ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನರೇಗಾ ಯೋಜನೆಯ ಅಡಿಯಲ್ಲಿ ಆರಂಭಿಸಿರುವ ಕಾಮಗಾರಿಗಳನ್ನು ಮಳೆಗಾಲ ಆರಂಭವಾಗುವ ಮುನ್ನು ಬಹುತೇಕ ಮುಕ್ತಾಯಗೊಳಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಸೂಚಿಸಿದರು.
ತಾಪಂನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, 142 ಗ್ರಾಮಗಳಲ್ಲಿ ಕಾಮಗಾರಿ ನಡೆಯಲಿದ್ದು, ಪ್ರತಿ ಗ್ರಾಮದಲ್ಲೂ ಕನಿಷ್ಠ 2 ಕೆಲಸವಾಗಬೇಕು. ಅಂರ್ತಜಲ ಹೆಚ್ಚಳವಾಗುವ ಜೊತೆಯಲ್ಲಿ ಸ್ಥಳೀಯ ಮಟ್ಟದಲ್ಲಿ ನರೇಗಾ ಯೋಜನೆಯಡಿ ಕೆಲಸ ಸಿಗುವಂತಾಗಬೇಕು ಎಂದರು.
ಮೇಲಿನ ಹಂತದಿಂದ ಕೆಳ ಹಂತದ ಅಧಿಕಾರಿಗಳು ನಿರಂತರ ಸಮನ್ವಯತೆಯಿಂದ ಕೆಲಸ ಮಾಡಿದರೆ, ನಿಗದಿತ ಅವಧಿಯೊಳಗೆ ಯಾವುದೇ ತೊಂದರೆಯಿಲ್ಲದೇ ನಿರಾತಂಕವಾಗಿ ಕಾಮಗಾರಿ ನಡೆಯುತ್ತದೆ ಎಂದರು.
ಪ್ರಮುಖವಾಗಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ಯಾವುದೇ ಅಡಚಣೆ ಮಾಡಬೇಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ತಾಲೂಕಿನಲ್ಲಿ ಸದ್ಯ ಕುಡಿಯುವ ನೀರಿನ ತೊಂದರೆಯಿಲ್ಲ. ಒಂದು ವೇಳೆ ತೊಂದರೆ ಕಾಣಿಸಿಕೊಂಡರೆ, ಬೋರ್ ಮೂಲಕ ಸರಬರಾಜು ಮಾಡುವುದು ನಿಧಾನವಾದರೆ ಟ್ಯಾಂಕರ್ ಮೂಲಕ ಸರಬರಾಜು ಮಾಡಿ ಎಂದು ಸೂಚಿಸಿದರು.
ಈ ವೇಳೆ ಮಾತನಾಡಿದ ಶಾಸಕ ಬಿ.ಕೆ. ಸಂಗಮೇಶ್, ಕೆರೆಗಳ ಪುನಶ್ಚೇತನಕ್ಕೆ 20 ಕೋಟಿ ರೂ. ನೀಡಲಾಗಿದೆ. ಆದರೆ, ಹೊಳೆಯಿಂದ 32 ಕೆರೆಗಳಿಗೆ ನೀರು ತುಂಬಲು ಇನ್ನಷ್ಟು ಅನುದಾನದ ಅಗತ್ಯವಿದೆ ಎಂದು ಸಚಿವರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ವಿವರ ತೆಗೆದುಕೊಂಡ ಬನ್ನಿ. ಸರ್ಕಾರ ಮಟ್ಟದಲ್ಲಿ ಮಾತನಾಡುತ್ತೇನೆ ಎಂದರು.
ಜಿಪಂ ಸಿಇಒ ವೈಶಾಲಿ, ಜಿಪಂ ಅಧ್ಯಕ್ಷ ಜ್ಯೋತಿ ಎಸ್. ಕುಮಾರ್, ತಾಪಂ ಅಧ್ಯಕ್ಷೆ ಆಶಾ ಶ್ರೀಧರ್, ಜಿಪಂ ಸದಸ್ಯ ಮಣಿಶೇಖರ್, ತಾಪಂ ಕಾರ್ಯನಿರ್ವಹಣಾಧಿಕಾರಿ ತಮ್ಮಣ್ಣಗೌಡ, ತಹಶೀಲ್ದಾರ್ ಅಶೋಕ್ ಕುಮಾರ್ ಇದ್ದರು.
Get in Touch With Us info@kalpa.news Whatsapp: 9481252093
















