ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಜನಪ್ರತಿನಿಧಿಗಳು ಕ್ಷೇತ್ರದ ಶಾಸಕರು. ಇವರು ತಮ್ಮ ಕ್ಷೇತ್ರದ ಎಲ್ಲ ಇಲಾಖೆಗಳು ಇವರ ಅಧಿಕಾರದಲ್ಲಿ ಬರುತ್ತವೆ. ಶಾಸಕರು ತಮ್ಮ ಕ್ಷೇತ್ರದಲ್ಲಿ ಆಗುವಂತಹ ಕಾರ್ಯಕ್ರಮಗಳ ಶಂಕುಸ್ಥಾಪನೆಗಳು, ಉದ್ಘಾಟನೆ, ಗುದ್ದಲಿ ಪೂಜೆಗಳು ಅವುಗಳನ್ನಷ್ಟೇ ಮಾಡುತ್ತಾ ಕುಳಿತುಕೊಂಡರೇ ಸಾಲದು. ತಮ್ಮ ಕ್ಷೇತ್ರವನ್ನು ಭ್ರಷ್ಟಾಚಾರ ರಹಿತ ಕ್ಷೇತ್ರವನ್ನಾಗಿ ಮಾಡಬೇಕಾದ ಗುರುತರ ಜವಾಬ್ದಾರಿಯನ್ನು ಹೊಂದಿರಬೇಕು. ಇವರ ಜೊತೆಗೆ ಮಾಜಿ ಶಾಸಕರು ವಿರೋಧ ಪಕ್ಷದವರಂತೆ ಕಾರ್ಯನಿರ್ವಹಿಸಬೇಕಾಗುತ್ತದೆ.
ಇಷ್ಟೇ ಅಲ್ಲದೆ ಕ್ಷೇತ್ರದಲ್ಲಿ ಬರುವಂತಹ ಅನೇಕ ಸಂಘ ಸಂಸ್ಥೆಗಳು ಶಾಸಕರು ಹಾಗೂ ಮಾಜಿ ಶಾಸಕರ, ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿಟ್ಟು ಲೋಪದೋಷವಾಗದಂತೆ ಕಾರ್ಯನಿರ್ವಹಿಸಬೇಕಾದ ಜವಾಬ್ದಾರಿಯನ್ನು ಕ್ಷೇತ್ರದ ಸಂಘ ಸಂಸ್ಥೆಗಳು ಮೇಲೆ ಮಹತ್ತರವಾದ ಜವಾಬ್ದಾರಿ ಇರುತ್ತದೆ. ಇವೆಲ್ಲವೂ ಒಟ್ಟಿಗೆ ಹೋದಾಗ ಮಾತ್ರ ಕ್ಷೇತ್ರವನ್ನು ಭ್ರಷ್ಟಾಚಾರ ರಹಿತ ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಸಾಧ್ಯವಾಗುತ್ತದೆ.
ಒಂದು ವಿಧಾನಸಭಾ ಕ್ಷೇತ್ರ ಎಂದಾಗ ಆ ಕ್ಷೇತ್ರದ ಕೆಲಸ ಕಾರ್ಯಗಳು ಪ್ರಾರಂಭವಾಗುವುದು ತಾಲೂಕು ಕಚೇರಿಯಿಂದ. ಈ ತಾಲೂಕು ಕಚೇರಿಯಲ್ಲಿ ದಂಡಾಧಿಕಾರಿ, ತಾಲ್ಲೂಕು ಕೇಂದ್ರದಲ್ಲಿ ಬರುವ ಎಲ್ಲ ಸರ್ಕಾರಿ ಕಚೇರಿಗಳ ಮೇಲೆ ಹಿಡಿತವನ್ನು ತಾಲೂಕು ದಂಡಾಧಿಕಾರಿ ಹೊಂದಿರುತ್ತ್ತಾರೆ. ಇವರು ಇವರ ಕೆಳಗೆ ಬರುವಂತಹ ಎಲ್ಲ ಇಲಾಖೆಗಳಲ್ಲೂ ಜನರಿಗೆ ಹತ್ತಿರವಾಗುವ ಸ್ನೇಹ ಪರವಾದ ವಾತಾವರಣವನ್ನು ನಿರ್ಮಾಣ ಮಾಡಿ, ಜನರ ಕೆಲಸ ಕಾರ್ಯಗಳು ಕೈಗೆ ಅತಿ ಸುಲಭವಾಗಿ ಆಗುವಂತೆ ಮಾಡುವ ಗುರುತರ ಜವಾಬ್ದಾರಿ ಹೊಂದಿರುತ್ತಾರೆ.
ರೈತರಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ, ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ, ತಮ್ಮ ಜಮೀನು ಆಸ್ತಿಗಳನ್ನು ಪರಭಾರೆ ಮಾಡುವ ಸಬ್’ರಿಜಿಸ್ಟರ್ ಕಚೇರಿಗಳಿಂದ, ಪಂಚಾಯತ್ ಅಭಿವೃದ್ಧಿ ಕೆಲಸಗಳನ್ನು ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯಿತಿಗಳಿಂದ, ಜನರ ರಕ್ಷಣೆ ಮತ್ತು ಶಾಂತಿ ಸುವ್ಯವಸ್ಥೆಯ ಜವಾಬ್ದಾರಿ ಪೊಲೀಸ್ ಇಲಾಖೆಗಳಿಂದ, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವಂಥ ಗಂಭೀರ ಕಾಯಿಲೆಗಳು ಹಾಗೂ ತುರ್ತು ಸೇವೆಗಳು ಸರಕಾರಿ ಸಾರ್ವಜನಿಕ ಆಸ್ಪತ್ರೆಗಳಿಂದ, ಜನನ ಮರಣ ಹಾಗೂ ಇತರ ಗ್ರಾಮೀಣ ಭಾಗದ ಸೇವೆಗಳನ್ನು ನೀಡುವ ಗ್ರಾಮ ಲೆಕ್ಕಾಧಿಕಾರಿಗಳಿಂದ, ನಗರ ಭಾಗದ ಜನರ ಕುಂದು ಕೊರತೆಗಳನ್ನು ಆಲಿಸುವ ನಗರ ಸಭೆಗಳಿಂದ, ಹೀಗೆ ನೀರು ನೈರ್ಮಲ್ಯ ವಸತಿ ಆರೋಗ್ಯ ಅರಣ್ಯ ಲೋಕೋಪಯೋಗಿ ಇಲಾಖೆಗಳು ಮತ್ತು ಭೂ ಮತ್ತು ಗಣಿ ಇಲಾಖೆ ಹೀಗೆ ಹತ್ತಾರು ಇಲಾಖೆಗಳು ಒಂದು ಕ್ಷೇತ್ರದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ.
ಇವೆಲ್ಲದರ ಮೇಲೆ ಕ್ಷೇತ್ರದ ಶಾಸಕರಿಗೆ ಸಂಪೂರ್ಣ ಹಿಡಿತವಿರುತ್ತದೆ. ಈ ಎಲ್ಲ ಇಲಾಖೆಗಳನ್ನು ಬಳಸಿಕೊಂಡು ತಮ್ಮ ಕ್ಷೇತ್ರದ ಜನತೆಗೆ ಎಲ್ಲೂ ಲೋಪದೋಷವಾಗದಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಆ ಕ್ಷೇತ್ರ ಭ್ರಷ್ಟಾಚಾರ ರಹಿತ ಮಾದರಿ ಮಾದರಿ ಕ್ಷೇತ್ರವನ್ನಾಗಿ ಮಾಡಲು ಸಾಧ್ಯ. ಇದಕ್ಕೆ ಮಾಜಿ ಶಾಸಕರು ಸಂಘ ಸಂಸ್ಥೆಯವರು ಭ್ರಷ್ಟ ಅಧಿಕಾರಿಗಳಿಗೆ ಸಿಂಹ ಸ್ವಪ್ನವಾಗಿ ಕ್ಷೇತ್ರದಲ್ಲಿ ಆಗುವ ಕೆಲಸ ಕಾರ್ಯಗಳ ಮೇಲೆ ಹದ್ದಿನ ಕಣ್ಣಿಟ್ಟು ಕಾರ್ಯನಿರ್ವಹಿಸಬೇಕು. ಅದು ಅವರ ಜವಾಬ್ದಾರಿಯೂ ಹೌದು. ಆಗ ಜನರು ತಾವು ಕಟ್ಟಿದ ತೆರಿಗೆ ಹಣ ನಮ್ಮ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಬಳಸಿದ್ದಾರೆ ಎಂದು ಹೆಮ್ಮೆ ಪಡುತ್ತಾರೆ.
ಆದರೆ ಹರಿಹರ ಕ್ಷೇತ್ರದಲ್ಲಿ ಮಾತ್ರ ಈಗ ಹಾಗೆ ಆಗುತ್ತಿಲ್ಲ ಅಲ್ಲವೇ?
ಹರಿಹರ ಕ್ಷೇತ್ರದ ಜನಪ್ರಿಯ ಶಾಸಕರೇ, ತಾಲೂಕು ದಂಡಾಧಿಕಾರಿಗಳೇ, ಮಾಜಿ ಶಾಸಕರೇ, ಚುನಾವಣೆಗಳು ನಡೆದು ಒಂದೂವರೆ ವರ್ಷದ ಅವಧಿಯಲ್ಲಿ ನಿಮ್ಮ ಕ್ಷೇತ್ರಗಳನ್ನು ಮರೆತು ಬಿಟ್ಟರೆ? ನೀವು ನಿಮ್ಮ ಮತದಾರರಿಗೆ ಚುನಾವಣೆಯ ಸಂದರ್ಭದಲ್ಲಿ ನೀಡಿದ ಆಶ್ವಾಸನೆಗಳು ನಿಮಗೆ ನೆನಪಿಲ್ಲವೆ? ನಿಮ್ಮ ಕ್ಷೇತ್ರಗಳು ಅಭಿವೃದ್ಧಿಯಾಗುವ ಆಸೆ ನಿಮಗಿಲ್ಲವೇ? ಹಾಗಿದ್ದ ಮೇಲೆ ನಿಮ್ಮ ಕ್ಷೇತ್ರದಲ್ಲಿ ಏಕೆ ಭ್ರಷ್ಟಾಚಾರ ತಾಂಡವಾಡುತ್ತಿದೆ? ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ? ನಿಜವಾಗಲೂ ನಿಮ್ಮ ಕ್ಷೇತ್ರದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಿಂದ ನಿಮ್ಮ ಕ್ಷೇತ್ರದ ಜನತೆಗೆ ಉತ್ತಮವಾದ ಚಿಕಿತ್ಸೆ ಸಿಗುತ್ತಿದೆಯೇ? ತಾಲೂಕು ಕಚೇರಿಯಲ್ಲಿ ಮಧ್ಯವರ್ತಿ ಕೆಲಸ ಮಾಡುತ್ತಿದ್ದಾರೆ ಎಂದು ಹದಿನಾರು ಜನರ ಮೇಲೆ ಕೇಸು ದಾಖಲಿಸಿದ ಮೇಲೆ ಅಲ್ಲಿ ಭ್ರಷ್ಟಾಚಾರ ನಿಂತಿದೆಯೇ?
ರೈತ ಈ ದೇಶದ ಬೆನ್ನೆಲುಬು ಅವನಿಗೆ ನಿಮ್ಮ ಕ್ಷೇತ್ರದ ಕೃಷಿ ಇಲಾಖೆಯಿಂದ ಕಳಪೆ ಬೀಜ ಪೂರೈಕೆ ಆಗುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಲೋಕೋಪಯೋಗಿ ಇಲಾಖೆ ಹಾಗೂ ಅಭಿಯಂತರ ಇಲಾಖೆಗಳಿಂದ ಕೇವಲ ಒಂದು ಒಂದೂವರೆ ತಿಂಗಳಲ್ಲಿ ಸಿಸಿ ರಸ್ತೆಗಳು ತಮ್ಮ ಗುಣಮಟ್ಟಗಳನ್ನು ಕಳೆದುಕೊಂಡು ಹಾಳಾಗುತ್ತಿರುವುದು ನಿಮ್ಮ ಗಮನಕ್ಕೆ ಇದುವರೆಗೂ ಬಂದಿಲ್ಲವೇ? ಮಧ್ಯ ಕರ್ನಾಟಕದ ಹೃದಯ ಭಾಗವಾಗಿರುವ ಹರಿಹರದ ನಗರಸಭೆಯ ಮುಂಭಾಗದಲ್ಲಿ ನಗರಸಭೆ ಎಂಬ ನಾಮಫಲಕವೇ ಇಲ್ಲ ಇದನ್ನು ನೀವು ಗಮನಿಸಿಲ್ಲವೇ? ಹರಪನಹಳ್ಳಿ ಸರ್ಕಲ್’ನಿಂದ ಶಿವಮೊಗ್ಗಕ್ಕೆ ಹೋಗುವ ರಸ್ತೆಯಲ್ಲಿ ರಾತ್ರಿಯ ಹೊತ್ತು ಬೀದಿದೀಪಗಳೇ ಉರಿಯುತ್ತಿಲ್ಲ. ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಸಬ್ ರಿಜಿಸ್ಟಾರ್ ಕಚೇರಿ ಲಂಚದ ಹಾವಳಿ ಮಿತಿ ಮೀರಿದ್ದರೂ ಜನರು ಪರದಾಡುತ್ತಿರುವ ದೃಶ್ಯ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಶಿಶು ಅಭಿವೃದ್ಧಿ ಇಲಾಖೆಯಿಂದ ಮಕ್ಕಳು ಮಾತೆಯರಿಗೆ ಪೂರೈಕೆ ಆಗುತ್ತಿರುವ ಆಹಾರ ಪದಾರ್ಥಗಳು ಅಂಗನವಾಡಿ ಶಿಕ್ಷಕಿಯರ ಮನೆಯಲ್ಲಿ ದಾಸ್ತಾನು ಆಗಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ನಿಮ್ಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳು ಜನಸಾಮಾನ್ಯರಿಗೆ ಹಣದ ಆಸೆಗೆ ನಕಲಿ ಅಂಕಪಟ್ಟಿ ನೀಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಹೀಗೆ ಹತ್ತಾರು ಇಲಾಖೆಗಳಿಂದ ನಿಮ್ಮ ಕ್ಷೇತ್ರದ ಮತದಾರರಿಗೆ ತೊಂದರೆಯಾಗುತ್ತಿದ್ದರೂ ನೀವು ಏಕೆ ಸುಮ್ಮನಿದ್ದೀರಿ!
ಮಾಜಿ ಶಾಸಕರೇ ನೀವು ನಿಮ್ಮ ಕ್ಷೇತ್ರದಲ್ಲಿ ವಿರೋಧ ಪಕ್ಷದವರಂತೆ ಕಾರ್ಯ ನಿರ್ವಹಿಸಿ ನಿಮ್ಮ ಮತದಾರರಿಗೆ ನ್ಯಾಯ ಒದಗಿಸುವ ಆಸೆ ನಿಮಗಿಲ್ಲವೇ? ಕೇವಲ ಚುನಾವಣೆ ಸಂದರ್ಭದಲ್ಲಿ ಮತದಾರರ ಮನೆಗೆ ಹೋಗಿ ಮತವನ್ನು ಭಿಕ್ಷೆ ಬೇಡುವ ಬದಲು ಅಭಿವೃದ್ಧಿ ಪರ ಚಿಂತೆ ಮಾಡಿ ನಿಮ್ಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಿ. ನಿಮ್ಮ ಕ್ಷೇತ್ರದ ಜನತೆಯ ಕೆಲಸ ಕಾರ್ಯಗಳನ್ನು ಕಚೇರಿಗಳಿಂದ ಸುಲಭವಾಗಿ ಸಿಗುವಂತಹ ವಾತಾವರಣ ನಿರ್ಮಾಣ ಮಾಡಿ. ಈಗಲೂ ಕಾಲ ಮಿಂಚಿಲ್ಲ. ನಿಮ್ಮ ಕ್ಷೇತ್ರದ ಎಲ್ಲ ಇಲಾಖೆ ಅಧಿಕಾರಿಗಳು, ಕ್ಷೇತ್ರದ ಮಾಜಿ ಶಾಸಕರುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು, ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸಾಹಿತಿಗಳು, ವರ್ತಕರು, ಮಾಧ್ಯಮ ಮಿತ್ರರು ಎಲ್ಲರನ್ನೂ ಒಂದು ಕಡೆ ಸೇರಿಸಿ ತುರ್ತು ಸಭೆ ಕರೆದು ಕ್ಷೇತ್ರದ ಅಭಿವೃದ್ಧಿಯ ವಿಚಾರದ ಸೂಚನೆಗಳನ್ನು ಪಡೆದು ಮುಂದುವರೆಯಬಹುದು ಅಲ್ಲವೇ.
ಇದು ಕೇವಲ ನನ್ನ ಅನಿಸಿಕೆ. ಇದರಿಂದ ಯಾರೂ ಬೇಸರ ಪಡೆದುಕೊಳ್ಳಬೇಡಿ. ಇದು ಕ್ಷೇತ್ರದ ಅಭಿವೃದ್ಧಿಯ ಕನಸಿನ ಬರವಣಿಗೆ ಅಷ್ಟೇ. ನಮಗೆ ನಮ್ಮ ಕ್ಷೇತ್ರ ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ಬರವಣಿಗೆ ಮಾಡಿದ್ದೇನೆ. ಈ ನನ್ನ ಬರವಣಿಗೆಯಿಂದ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಇರಲಿ.
ಇಂತಿ ನಿಮ್ಮ: ಪ್ರಕಾಶ್ ಮಂದಾರ್, ಪತ್ರಕರ್ತರು
Discussion about this post