂ ತೀರಾ ಕೆಳಭಾಗದಲ್ಲಿ ಈ ಲಘು ವಿಮಾನ ಹಾರಾಟ ನಡೆಸಿರುವುದು ಆತಂಕದೊಂದಿಗೆ, ಅನುಮಾನಗಳಿಗೂ ಸಹ ಎಡೆಮಾಡಿಕೊಟ್ಟಿದೆ.
ಕಳಸ #Kalasa ತಾಲೂಕಿನಿಂದ ಹಾರಾಟ ಆರಂಭಿಸಿದ ಈ ವಿಮಾನ ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ಎರಡು ಸುತ್ತು ಪ್ರದಕ್ಷಿಣೆ ಹಾಕಿ ನಂತರ ಶಿವಮೊಗ್ಗ ಭಾಗದತ್ತ ಸಾಗಿದೆ.
ಬಾಳೆಹೊನ್ನೂರಿನಲ್ಲಿ ತೀರಾ ಕೆಳಭಾಗದಲ್ಲಿ ಈ ವಿಮಾನ ಹಾರಾಡುತ್ತಿದ್ದ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ.
ಈ ವಿಚಾರಗಳ ನಡುವೆಯೇ, ಈ ವಿಮಾನ ಯಾರಿಗೆ ಸೇರಿದ್ದು? ಅದರೊಳಗೆ ಯಾರಿದ್ದರು? ಅದು ಎಲ್ಲಿಂದ ಬಂದು ಎಲ್ಲಿಗೆ ಹೋಗಿದೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿಗಳು ಯಾರಿಗೂ ಸಹ ಲಭ್ಯವಾಗಿಲ್ಲ.
ಖಾಸಗಿ ವ್ಯಕ್ತಿಗಳು ವಿಮಾನ ಹಾರಾಟ ಮಾಡಿದ್ದಾರಾ? ಅಥವಾ ಯಾವುದಾದರೂ ಸರ್ಕಾರಿ ಇಲಾಖೆಯ ಅಧಿಕೃತ ಸರ್ವೆಗೆ ಸಂಬಂಧಿಸಿದ್ದೋ ಎಂಬ ಬಗ್ಗೆ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಬಳಿ ಯಾವುದೇ ಮಾಹಿತಿಯಿಲ್ಲ ಎಂದು ವರದಿಯಾಗಿದೆ.
ಈ ಕಿರು ವಿಮಾನದ ಹಾರಾಟದ ಬಗ್ಗೆ ಸಂಬಂಧಪಟ್ಟ ಯಾವುದೇ ಇಲಾಖೆಗಳಿಗೆ ಮುನ್ಸೂಚನೆ ಇಲ್ಲ ಎಂದು ಹೇಳಲಾಗಿದೆ.
ಕಳಸ-ಬಾಳೆಹೊನ್ನೂರು ಪೊಲೀಸರು ಲಘು ವಿಮಾನ ಹಾರಾಟದ ವಿವರ ಕಲೆಹಾಕುವ ಮೂಲಕ, ಸ್ಥಳೀಯರ ಆತಂಕಗಳಿಗೆ ಉತ್ತರ ನೀಡಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















