ಶಿವಮೊಗ್ಗ: ನಮ್ಮ ನೆಲದ ಸಂಸ್ಕೃತಿಯನ್ನು ನಮ್ಮವರೇ ಅವಹೇಳನ ಮಾಡುವುದು ಹಾಗೂ ಅದಕ್ಕೆ ಬೆಂಬಲ ನೀಡುವುದು ಧರ್ಮಕ್ಕೆ ಅಪಾಯಕಾರಿ ಎಂದು ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ಕಳವಳ ವ್ಯಕ್ತಪಡಿಸಿದ್ದಾರೆ.
ಸಂಸ್ಕಾರ ಪ್ರತಿಷ್ಠಾನ ಹಾಗೂ ಅರ್ಚಕ ವೃಂದದ ವತಿಯಿಂದ ರವೀಂದ್ರ ನಗರ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಆಯೋಜಿಸಲಾಗಿದ್ದ ‘ಜ್ಯೋತಿಷ್ಯಾಧಾರಿತ ದೇವತಾ ಸ್ವರೂಪದ ಚಿಂತನೆ’ ಎಂಬ ವಿಚಾರದ ಕುರಿತಾಗಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ನಮ್ಮ ನೆಲ, ಧರ್ಮ ಹಾಗೂ ನಮ್ಮ ಸಂಸ್ಕೃತಿ ನಮ್ಮಲ್ಲಿನ ಪ್ರತಿ ಸಮುದಾಯಕ್ಕೂ ಸಹ ಎಲ್ಲವನ್ನೂ ಸಹ ನೀಡಿದೆ. ನಾವು ಹೊಸದಾಗಿ ಸಂಶೋಧನೆ ಮಾಡುವುದು ಏನೂ ಇಲ್ಲ. ಪ್ರತಿ ಸಮುದಾಯಗಳು ತಮ್ಮ ತಮ್ಮ ಧರ್ಮವನ್ನು ನಿಷ್ಠೆಯಿಂದ ಪಾಲಿಸಿದರೆ ನೆಮ್ಮದಿ ಸಾಧ್ಯ ಎಂದರು.
ನಾವು ಸೇವಿಸುವ ಆಹಾರ ಹಾಗೂ ನಮ್ಮ ಜೀವನ ಶೈಲಿ ನಮ್ಮಲ್ಲಿನ ಷಡ್ಗುಣವನ್ನು ನಿಯಂತ್ರಿಸುತ್ತವೆ. ಹೀಗಾಗಿ, ತಾಮಸ ಗುಣವನ್ನು ಪ್ರೇರೇಪಿಸುವ ಆಹಾರಗಳನ್ನು ವರ್ಜಿಸು ಮೂಲಕ ನಿಯಂತ್ರಣ ಸಾಧಿಸಬಹುದು ಎಂದರು.
ನಮ್ಮ ಧರ್ಮದಲ್ಲಿನ 33 ಕೋಟಿ ದೇವತೆಗಳಿಗೂ ಸಹ ಒಂದೊಂದು ಹಿನ್ನೆಲೆಯಿದೆ. ನಾವು ಪೂಜಿಸುವ ಪ್ರತಿ ದೇವತೆಗೂ ಸಹ ಅಭಿಮಾನಿ ದೇವತೆಗಳಿದ್ದು, ಇದರ ಆಚರಣೆಯ ಮೂಲಾರ್ಥ ಹಾಗೂ ಮಹತ್ವವನ್ನು ಅರಿತು ಧ್ಯಾನಿಸಿದಾಗ ಅದರ ಫಲ ದುಪ್ಪಟ್ಟು ಎಂಬುದನ್ನು ಹಲವು ಉದಾಹರಣೆ ಸಹಿತ ವಿವರಿಸಿದರು.
ಯಾವುದೇ ಆಚರಣೆಗೂ ಮುನ್ನ ಕೆಲವು ಧರ್ಮ ಸೂಕ್ಷ್ಮಗಳನ್ನು ಅರಿಯಬೇಕು. ಇಂದು ನಾವು ಒಂದು ಸಮಯಕ್ಕೆ ಪೂಜೆ ಅಥವಾ ಧ್ಯಾನ ಮಾಡಿದರೆ ಪ್ರತಿದಿನವೂ ಸಹ ಅದೇ ಸಮಯಕ್ಕೆ ಮಾಡಬೇಕು. ಇಲ್ಲದೇ ಹೋದರೆ ಇದು ದೈವ ಶಾಪಕ್ಕೆ ಕಾರಣವಾಗುತ್ತದೆ ಎಂದರು.
ಸಂಸ್ಕೃತಿಯನ್ನು ಉಳಿಸಬೇಕಾದ ಅನಿವಾರ್ಯ ಬಂದೊದಗಿರುವ ಈ ಕಾಲಘಟ್ಟದಲ್ಲಿ, ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಧರ್ಮ ಜಾಗೃತಿಯನ್ನು ಮಾಡುತ್ತಿರುವ ಸಂಸ್ಕಾರ ಪ್ರತಿಷ್ಠಾನ ಹಾಗೂ ಅರ್ಚಕ ವೃಂದ ಮಾಡುತ್ತಿರುವುದು ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಸಂಸ್ಕಾರ ಪ್ರತಿಷ್ಠಾನದ ಮುಖ್ಯಸ್ಥರಾದ ಶ್ರೀ ಅ.ಪ. ರಾಮಭಟ್ಟ, ಶಬರೀಶ್ ಕಣ್ಣನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಪನ್ಯಾಸದ ನಂತರ ಸಭಿಕರೊಂದಿಗೆ ಸಂವಾದ ನಡೆಯಿತು.
(ವರದಿ: ನಿರಂಜನಮೂರ್ತಿ)
Discussion about this post