ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ: ಯಾವುದೇ ಆತಂಕವಿಲ್ಲದೆ ಕಚೇರಿಯಲ್ಲೇ ಲಂಚ ಸ್ವೀಕರಿಸುತ್ತಿದ್ದ ವೇಳೆ ತಹಶೀಲ್ದಾರ್ ಮತ್ತು ಆರ್’ಐ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಮೊಳಕಾಲ್ಮೂರು ತಹಶೀಲ್ದಾರ್ ಮಲ್ಲಿಕಾರ್ಜುನ್ ಮತ್ತು ಆರ್’ಐ ರಸ್ತೆ ನಿರ್ಮಾಣ ಗುತ್ತಿಗೆದಾರ ಪ್ರೀತಂ ಬಳಿ 2 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಸೋಮವಾರ ಕಚೇರಿಗೆ ಆಗಮಿಸಿದ ತಹಸೀಲ್ದಾರ್ ಹಾಗೂ ಆರ್’ಐರ ಪ್ರೀತಂಗೆ ಹಣ ತೆಗೆದುಕೊಂಡು ಬರಲು ಸೂಚಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಎಸಿಬಿ ಎಸ್’ಪಿ ಜಯಪ್ರಕಾಶ್ ನೇತೃತ್ವದ ತಂಡ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದಿದೆ.
ಗುತ್ತಿಗೆದಾರ 2 ಲಕ್ಷ ಹಣ ನೀಡುವಾಗ ಉಮೇಶ್ ಮೇಲೆ ದಾಳಿಯನ್ನು ನಡೆಸಿದ್ದು, ಇತ್ತ ಎಸಿಬಿ ಡಿವೈಎಸ್ಪಿ ಪರಮೇಶ್ ತಹಶೀಲ್ದಾರ್ ಕಚೇರಿ ಮೇಲೆ ದಾಳಿಯನ್ನು ಏಕ ಕಾಲದಲ್ಲಿ ನಡೆಸಿದ್ದಾರೆ. ರಸ್ತೆ ಕಾಮಗಾರಿಗೆ ಎನ್’ಓಸಿ ನೀಡಲು ಗುತ್ತಿಗೆದಾರ ಪ್ರೀತಮ್ ನಿಂದ ಒಟ್ಟು 15 ಲಕ್ಷ ಬೇಡಿಕೆ ಇಟ್ಟಿದ್ದ ತಹಶೀಲ್ದಾರ್ ಮಲ್ಲಿಕಾರ್ಜುನ್ ಮೊದಲು 6 ಲಕ್ಷವನ್ನು ಪಡೆದುಕೊಂಡಿದ್ದಾರೆ. ಉಳಿದ ಲಂಚದ ಹಣದಲ್ಲಿ ಇಂದು ಎರಡು ಲಕ್ಷ ಕೊಡುವಂತೆ ಹಾಗೂ ಇನ್ನುಳಿದ ಹಣವನ್ನು ನಾಡಿದ್ದು ಕೊಡುವಂತೆ ಹೇಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರೀತಂ ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಅದರಂತೆ ಎಸ್ಪಿ ಜಯರಾಮ್ ನೇತೃತ್ವದಲ್ಲಿ ದಾಳಿಯನ್ನು ಬಿಜಿಕೆರೆ ಕ್ರಾಸ್ ಹಾಗೂ ತಹಶೀಲ್ದಾರ್ ಕಚೇರಿ ಮೇಲೆ ದಾಳಿ ನಡೆಸಿದಾಗ ಅರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ವಶಕ್ಕೆ ಪಡೆದಿರುವ ಎಸಿಬಿ ಪೋಲಿಸರು ಹೆಚ್ಚಿನ ತನಿಖೆ ಮುಂದುವರೆದಿದೆ.
(ವರದಿ: ಸುರೇಶ್ ಬೆಳಗೆರೆ, ಚಿತ್ರದುರ್ಗ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post