ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೌದ್ಧಾವತಾರ
ಬೌದ್ಧಾವತಾರದಲ್ಲಿ ಪರಮಾತ್ಮನು ಸಿದ್ಧಾರ್ಥನಾಗಿ (ಸಿದ್ಧ ಅರ್ಥನಾಗಿ ಅವತರಿಸುತ್ತಾನೆ. ಆಸೆಯೇ ದುಃಖಕ್ಕೆ ಕಾರಣ ಎನ್ನುವ ತತ್ವ ಬೋಧಿಸುತ್ತಾನೆ. ಮೇಲ್ನೋಟಕ್ಕೆ ಸಾಧಾರಣ ಉಪದೇಶ ಎನಿಸಿದರೂ ಅದರೊಳಗೆ ವಿಶೇಷ ಆಧ್ಯಾತ್ಮಿಕ ಅರ್ಥವನ್ನು ತಿಳಿಸುತ್ತಿದೆ. ಕಾಮವೇ ಜೀವನಕ್ಕೆ ಮೂಲಾಧಾರ. ಕಾಮವೆಂದರೆ ಬಯಕೆ ಎಂಬ ಅರ್ಥವಿದೆ. ಆದರೆ ಕಾಮವೇ ಜೀವನವಲ್ಲ! ಇದು ಅಡುಗೆಗೆ ಉಪ್ಪು ಇದ್ದಂತೆ. ಪ್ರಜ್ಞೆಯೆಂಬ ಧರ್ಮದ ಚೌಕಟ್ಟಿನಲ್ಲಿ ಹಿತಮಿತವಾದ ಯೋಗ್ಯ ಬಯಕೆ ಇರಬೇಕೆ ಹೊರತು ಅತಿಯಾಸೆಯಲ್ಲ. ಸಮತ್ವ ಸಾಧನೆ ಅಹಾರದಿಂದಲೇ ಪ್ರಾರಂಭವಾಗಿ, ವಿಹಾರ, ಕರ್ಮ, ನಿದ್ರೆ, ಇತ್ಯಾದಿಗಳಿಗೆ ವಿಸ್ತರಿಸಬೇಕು. ಹಾಗೆಯೇ, ಕಾಮವೆಂಬ ಮೂಲಾಧಾರದಿಂದ ಪ್ರಾರಂಭವಾಗಿ ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳ ಮೇಲೂ ಪ್ರಭುತ್ವ ಸಾಧಿಸಿದಾಗ ಜೀವನ ಶ್ರೇಯೋದಾಯಕ ಆಗಿದೆ ಎಂಬುದೇ ಇದರ ಸಾರಾಂಶ.
ಹಿಂದೂ ಧರ್ಮದಿಂದ ಸಿಡಿದು ಹೊಸ ಚಿಂತನೆಗಳನ್ನು ಪ್ರತಿನಿಧಿಸಿದ ಬುದ್ಧನನ್ನು ಅವತಾರ ಪುರುಷನೆಂದೇ ದಶಾವತಾರ ಪರಿಕಲ್ಪನೆಯಲ್ಲಿ ವಿಶ್ಲೇಷಿಸುತ್ತಾರೆ. ಇದರ ತರ್ಕಬದ್ಧ ವಿವರಣೆ ಏನೇ ಇರಲಿ, ಬುದ್ಧನು ಒಂದು ಪರಿವರ್ತನೆಯನ್ನು ಪ್ರತಿನಿಧಿಸುತ್ತಾನಾದ್ದರಿಂದ, ಮನುಕುಲದ ಬೆಳವಣಿಗೆಯ ಚಿತ್ರಣವಾಗಿ ದಶಾವತಾರವನ್ನು ನೋಡುವಾಗ ಇದು ಅರ್ಥಪೂರ್ಣ ಸೇರ್ಪಡೆಯಾಗಿಯೇ ತೋರುತ್ತದೆ.
ಕಲ್ಕ್ಯಾವತಾರ
ಪರಮಾತ್ಮನು ತನ್ನ ಮಾಯಾಜಾಲವನ್ನು ಬೀಸಿ, ಜಗತ್ತನೇ ಮೋಹಗೊಳಿಸಬಲ್ಲ ಜಗನ್ಮೋಹನ! ಅವನ ಜೀವರಿಗೆ ನಾನಾ ಅನುಭವವನ್ನು ನೀಡುವ ಪ್ರಯೋಗ ಶಾಲೆಯೇ ಜಗತ್ತು. ಯಾವ ಅವಧಿಯಲ್ಲಿ ಮನಸ್ಸು ಜಗತ್ತಿನ ನಾನಾ ವಿಷಯಾರ್ಥಗಳಿಂದಾಗಿ ಕಲುಷಿತವಾಗುವುದೋ ಅದನ್ನೇ ಕಲಿಯ ಅವಧಿ ಎನ್ನುತ್ತಾರೆ. ಅದುವೇ ಕಲಿಯುಗವಾಗುತ್ತದೆ. ಕಲಿ ಎಂದರೆ ಅಭ್ಯಾಸ ಮಾಡು, ತಿಳಿ ಎಂದರ್ಥ! ಈ ಜಗತ್ತಿನಲ್ಲಿ ನಾವು ಅನುಭವದ ಮೂಲಕ ತಿಳಿದದ್ದು ಅತ್ಯಲ್ಪ; ತಿಳಿಯಬೇಕಾದದ್ದು ಅಗಾಧವಾಗಿರುತ್ತದೆ! ಅನ್ನ, ಚಿನ್ನ, ಲೈಂಗಿಕತೆ, ಮನ್ನಣೆ ಎಂಬುವುಗಳೊಡನಿರುವ ದಾಹವನ್ನು ನೀಗಿ, ಆತ್ಮಸಂಯಮಯುತರಾಗುವುದೇ ಈ ಅವತಾರದ ಸಂದೇಶ.
ಅವತಾರಗಳ ಕಲ್ಪನೆಯಲ್ಲೇ ಕಲ್ಕಿ ಇನ್ನು ಹುಟ್ಟಿಲ್ಲ. ಇವನು ಬಿಳಿ ಕುದುರೆ ಏರಿ ಹಿರಿದ ಖಡ್ಗವ ಧರಿಸಿ ಆಧರ್ಮಿಗಳನ್ನು ಕೊಲ್ಲುತ್ತಾನೆ ಎಂದು ಕತೆ ಹೇಳುತ್ತದೆ. ಬಿಳಿ ಕುದುರೆ, ಖಡ್ಗ ಇವರೆಡು ಇದನ್ನು ಕಲ್ಪಿಸಿದವರ ಮಿತಿಯನ್ನು ಹೇಳುತ್ತವೆ. ಅವರು ನೋಡಿದ ವೇಗದ ವಾಹನ ಕುದುರೆ ಮತ್ತು ಆಯುಧ ಖಡ್ಗ ಆದ್ದರಿಂದ ಕಲ್ಕಿಯೇ ಅವರ ಮಿತಿಗೆ ಒಳಪಟ್ಟನು. ಇದು ಒಪ್ಪುವಂತಹವೂ ಅಲ್ಲ. ಆದರೆ ಕಲ್ಕಿ ಮಾನವ ಜನಾಂಗದ ಭವಿಷ್ಯವನ್ನು ಸೂಚಿಸುತ್ತದೆ. ಈ ಚಿತ್ರಣದ ಹಿಂದೆ ವೇಗ ಇರುವುದನ್ನು ಗಮನಕ್ಕೆ ತೆಗೆದುಕೊಂಡರೆ ಅಂತಹ ವೇಗ ಈಗ ನಮ್ಮ ಬದುಕಿನಲ್ಲಿ ಕಂಡು ಬರುತ್ತಿರುವುದರಿಂದ ಕಲ್ಕಿಯ ಕಲ್ಪನೆಯೂ ಅಂತಹ ವೇಗವನ್ನೇ ಸೂಚಿಸುತ್ತದೆ ಎಂದು ಗ್ರಹಿಸಬಹುದು.
Get in Touch With Us info@kalpa.news Whatsapp: 9481252093
Discussion about this post