ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ: ನಾಳೆಯಿಂದ ಕೊಪ್ಪಳದಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜ – ರಸಗೊಬ್ಬರಗಳ ವಿತರಣೆ ನಡೆಯಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ತಾವು ಬೆಳೆಹಾನಿ ಪರಿಶೀಲಿಸಿದ್ದು ಸುಮಾರು 75 ಸಾವಿರ ಎಕರೆಯಷ್ಟು ಭತ್ತದ ಬೆಳೆ ನಾಶವಾಗಿದೆ. ವಿಶೇಷ ಟಾಸ್ಕ್ ಪೋರ್ಸ್ ರಚನೆ ಮಾಡಿ ಎರಡು ದಿನಗಳ ಒಳಗೆ ವರದಿ ನೀಡಲು ಸೂಚಿಸಲಾಗಿದೆ. ವರದಿ ಬಂದ ನಂತರ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪರಿಹಾರ ಬಿಡುಗಡೆಗೆ ಮನವಿ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದರು.
ಗಂಗಾವತಿ, ಕಾರಟಗಿಗಳಲ್ಲಿ ರೈತರು ಬೆಳೆಗಳ ಸ್ಯಾಂಪಲನ್ನು ತೆಗೆದುಕೊಂಡು ಹೋಗುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ.
ರೈತರು ತಮಗೆ ಸೂಕ್ತವೆನ್ನಿಸಿದ ಕಡೆ ತಾವು ಬೆಳೆದ ಬೆಳೆಯ ಫಸಲಿನ ಸ್ಯಾಂಪಲ್ ತೆಗೆದುಕೊಂಡು ಹೋಗಿ ಕೊಡಬಹುದು. ಇತರರು ತಾವಾಗೇ ಬಂದು ಸ್ಯಾಂಪಲ್ ಸಂಗ್ರಹಣೆ ಮಾಡಬಾರದು.ರೈತರು ಮಾರುಕಟ್ಟೆಗಳಿಗೆ ಹೋಗುವಾಗ ಪೊಲೀಸರು ತೊಂದರೆ ಕೊಡಬಾರದು. ಈ ಬಗ್ಗೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು.
ಮಾರುಕಟ್ಟೆಗಳಿಗಾಗಲೀ ಕೇಂದ್ರಗಳಿಂದಾಗಲೀ ಕಳಪೆ ಬೀಜ, ಗೊಬ್ಬರ ಪೂರೈಕೆಯಾಗಿರುವುದು ಕಂಡುಬಂದರೆ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಪೊಲೀಸರು ನಿಗಾವಹಿಸಬೇಕು ಹಾಗೂ ಇಲಾಖೆಯಿಂದ ವಿಝಲೆನ್ಸ್ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಇಂತಹ ಅಪರಾಧದ ಹಿಂದೆ ಯಾರೇ ಇರಲಿ ಎಷ್ಟೇ ದೊಡ್ಡವರಿರಲಿ ಯಾರಿಗೂ ಸೊಪ್ಪು ಹಾಕುವುದಿಲ್ಲ, ಸುಮ್ಮನೆ ಬಿಡುವುದಿಲ್ಲ ಎಂದು ಪುನರ್ ಎಚ್ಚರಿಸಿದರು.
ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆ ಕೊಡಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸ್ಪಷ್ಟ ಸುತ್ತೋಲೆಯೇ ಇದೆ. ರೈತರ ಪರಿಕರ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಲಾಕ್ ಡೌನ್ ತೆರವಾಗಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರದ ನಿಯಮ ಪಾಲಿಸುವುದು ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಗೂ ಮುನ್ನ ಸಭೆ
ಕೊರೋನಾ ನಿರ್ಬಂಧಿತ ಅವಧಿಯಲ್ಲಿ ಕೃಷಿ ಇಲಾಖೆಗಳ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಹಾಗೂ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ರೈತರ ಸ್ಥಿತಿಗತಿ ಕುರಿತು ಇಲ್ಲಿನ್ ಜಿಲ್ಲಾ ಸಭಾಂಗಣದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.
ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಆಗದಂತೆ ಅಂತಾರಾಜ್ಯಗಳಿಂದ ರಸಗೊಬ್ಬರ ತರುವ ಸಾಗಣಿಕೆದಾರರಿಗೆ ಗ್ರೀನ್ ಪಾಸ್ ವಿತರಿಸಬೇಕು ರಸಗೊಬ್ಬರದ ಕೊರತೆ ಆಗದಂತೆ ನೋಡಿಕೊಳ್ಳುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಆಗ ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರು ಮಾತನಾಡಿ ಮುಂಗಾರು ಹಂಗಾಮಿನಲ್ಲಿ 2.5 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಬೀಜ ಪರಿವರ್ತನೆ ಆಧಾರದ ಮೇಲೆ 30 ಸಾವಿರ ಕ್ವಿಂಟಲ್ ಬೀಜಗಳ ಅಗತ್ಯತೆಯಿದೆ. ಬೇಡಿಕೆ ಅನುಗುಣವಾಗಿ ಬೀಜಗಳ ದಾಸ್ತಾನು ಮಾಡಿದ್ದು ಬೀಜಗಳ ಕೊರತೆ ಆಗದಂತೆ ನೋಡಿಕೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ವಿಶೇಷವಾಗಿ ಗಂಗಾವತಿ ತಾಲೂಕಿನ ಬಾಬುರೆಡ್ಡಿ ಕ್ಯಾಂಪ್, ಸಿಂಗನಾಳ್ ಕ್ಯಾಂಪ್, ಹಣವಾಳ ಹಾಗೂ ಜಿರಾಳ ಕಲ್ಲುಗುಡಿ ಗ್ರಾಮಗಳಲ್ಲಿ ಎ.7 ರಂದು ಸುರಿದ ಅಕಾಲಿಕ ಗಾಳಿಮಳೆಹೆ ಸುಮಾರು 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಗಾಳಿ ಹಾಗೂ ಆಣೆಕಲ್ಲು ಮಳೆಯ ಹೊಡೆತದಿಂದ ಭತ್ತ ಮಾಗುವ ಮೊದಲೇ ಮೊಳಕೆ ಒಡೆಯುವ ಸಂಭವವಿರುತ್ತದೆ. ಈ ಬಗ್ಗೆ ನಿಗಾವಹಿಸಲು ಅಧಿಕಾರಿಗಳ ಗಮನಕ್ಕೆ ತರಲಾಯಿತು. ಜಿಲ್ಲೆಯ ಕೃಷಿ ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಹಾನಿಯ ಲೆಕ್ಕ ನೀಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಎಪಿಎಂಸಿ ಮಾರುಕಟ್ಟೆಗಳು ಪ್ರಾರಂಭವಾಗದಿರುವುದನ್ನು ಗಮನಿಸಿ, ಸರ್ಕಾರದ ಸೂಚನೆಯಂತೆ ತಕ್ಷಣವೇ ವ್ಯಾಪಾರಸ್ಥ ಹಾಗೂ ಖರೀದಿದಾರರ ಯಾದಿಯನ್ನು ತಯಾರಿಸಿ ಅವರಿಗೆ ಪಾಸ್ ನೀಡಿ ಸಮಾಜಿಕ ಅಂತರ ಕಾಯ್ದುಕೊಂಡು ಕೂಡಲೇ ಎಂಪಿಎಂಸಿ ಮಾರುಕಟ್ಟೆ ಪ್ರಾರಂಭಿಸಬೇಕು. ಈ ಸಾಲಿನಲ್ಲಿ ಹಿಂಗಾರು ಬೆಳೆಗಳು ಅದರಲ್ಲೂ ವಿಶೇಷವಾಗಿ ಜೋಳ, ಕಡಲೆ, ಶೇಂಗಾ ಬೆಳೆಗಳ ಇಳುವರಿ ಚೆನ್ನಾಗಿ ಬಂದಿದ್ದು ಕೊರೋನಾ ನಿರ್ಬಂಧಿತ ಅವಧಿಯಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಕೃಷಿ ಚಟುವಟಿಕೆ ಗಳು ನಿಲ್ಲಬಾರದೆಂದು ಸರ್ಕಾರವು ಹೊರಡಿಸಿದ ಸುತ್ತೊಲೆಯಂತೆ ತಕ್ಷಣವೇ ಖರೀದಿ ಪ್ರಕ್ರಿಯೆ ಪ್ರಾರಂಭಿಸಬೇಕು. ಈಗಾಗಲೇ ಖರೀದಿಸಿದ ರೈತರಿಗೆ ತಕ್ಷಣವೇ ಹಣ ಪಾವತಿಸಬೇಕು ಎಂದರು.
ಕೊರೋನಾ ನಿರ್ಬಂಧಿತ ಅವಧಿಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರ ಬ್ಯಾಂಕ್ ಖಾತೆಗೆ ಹಾಕಿದ ಹಣವನ್ನು ರೈತರ ಅನುಮತಿ ಇಲ್ಲದೆ ಅವರ ಸಾಲದ ಮರುಪಾವತಿಗೆ ಹೊಂದಿಸಿಕೊಳ್ಳುತ್ತಿರುವುದು ಹಾಗೂ ಜಿಲ್ಲೆಯಲ್ಲಿ ಭತ್ತದ ಕಟಾವು ಪ್ರಾರಂಭ ಆಗಿದ್ದು ಸಾಗಾಣಿಕಾ ನಿರ್ಬಂಧ ಇರುವುದರಿಂದ ಕಟಾವು ಯಂತ್ರದವರು ದುಪ್ಪಟ್ಟು ದರ ಕೇಳುತ್ತಿರುವುದರ್ ವಿರುದ್ಧ ಗಮನಹರಿಸಬೇಕು. ಮುಂದೆ ಈ ರೀತಿ ಆಗಬಾರದು ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಖರೀದಿಗೆ ಬಂದ ರೈತರಿಗೆ ಅಧಿಕಾರಿಗಳು ಹೊಲದ ಪಹಣಿಯ ಪ್ರತಿ ಕೇಳುತ್ತಿರುವುದನ್ನು ಗಮನಿಸಿದ ಕೃಷಿ ಸಚಿವರು, ಕೊರೊನಾ ನಿರ್ಬಂಧಿತ ಅವಧಿಯಲ್ಲಿ ಜೆರಾಕ್ಸ್ ಯಂತ್ರಗಳ ಅಂಗಡಿ ತೆರೆಯದ ಕಾರಣ ಪಹಣಿ ಪತ್ರದ ಜೆರಾಕ್ಸ್ ಪ್ರತಿ ಕೊಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ರೈತನ ಸರ್ವೆ ನಂಬರ್ ಹಾಗೂ ಆಧಾರ ಕಾರ್ಡ್ ನಂಬರ್ ಅನ್ನು ನಮೂದಿಸಿಕೊಂಡು ಆನ್’ಸೈನ್ ಮೂಲಕ ಪರೀಶಿಲಿಸಿ ಖಚಿತ ಪಡಿಸಿಕೊಂಡು ಬೀಜ ವಿತರಣೆ ಮಾಡುವಂತೆ ಜಂಟಿ ನಿರ್ದೇಶಕರಿಗೆ ಸಚಿವರು ಸಲಹೆ ನೀಡಿದರು.
ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಫ್ ಕಾಮ್ಸ್, ರೈತ ಉತ್ಪಾದಕರ ಸಂಘಗಳ ಮೂಲಕ ತರಕಾರಿ ಹಾಗೂ ಹಣ್ಣು ಖರೀದಿಸಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆಯನ್ನು ಹೆಚ್ಚಿಸಬೇಕು. ಜಿಲ್ಲೆಯ ಪಶುಸಂಗೋಪನಾ ಅಧಿಕಾರಿಗಳು ಕೋಳಿ ಫಾರಂಗಳಿಗೆ ಭೇಟಿ ನೀಡಿ ಸ್ವಚ್ಛತೆಯೆಡೆಗೆ ಗಮನ ಹರಿಸಬೇಕು ಎಂದರು.
ಸಭೆಯಲ್ಲಿ ಕೊಪ್ಪಳ ಜಿಲ್ಲಾ ಸಂಸದ ಸಂಗಣ್ಣ ಕರಡಿ, ಶಾಸಕರಾದ ಅಮರೇಗೌಡ ಬಯ್ಯಾಪುರ, ಹಾಲಪ್ಪ ಆಚಾರ್ಯ, ರಾಘವೇಂದ್ರ ಹಿಟ್ನಾಳ್, ಬಸವರಾಜ್ ದಡೆಸೂಗುರು ಪರಣ್ಣ ಮುನವಳ್ಳಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಿಶ್ವನಾಥ್ ರೆಡ್ಡಿ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
(ವರದಿ: ಕೃಷಿ ಸಚಿವರ ಮಾಧ್ಯಮ ಕಾರ್ಯದರ್ಶಿ)
Get in Touch With Us info@kalpa.news Whatsapp: 9481252093
Discussion about this post