ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ತಾಲೂಕಿನ ಹೊಟ್ಟೆಜ್ಜನಕಪಿಲೆ, ಹೆಗ್ಗೆರೆ, ಜಡೇಕುಂಟೆ, ಕಾಪರಹಳ್ಳಿ, ಹುಲಿಕುಂಟೆ, ಹಿರಿಯೂರು ತಾಲೂಕು ಕಂದಿಕೆರೆ, ಗೊಲ್ಲಹಳ್ಳಿ ಗ್ರಾಮದ ರೈತರ ಹಿತ ರಕ್ಷಣಾ ಸಮಿತಿಯ ಕಾರ್ಯಕರ್ತರು ಮಂಗಳವಾರ ರಾಷ್ಟ್ರೀಯ ಹೆದ್ದಾರಿ 150 ರ ಹೆಗ್ಗೆರೆ ಗ್ರಾಮದ ಬಳಿ ಪ್ರಕಾಶ್ ಸ್ಪಾಂಜ್ ಐರನ್ ಪವರ್ ಕಂಪೆನಿ ಆವರಣದಲ್ಲಿ ಸಭೆ ನಡೆಸಿದರು.
ಸಭೆಯ ನೇತೃತ್ವ ವಹಿಸಿದ್ದ ರೈತ ಸಂಘದ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ರೈತರ ಕೃಷಿ ಚಟುವಟಿಕೆ ಮತ್ತು ಜನರ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಬೇಕು ಎಂದು ಸ್ಪಾಂಜ್ ಐರನ್ ಪವರ್ ಕಂಪೆನಿಯ ಮಾಲೀಕರಲ್ಲಿ ಮನವಿ ಮಾಡಿದರು.
ಬೆಳೆ, ರೈತರು ಮತ್ತು ಜಾನುವಾರುಗಳಿಗೆ ತೊಂದರೆ ಆದರೆ ನಾವು ಸುಮ್ಮನೆ ಕೂರುವುದಿಲ್ಲ. ಕಂಪೆನಿ ಉಗುಳುವ ಹೊಗೆಯಿಂದ ಈಗಾಗಲೇ ಹೊಲದಲ್ಲಿ ಇಟ್ಟ ರೈತರ ಫಸಲು ಸಂಪೂರ್ಣವಾಗಿ ಹಾಳಾಗಿದೆ. ಮೇವು ತಿಂದ ದನಕರುಗಳಿಗೆ ಗಂಟಲು ಮತ್ತು ಕಾಲು ಬಾಯಿ ರೋಗ ಕಾಣಿಸಿಕೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು.
ವನ್ಯಜೀವಿ ತಜ್ಞ ವಲ್ಲೀಶ್ ವಾಸುಕಿ, ಐರನ್ ಪವರ್ ಕಂಪೆನಿಯ ಸುತ್ತ 10-15 ಕಿಮೀ ವ್ಯಾಪ್ತಿಯಲ್ಲಿ ಜನ ಮತ್ತು ಜಾನುವಾರುಗಳಿಗೆ ತೀವ್ರ ತೊಂದರೆಯಾಗುತ್ತದೆ. ಕಂಪೆನಿ ಉಗುಳುವ ಹೊಗೆ ಹಾಗೂ ಧೂಳು ಬೆಳೆಗಳನ್ನು ಆವರಿಸಿಕೊಂಡಿದೆ. ಬೆಳೆ ಮಧ್ಯೆ ನಡೆದಾಡಿದರೆ ಕಪ್ಪುಬಣ್ಣದ ಮಸಿ ಕಾಲಿಗೆ ಅಂಟಿಕೊಳ್ಳುತ್ತದೆ. ಆದ್ದರಿಂದ ಕೂಡಲೇ ಐರನ್ ಕಂಪೆನಿಯನ್ನು ಮುಚ್ಚಬೇಕು ಎಂದು ಒತ್ತಾಯಿಸಿದರು.
ಗ್ರಾಮದ ಮುಖಂಡ ನಾಗರಾಜ, ಕಂಪೆನಿ ಇರುವ ಕಾರಣ ಗ್ರಾಮದ ನೂರಾರು ಜನರಿಗೆ ಉದ್ಯೋಗ ದೊರೆತಿದೆ. ಇದರಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.
ಕೃಷಿ ವಿಜ್ಞಾನಿ ಡಾ.ಮಂಜುನಾಥ್, ತೇಜಸ್ವಿ ಪಟೇಲ್, ಚೇತನ್, ಹಿರೇಮಠ್, ಮಲ್ಲಿಕಾರ್ಜುನ ಭಟರಹಳ್ಳಿ ಮಾತನಾಡಿದರು.
ಹೋರಾಟಗಾರ ಜೋಸೆಫ್ ಹೂವರ್, ತಿಪ್ಪೇಸ್ವಾಮಿ, ನಾಗರಾಜ, ರಂಗಸ್ವಾಮಿ, ತಿಮ್ಮಣ್ಣ, ರಂಗಪ್ಪ, ರಾಜಣ್ಣ, ಮಹೇಶ್, ಧನಂಜಯ, ಸಂಜಯ್, ಮಂಜುನಾಥ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post