ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಗರ್ಭಿಣಿಯೊಬ್ಬರ ತಪಾಸಣೆ ವಿಚಾರದಲ್ಲಿ ವೈದ್ಯಕೀಯ ನಿರ್ಲಕ್ಷ ತೋರಿದ ಪರಿಣಾಮ ಅಂಗವಿಕಲ ಶಿಶು ಜನಿಸಿದ್ದು, ನಿರ್ಲಕ್ಷ ತೋರಿದ ವೈದ್ಯರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಬರೋಬ್ಬರಿ ರೂ. 11,10,000 ದಂಡ ವಿಧಿಸಿದ ಘಟನೆ ನಡೆದಿದೆ.
ಘಟನೆ ಹಿನ್ನೆಲೆಯೇನು?
ಶ್ರೀನಗರ ಭಾವಿಕಟ್ಟಿ ಪ್ಲಾಟ್ ನಿವಾಸಿ ಪರಶುರಾಮ ಘಾಟಗೆ ಎಂಬುವವರು ತಮ್ಮ ಗರ್ಭಿಣಿ ಪತ್ನಿ ಪ್ರೀತಿಯನ್ನು 3ನೆಯ ತಿಂಗಳಿಂದ 9ನೆಯ ತಿಂಗಳಿನವರೆಗೆ ಧಾರವಾಡದ ಮಾಳಮಡ್ಡಿಯಲ್ಲಿರುವ ಖಾಸಗಿ ನರ್ಸಿಂಗ್ ಹೋಂನ ಪ್ರಸೂತಿ ತಜ್ಞೆ ಡಾ. ಸೌಭಾಗ್ಯ ಕುಲಕರ್ಣಿರವರ ಬಳಿ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆದಿದ್ದರು.
ಪ್ರಸೂತಿ ತಜ್ಞರು 2018ರ ಜುಲೈ 12ರಿಂದ 2019ರ ಜನವರಿ 8ರವರೆಗೂ 5 ಬಾರಿ ಪ್ರೀತಿ ಅವರಿಗೆ ಸ್ಕ್ಯಾನ್ ಮಾಡಿದ್ದರು. ಗರ್ಭದಲ್ಲಿನ ಮಗುವಿನ ಬೆಳವಣಿಗೆ ಚೆನ್ನಾಗಿದೆ ಹಾಗೂ ಮಗು ಆರೋಗ್ಯವಾಗಿದೆ ಎಂದು ತಿಳಿಸುತ್ತಿದ್ದರು. ದೂರುದಾರರ ಪತ್ನಿ ತನ್ನ 9ನೆಯ ತಿಂಗಳಿನಲ್ಲಿ ಅದೇ ವೈದ್ಯರ ಹತ್ತಿರ ತಪಾಸಣೆಗೆ ಹೋದಾಗ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲು ಅವರು ಸಲಹೆ ನೀಡಿದ್ದರು. ಆದರೆ ಹಣಕಾಸಿನ ತೊಂದರೆಯಿಂದಾಗಿ 2019ರ ಜನವರಿ 31ರಂದು ಪ್ರೀತಿ ಅವರಿಗೆ ಧಾರವಾಡ ಎಸ್’ಡಿಎಂ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದ್ದರು. ಆಗ ಹೆಣ್ಣು ಮಗು ಜನಿಸಿದ್ದು ಅದರ ಎರಡು ಕಾಲುಗಳು ಅಂಗವಿಕಲತೆಯಿಂದ ಕೂಡಿದ್ದವು.
Also read: ರೈಲ್ವೆ ಸ್ವಚ್ಛತಾ ಕಾರ್ಮಿಕರ ಮರು ನೇಮಕಕ್ಕೆ ಹೈಕೋರ್ಟ್ಗೆ ಅರ್ಜಿ: ಶಿವಣ್ಣ ಕೋಟೆ
ಆದರೆ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳ ಪ್ರಕಾರ ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನ್ ನಿಯಮಾವಳಿ ಪ್ರಕಾರ ಗರ್ಭಧಾರಣೆಯ 18-20 ವಾರಗಳ ಸ್ಕ್ಯಾನಿಂಗ್’ನಲ್ಲಿ ಮಗುವಿನ ಆರೋಗ್ಯ, ಅದರ ಅಂಗಾಂಗಗಳು ಸರಿಯಾಗಿ ಇವೆಯೋ ಅಥವಾ ಇಲ್ಲವೋ ಅನ್ನುವ ಬಗ್ಗೆ ತಪಾಸಣೆ ಮಾಡಿದ ವೈದ್ಯರಿಗೆ ಗೊತ್ತಾಗುತ್ತದೆ.
ಆದರೆ 20 ವಾರಗಳಿಂದ 36 ವಾರಗಳ ಪ್ರೀತಿಯ ಸ್ಕ್ಯಾನಿಂಗನ್ನು ಎದುರುದಾರ ಪ್ರಸೂತಿ ತಜ್ಞರು ತೆಗೆದು ನೋಡಿದಾಗ ಅವರಿಗೆ ಮಗುವಿನ ಅಂಗವಿಕಲತೆ ಬಗ್ಗೆ ಗೊತ್ತಿತ್ತು. ಆ ವಿಷಯವನ್ನು ದೂರುದಾರರಿಗೆ ತಿಳಿಸದೇ ಮೋಸ ಮಾಡಿ ವೈದ್ಯಕೀಯ ನಿರ್ಲಕ್ಷ ತೋರಿ ತಮಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಆ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಪ್ರಸೂತಿ ತಜ್ಞರು ಕಾಲಕಾಲಕ್ಕೆ ದೂರುದಾರರ ಪತ್ನಿಯ ಸ್ಕ್ಯಾನಿಂಗ್ ತೆಗೆದು ತಪಾಸಣೆ ಮಾಡಿದಾಗ ಅವರಿಗೆ ಗರ್ಭದಲ್ಲಿರುವ ಶಿಶುವಿನ ಅಂಗವಿಕಲತೆ ಗೊತ್ತಾಗುತ್ತದೆ.
ಎಂಟಿಪಿ ಕಾಯ್ದೆ ಪ್ರಕಾರ 20 ವಾರಗಳ ಗರ್ಭದ ಸಮಯದಲ್ಲಿ ಶಿಶುವಿನ ಅಂಗವಿಕಲತೆಯ ಬಗ್ಗೆ ವೈದ್ಯರಿಗೆ ತಿಳಿದಿದ್ದು ಆ ಸಂಗತಿಯನ್ನು ಅವರು ದೂರುದಾರರ ಗಮನಕ್ಕೆ ತಂದಿದ್ದರೆ ಅವರು ಕಾನೂನಿನ ಪ್ರಕಾರ ಅಂಗವಿಕಲ ಮಗುವನ್ನು ಗರ್ಭದಲ್ಲಿ ಉಳಿಸಿಕೊಳ್ಳಬೇಕೋ ಅಥವಾ ಬೇಡವೋ ಅನ್ನುವ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಿದ್ದರು. ಆದರೆ ಶಿಶುವಿನ ಅಂಗವಿಕಲತೆಯ ಮಹತ್ವದ ಸಂಗತಿಯನ್ನು ತಜ್ಞ ವೈದ್ಯಯಾದ ಎದುರುದಾರರು ದೂರುದಾರರಿಗೆ ತಿಳಿಸದೆ ಅವರು ತಮ್ಮ ವೈದ್ಯಕೀಯ ಕರ್ತವ್ಯದಲ್ಲಿ ತೀವ್ರ ನಿರ್ಲಕ್ಷತೆ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಆಯೋಗ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ. ವೈದ್ಯರ ಅಂತಹ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ಮತ್ತು ರಾಷ್ಟಿçÃಯ ಗ್ರಾಹಕರ ಆಯೋಗದ ತೀರ್ಪುಗಳನ್ನು ಆಧರಿಸಿ ಜಿಲ್ಲಾ ಗ್ರಾಹಕರ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ತಜ್ಞರ ನಿರ್ಲಕ್ಷತನದಿಂದ ಜನಿಸಿರುವ ಅಂಗವಿಕಲ ಹೆಣ್ಣು ಮಗುವಿನ ಈವರೆಗಿನ ಚಿಕಿತ್ಸೆ ಹಾಗೂ ಭವಿಷ್ಯದ ಚಿಕಿತ್ಸೆ ಮತ್ತು ಅದರ ಭವಿಷ್ಯದ ಜೀವನ ನಿರ್ವಹಣೆಯ ಬಗ್ಗೆ ಆಯೋಗ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಜನಿಸಿದ ಹೆಣ್ಣು ಮಗುವಿನ ಈವರೆಗಿನ ವೈದ್ಯಕೀಯ ಖರ್ಚಿಗೆ ರೂ.50,000, ದೂರುದಾರರ ಓಡಾಟ ಮತ್ತು ಖರ್ಚು ವೆಚ್ಚಕ್ಕೆ ರೂ.50,000, ಅಂಗವಿಕಲ ಮಗುವಿನ ಪಾಲಕರಿಗೆ ಆಗಿರುವ ಮಾನಸಿಕ ನೋವು ಮತ್ತು ಹಿಂಸೆಗಾಗಿ ರೂ.2,00,000, ಅಂಗವಿಕಲ ಹೆಣ್ಣುಮಗುವಿನ ಭವಿಷ್ಯದ ವೈದ್ಯಕೀಯ ಖರ್ಚು ವೆಚ್ಚಕ್ಕಾಗಿ ರೂ.3,00,000 ಹಾಗೂ ಸದರಿ ಅಂಗವಿಕಲ ಹೆಣ್ಣು ಮಗುವಿನ ಭವಿಷ್ಯದ ಜೀವನ ನಿರ್ವಹಣೆಗಾಗಿ ರೂ.5,00,000 ಮತ್ತು ಈ ಪ್ರಕರಣದ ಖರ್ಚು ವೆಚ್ಚ ಎಂದು ರೂ.10,000 ಸೇರಿ ಒಟ್ಟು ರೂ.11,10,000 ಪರಿಹಾರವನ್ನು ಈ ತೀರ್ಪು ನೀಡಿದೆ.
ತೀರ್ಪಿನ ದಿನಾಂಕದಿಂದ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ನೀಡುವಂತೆ ತಪ್ಪಿದ್ದಲ್ಲಿ ಅ ಮೊತ್ತದ ಮೇಲೆ ಶೇ.8 ರಂತೆ ಬಡ್ಡಿ ಕೊಡುವಂತೆ ಎದುರುದಾರ ತಜ್ಞ ವೈದ್ಯರಿಗೆ ಆಯೋಗ ಆದೇಶಿಸಿದೆ.
ಸದರಿ ರೂ.11,10,000 ಪರಿಹಾರದಲ್ಲಿ ರೂ.8,00,000 ಹಣವನ್ನು ಅಲ್ಪವಯಿ ಅಂಗವಿಕಲ ಹೆಣ್ಣು ಮಗುವಿನ ಹೆಸರಿನಲ್ಲಿ ಅವಳು ವಯಸ್ಕಳಾಗುವವರೆಗೆ ದೂರುದಾರರು ಇಚ್ಚಿಸುವ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಖಾಯಂ ಠೇವಣಿ ಇಡಲು ಮತ್ತು ಪರಿಹಾರದ ಪೂರ್ತಿ ಹಣವನ್ನು ಅಂಗವಿಕಲ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಖರ್ಚು ಮಾಡಲು ಆಯೋಗ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post