ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಚದುರಂಗದಾಟ ಆಡಿ ಅಧಿಕಾರಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರೈಸುತ್ತಿದೆಯೇ ಅಥವಾ ಇಲ್ಲವೇ ಎಂಬ ಚರ್ಚೆಗಳು ನಡೆಯುತ್ತಲೇ ಇವೆ.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಎರಡೂ ಪಕ್ಷಗಳಿಂದ ಬಹುಮತ ಇದ್ದರೂ ಸಹ ಜ್ಯೋತಿಷ್ಯ ಶಾಸ್ತ್ರದ ಆಧಾರದಲ್ಲಿ ಕುಮಾರಸ್ವಾಮಿ ಸರ್ಕಾರಕ್ಕೆ ಅಪಾಯದ ದಿನಗಳಿವೆಯೇ ಪ್ರಶ್ನೆಗಳು ಮೂಡಿವೆ. ಈ ಹಿನ್ನೆಲೆಯಲ್ಲಿ ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ಅವರ ಅಭಿಪ್ರಾಯ ಹೀಗಿದೆ:
ಯಾರ ಜಾತಕದ ಕುಂಡಲಿಯೋ, ಯಾವ ಮುಹೂರ್ತದ ಕುಂಡಲಿಯಲ್ಲೋ ಆ ಲಗ್ನದ ಅಧಿಪತಿ ಅಸ್ತನಾಗುವಾಗ ಸಮಸ್ಯೆಗಳು ಉಲ್ಬಣವಾಗುತ್ತದೆ.
ಸಿಂಹ ರಾಶಿಗೆ ಇದು ಅನ್ವಯ ಆಗುವುದಿಲ್ಲ. ಯಾಕೆಂದರೆ ಎಲ್ಲಾ ಗ್ರಹರನ್ನೂ ಅಸ್ತ ಮಾಡುವುದು ರವಿ ಮಾತ್ರ. ಆದರೆ ರವಿಯೇ ಸ್ವಯಂ ಅಸ್ತನಾಗೋದು. ಹಾಗೆಯೇ ಕರ್ಕ ರಾಶಿಗೂ ಆಗುವುದಿಲ್ಲ. ಚಂದ್ರ ಅದರ ಅಧಿಪತಿಯಾಗುತ್ತಾನೆ.
ಚಂದ್ರ ಅಸ್ತ, ವಕ್ರ ಎಂಬುದಿಲ್ಲ. ಕುಮಾರಸ್ವಾಮಿಯವರ ಸರಕಾರದಲ್ಲಿ ಆರಂಭ ಮುಹೂರ್ತ ತುಲಾ ಲಗ್ನ. ಇದರ ಅಧಿಪತಿ ಶುಕ್ರ. ಈ ಶುಕ್ರನು 22.10.2018 ರಿಂದ 1.11.2018 ರ ವರೆಗೆ ಅಸ್ತನಾಗುತ್ತಾನೆ. ಇದೊಂದು ಅಪಾಯದ ದಿನಗಳು. ಎಲ್ಲಿಯಾದರೂ ಇದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಅಪಾಯ ಖಂಡಿತ. ಅದಕ್ಕಾಗಿ ಸುಮ್ಮನಿದ್ದರೆ ಉತ್ತಮ.















