ಶಿವಮೊಗ್ಗ: ನೈಋತ್ಯ ಪದವೀಧರರ ಕ್ಷೇತ್ರದಿಂದ ಸ್ಫರ್ಧಿಸಿರುವ ಎಸ್.ಪಿ. ದಿನೇಶ್ ಅವರು ಅಖಿಲ ಭಾರತ ವೀರಶೈವ ಮಹಾಸಭಾದ ಹಲವು ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿ ಸಂಘಟನೆ ಮಾಡಿದ್ದು, ಇವರನ್ನು ಬೆಂಬಲಿಸಬೇಕು ಎಂದು ಜಿಲ್ಲಾ ಬಸವ ಯುವಸೇನೆಯ ಅಧ್ಯಕ್ಷ ಎಚ್. ಪಿ. ಗಿರೀಶ್ ಮನವಿ ಮಾಡಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಿದ್ದು, ಸರ್ಕಾರದ ಎದುರು ನಿಂತು ಸಮಸ್ಯೆಗಳನ್ನು ಅವರ ಗಮನಕ್ಕೆ ತಂದಿದ್ದಾರೆ. ವೀರಶೈವ ಲಿಂಗಾಯತ ಸಮುದಾಯ ಮಾತ್ರ ಅಲ್ಲದೇ ಸಮಾಜದ ಎಲ್ಲಾ ವರ್ಗಗಳ ಪರವಾಗಿ ಕೆಲಸ ಮಾಡಿದ್ದಾರೆ. ಪದವೀಧರರ ಸಮಸ್ಯೆಗಳ ಪರ ಯಾವ ಸರ್ಕಾರವಿದ್ದರೂ ಸಹ ಧರಣಿ, ಪ್ರತಿಭಟನೆ ಮಾಡಿದ್ದಾರೆ ಎಂದರು.
ವಿಧಾನಪರಿಷತ್ ಚುನಾವಣೆ ಮತದಾನ ಒಂದು ದಿನ ಇರುವಂತೆ ಬಿಜೆಪಿಯು ವೀರಶೈವ ಲಿಂಗಾಯತ ಮತದಾರರ ದಿಕ್ಕು ತಪ್ಪಿಸುವ ಕೆಲಸಕ್ಕೆ ಮುಂದಾಗಿದೆ. ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಅವರು ಈ ಸಮುದಾಯಕ್ಕೆ ಸೇರಿದವರು ಎಂಬ ಏಕೈಕ ಕಾರಣದಿಂದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ದಿನೇಶ್ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಆದರೆ ವೀರಶೈವ ಲಿಂಗಾಯತ ಸಮುದಾಯವು ಬಿಜೆಪಿ ಆರೋಪದ ಸುಳ್ಳುಗಳನ್ನು ಅರ್ಥ ಮಾಡಿಕೊಳ್ಳುವ ಪ್ರಬುದ್ಧತೆ ಹೊಂದಿದೆ ಎಂದರು.
ಆಯನೂರು ಮಂಜುನಾಥ್ ಅವರು ಶಾಸಕರಾಗಿ, ಸಾಂಸದರಾಗಿ, ರಾಜ್ಯಸಭೆ ಸದಸ್ಯರಾಗಿದ್ದರು. ಅಧಿಕಾರದಲ್ಲಿದ್ದಾಗ ವೀರಶೈವ ಲಿಂಗಾಯತ ಸಮುದಾಯಕ್ಕೆ ಯಾವ ನೆರವನ್ನೂ ನೀಡಿಲ್ಲ. ವೈಯುಕ್ತಿಕವಾಗಿ ಆಗಲಿ, ಸರ್ಕಾರದ ನೆರವನ್ನಾಗಲಿ ಕೊಡಿಸುವಲ್ಲಾಗಲಿ, ಶಾಸಕ-ಸಾಂಸದ ನಿಧಿಯಿಂದ ಅನುದಾನ ನೀಡುವುದಾಗಲಿ ಒಮ್ಮೆಯೂ ಮಾಡಿಲ್ಲ ಎಂದು ಆರೋಪಿಸಿದರು.
ಮಂಜುನಾಥ್ ಅಧಿಕಾರದಲ್ಲಿ ಇದ್ದಾಗ ಹಲವು ಸಂದರ್ಭಗಳಲ್ಲಿ ಬಿಜೆಪಿ ಸರ್ಕಾರವೇ ಇತ್ತು. ಒಮ್ಮೆಯೂ ಸಹ ಅವರು ಸಮುದಾಯದ ಮುಖಂಡರೊಂದಿಗೆ ಚರ್ಚಿಸಿ, ಏನು ನೆರವು ಬೇಕಾಗಿದೆ ಎಂದು ಕೇಳಲಿಲ್ಲ. ವೀರಶೈವ ಲಿಂಗಾಯತ ಸಮುದಾಯದ ವಿದ್ಯಾಸಂಸ್ಥೆಗಳಿಗೆ, ಸಮುದಾಯ ಭವನಗಳಿಗೆ ತಮ್ಮ ಅನುದಾನ ನೀಡಲಿಲ್ಲ ಎಂದು ದೂರಿದರು.
ಹಾಗಾಗಿ ವೀರಶೈವ ಲಿಂಗಾಯತ ಸಮುದಾಯವು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ದಿನೇಶ್ ಅವರಿಗೆ ಬೆಂಬಲಿಸಲು ನಿರ್ಧರಿಸಿದೆ. ಆಯನೂರು ಮಂಜುನಾಥ್ ಅವರಿಗೆ ಹಲವು ಬಾರಿ ರಾಜಕೀಯವಾಗಿ ಅವಕಾಶ ನೀಡಲಾಗಿದೆ. ಬಿಜೆಪಿ ಮಾತ್ರವಲ್ಲದೇ ಕಾಂಗ್ರೆಸ್ ಪಕ್ಷದಿಂದಲೂ ಅವರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದೆ. ಹಾಗಾಗಿ ಭವಿಷ್ಯದಲ್ಲಿ ದೊಡ್ಡ ಮಟ್ಟದ ನಾಯಕರಾಗಿ ಬೆಳೆಯುವ ಉಜ್ವಲ ಅವಕಾಶ ಹೊಂದಿದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ದಿನೇಶ್ ಅವರು ನೈಋತ್ಯ ಪದವೀಧರ ಕ್ಷೇತ್ರದಿಂದ ಗೆದ್ದು ವಿಧಾನಪರಿಷತ್ ಪ್ರವೇಶಿಸಿದರೆ ಆಡಳಿತ ಪಕ್ಷದ ಭಾಗವಾಗುತ್ತಾರೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಸರ್ಕಾರದ ಸವಲತ್ತುಗಳು ಸುಲಭವಾಗಿ ಸಿಗುತ್ತವೆ ಎಂದರು.
ಆಯನೂರು ಮಂಜುನಾಥ್ ಅವರನ್ನು ಗೆಲ್ಲಿಸಿ ಬರೀ ಮನವಿ ಕೊಡುವುದಕ್ಕೆ ಸೀಮಿತವಾಗದೇ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ದಿನೇಶ್ ಅವರ ಹೆಸರಿನ ಮುಂದೆ 1 ಎಂದು ಬರೆಯುವ ಮೂಲಕ ಸರ್ಕಾರದಿಂದ ಅತಿ ಹೆಚ್ಚು ನೆರವು ಪಡೆದು ಸಮುದಾಯದ ಬಡವರು, ದುರ್ಬಲರು, ವಿದ್ಯಾರ್ಥಿಗಳು, ಪದವೀಧರರಿಗೆ ನೆರವು ಪಡೆಯುತ್ತೇವೆ. ಆದ್ದರಿಂದ ಎಲ್ಲಾ ವೀರಶೈವ ಲಿಂಗಾಯತ ಮತದಾರರು ಬಿಜೆಪಿ ಮುಖಂಡರ ಸುಳ್ಳು ಮಾತುಗಳಿಗೆ ಮರುಳಾಗದೆ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ದಿನೇಶ್ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
Discussion about this post