ಕಲ್ಪ ಮೀಡಿಯಾ ಹೌಸ್ | ಚಿತ್ರದುರ್ಗ |
ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಹೊರವಲಯದ ಮದಕರಿ ಪುರ ಬ್ರೀಡ್ಜ್ ಬಳಿ ನಡೆದಿದೆ.
ಬಚ್ಚಬೋರನಹಟ್ಟಿ ನಿವಾಸಿ ರಮೇಶ್ (32) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದ್ದು, ದಾವಣಗೆರೆ ಕಡೆಯಿಂದ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್’ಗೆ ಬೈಕ್ ಅಪಘಾತ ಸಂಭವಿಸಿದ್ದು, ಬಸ್ ಕೆಳ ಭಾಗದಲ್ಲಿ ಬೈಕ್ ಸಿಲುಕಿರುವುದು, ಬಸ್ ಚಾಲಕನಿಗೆ ತಕ್ಷಣಕ್ಕೆ ಗೊತ್ತಾಗಿಲ್ಲ. ಹೀಗಾಗಿ ಬಸ್ ಚಾಲನೆ ಮಾಡಿಕೊಂಡು ಹಾಗೇ ಸ್ವಲ್ಪ ದೂರ ಬಂದಿದ್ದಾರೆ. ಈ ವೇಳೆ ಬೈಕ್ ಮತ್ತು ಬಸ್ಸಿನ ನಡುವೆ ಸ್ಪಾರ್ಕ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ದೊಡ್ಡ ಮಟ್ಟದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಇಡೀ ಬಸ್ ಅನ್ನೇ ಸುಟ್ಟು ಕರಕಲು ಮಾಡಿದೆ.
ಸದ್ಯ ಬೆಂಕಿ ಕಾಣಿಸಿದ ತಕ್ಷಣವೇ ಪ್ರಯಾಣಿಕರೆಲ್ಲರೂ ಬಸ್ನಿಂದ ಹೊರ ಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಖಾಸಗಿ ಬಸ್ ನಡು ರಸ್ತೆಯಲ್ಲೆ ಧಗ ಧಗ ಉರಿದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರೂ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post