ಶಿಕಾರಿಪುರ: ಹೌದು… ಅದೊಂದು ಅದ್ಬುತ ಲೋಕ. ಅದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕನಸೊಂದು ನನಸಾದ ಸ್ಥಳ. ಅದನ್ನು ಇಂದು ಅವರೇ ಸ್ವತಃ ಲೋಕಾರ್ಪಣೆ ಮಾಡಿ, ಮೈದುಂಬಿರುವ ಅಂಜನಾಪುರ ಜಲಾಶಯಕ್ಕೆ ಬಾಗಿಣ ಅರ್ಪಿಸಿದ್ದಾರೆ.
ಅದು ಅಂಜನಾಪುರ ಜಲಾಶಯದ ಪ್ರದೇಶ.. ಅಲ್ಲಿ ನಿರ್ಮಾಣವಾಗಿದೆ ನೈಜತೆಗೆ ಸೆಡ್ಡುಹೊಡೆದಂತೆ ನಿರ್ಮಾಣವಾದ ಕಲಾಕೃತಿಗಳಿರುವ ಉದ್ಯಾನವನ.. ಅಲ್ಲಿ ಏನೇನು ಇದೆ ಎಂಬುದನ್ನು ಕೊನೆಯಲ್ಲಿ ಓದಿ.. ಅದಕ್ಕೂ ಮುನ್ನ ಕೊಂಚ ಹಿಂದಿನ ವಿಚಾರಗಳನ್ನು ತಿಳಿದುಕೊಳ್ಳಿ…
ಶಿಕಾರಿಪುರ ತಾಲೂಕಿನಿಂದ 17 ಕಿಮೀ ದೂರದಲ್ಲಿರುವ ಇಲ್ಲಿನ ಅಂಜನಾಪುರ ಕೆರೆಯನ್ನು ನಿರ್ಮಾಣ ಮಾಡಲಾಗಿದೆ. ಕೆರೆಗೆ ತೀರ್ಥಹಳ್ಳಿ ತಾಲೂಕಿನ ಹುಂಚ ಬಳಿಯಿರುವ ಬೆಟ್ಯಾರಣ್ಯ ಪ್ರದೇಶದಲ್ಲಿ ಉಗಮವಾಗುವ ಕುಮುದ್ವತಿ ನದಿಯ ನೀರು ಹರಿದು ಬರುತ್ತಿದೆ.
ಕುಮುದ್ವಯ ನೀರು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಮುದೇನೂರು ಗ್ರಾಮದ ಬಳಿ ಹರಿಯುವ ತುಂಗಭದ್ರಾ ನದಿಗೆ ಸೇರುತ್ತದೆ. ಅದೇನೇ ಇರಲಿ ಈಗ ಶಿಕಾರಿಪುರ ತಾಲೂಕಿಗೆ ಹೆಸರಾಗಿರುವ ಶಿಕಾರಿಪುರ ಹಾಗೂ ಶಿರಾಳಕೊಪ್ಪದ ಜನತೆಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಅಂಜನಾಪುರ ಕೆರೆಗೆ ಕುಮುದ್ವತಿ ನದಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣ ಮಾಡಲಾಗಿದೆ.
ಈ ಕುಮುದ್ವತಿ ನದಿಗೆ ಅಡ್ಡಲಾಗಿ ಡ್ಯಾಂನ್ನು 1927 ರಲ್ಲಿ ಅಂದಿನ ಮೈಸೂರು ಸಂಸ್ಥಾನದ ದೊರೆಯಾಗಿದ್ದ ಶ್ರೀ ಕೃಷ್ಣ ರಾಜೇಂದ್ರ ಒಡೆಯರ್ ರವರು ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದ್ದರು. ನಂತರ 1936 ರಲ್ಲಿ ಪೂರ್ಣಗೊಂಡಿತು. ಇದರ ನಿರ್ಮಾಣಕ್ಕೆ ಆಗಿನ ಕಾಲದಲ್ಲಿ 22.51 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ಯೋಜನೆಯು ಸುಮಾರು 1.47 ಟಿಎಂಸಿ ನೀರು ಸಂಗ್ರಹಿಸಬಹುದಾದ ಸಾಮರ್ಥ್ಯ ಹೊಂದಿದೆ.
ಈ ಯೋಜನೆಯನ್ನು 10 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಮುಂಗಾರಿನ ಬೆಳೆಗೆ ನೀರೊದಗಿಸಲು ನಿರ್ಮಾಣ ಮಾಡಲಾಗಿದೆ. ನಂತರ 1980 ರಲ್ಲಿ ಪುನಃ ಜಲಾಶಯದ ಸಾಮರ್ಥ್ಯ ಹೆಚ್ಚಿಸಲು ಜಲಾಶಯದ ಕೋಡಿ ಮತ್ತು ಏರಿಯನ್ನು 27.68 ಲಕ್ಷಗಳ ವೆಚ್ಚದಲ್ಲಿ ಒಂದು ಮೀಟರ್ ನಷ್ಟು ಹೆಚ್ಚಿಸಲಾಯಿತು. ಈ ರೀತಿ ಹೆಚ್ಚಿಸಿದ್ದಕ್ಕಾಗಿ ಹೆಚ್ಚುವರಿಯಾಗಿ 6,645 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸಲಾಯಿತು.
ಈ ಜಲಾಶಯವು ಎರಡು ನಾಲೆಗಳನ್ನು ಹೊಂದಿದ್ದು, ಬಲದಂಡೆ ನಾಲೆಯು 45 ಕಿಮೀ ಉದ್ದವಿದ್ದು, 5,919 ಹೆಕ್ಟೇರ್ (14,626 ಎಕರೆ) ಅಚ್ಚುಕಟ್ಟು ಹೊಂದಿದೆ. ಎಡ ದಂಡೆ ನಾಲೆಯು 14 ಕಿಮೀ ಉದ್ದವಿದ್ದು, 817 ಹೆಕ್ಟೇರ್ (2,019 ಎಕರೆ) ಅಚ್ಚುಕಟ್ಟು ಹೊಂದಿದೆ. ಬಲದಂಡೆ ನಾಲೆಯ ಹೊರ ಹರಿವಿನ ಪ್ರಮಾಣವು 245 ಕ್ಯೂಸೆಕ್ಸ್, ಎಡದಂಡೆ ನಾಲೆಯ ಹೊರ ಹರಿವಿನ ಪ್ರಮಾಣವು 50 ಕ್ಯೂಸೆಕ್ಸ್ ರಷ್ಟಿದೆ. ಈ ಅಂಜನಾಪುರ ಜಲಾಶಯದ ಕೋಡಿಯು ಜುಲೈ ತಿಂಗಳ 1994 ರಲ್ಲಿ ಒಡೆದ ಪರಿಣಾಮ ನೀರಿನ ಹರಿವು ಕೋಡಿಯ ಮೇಲೆ 6 ಅಡಿಗಳ ಎತ್ತರಕ್ಕಿದ್ದು, ಪ್ರಮಾಣವು 33,000 ಕ್ಯೂಸೆಕ್ ಆಗಿತ್ತು. ಆ ಸಂದರ್ಭದಲ್ಲಿ 35 ಲಕ್ಷಗಳ ವೆಚ್ಚದಲ್ಲಿ ತಾತ್ಕಾಲಿಕ ಏರಿಯನ್ನು ನಿರ್ಮಿಸಲಾಯಿತು. ನಂತರ 1997 ರಲ್ಲಿ 280 ಮೀ ಮೀ ಉದ್ದದ ಕೋಡಿಯನ್ನು ಮರು ನಿರ್ಮಾಣ ಮಾಡುವ ಉದ್ದೇಶದಿಂದ 35 ಲಕ್ಷಗಳ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಿ 1998 ರಲ್ಲಿ ಮುಕ್ತಾಯವಾಯಿತು.
ಕಳೆದ ಮೂರು ವರ್ಷಗಳಿಂದ ಭೀಕರ ಬರಗಾಲದಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ, ತತ್ತರಿಸಿ ಹೋಗಿರುವ ತಾಲೂಕಿನ ರೈತರಿಗೆ ಈಗ ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಬರುತ್ತಿರುವುದರಿಂದ, ಅಂಜನಾಪುರ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆ ಯಾಗಿ ಕೋಡಿ ಮೇಲಿಂದ ನೀರು ಹೊರ ಬರುತ್ತಿರಲು ವೀಕ್ಷಿಸಲು ಸುಂದರವಾಗಿದೆ.
ಇನ್ನು ಯಡಿಯೂರಪ್ಪರವರು ತಾವು ಮುಖ್ಯ ಮಂತ್ರಿಯಾಗಿದ್ದಾಗ ಆಸಕ್ತಿವಹಿಸಿ 2012-13 ರಲ್ಲಿ 6.5 ಎಕರೆಯ ಜಾಗದಲ್ಲಿ ಸುಮಾರು 5.25 ಕೋಟಿ ರೂಪಾಯಿ ಅನುದಾನ ನೀಡುವ ಮೂಲಕ ಪಾರ್ಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. 2013-14 ರಲ್ಲಿ ಟೆಂಡರ್ ಪ್ರಕ್ರಿಯೆಯು ಪೂರ್ಣಗೊಂಡು ಕಾಮಗಾರಿಯು ಆರಂಭವಾಗಿ, ಈಗ ಆ ಪಾರ್ಕ್ ಕಾಮಗಾರಿಯು ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ದ್ವಾರ ಬಾಗಿಲು, ವಿದ್ಯುತ್ ಕಾಮಗಾರಿ ನಡೆಯಬೇಕಿದೆ.
ಈ ಪಾರ್ಕ್ ಇಂದು ಲೋಕಾರ್ಪಣೆಗೊಂಡಿದ್ದು, ಇಲ್ಲಿ ಸಂಪೂರ್ಣ ಗ್ರಾಮೀಣ ಸೊಗಡಿನ ಕಲಾಕೃತಿ, ಜಾನಪದ ಕಲಾಕೃತಿ, ದೇಶದ ಸ್ವಾತಂತ್ರದ ಸಂದರ್ಭದಲ್ಲಿ ಹೋರಾಟ ನಡೆಸಿ ಗಲ್ಲಿಗೇರಿದ ತಾಲೂಕಿನ ಈಸೂರಿನ ಸ್ವಾತಂತ್ರ ಹೋರಾಟಗಾರರ ಕಲಾಕೃತಿ ಸೇರಿದಂತೆ ವಿವಿಧ ರೀತಿಯ ಕಲಾಕೃತಿ ನಿರ್ಮಾಣಗೊಂಡಿದ್ದು, ಚಿಕ್ಕ ಮಕ್ಕಳಿಗೆ ಆಟಿಕೆಯ ತಾಣವೂ ಇಲ್ಲಿ ನಿರ್ಮಾಣವಾಗಿದೆ.
ಒಟ್ಟಾರೆಯಾಗಿ ಪ್ರವಾಸಿಗರಿಗೆ ಒಂದು ದಿನದ ಪ್ರವಾಸಕ್ಕೆ ಉತ್ತಮ ಪ್ರವಾಸಿ ತಾಣವಾಗಿದೆ.
-ವರದಿ ರಾಜಾರಾವ್ ಜಾಧವ್, ಶಿಕಾರಿಪುರ
Discussion about this post