ತೀರ್ಥಹಳ್ಳಿ: ತುಂಗಾ ಮಹಾವಿದ್ಯಾಲಯದಲ್ಲಿ 3 ದಿನಗಳ ಕಾಲ ನಡೆದ ಸುವರ್ಣ ಸಂಭ್ರಮ ಸಾವಿರಾರು ವಿದ್ಯಾರ್ಥಿಗಳ ಸಮಾಗಮಕ್ಕೆ ಸಾಕ್ಷಿಯಾಯಿತು.
ಮಲೆನಾಡಿನ ಹೆಮ್ಮೆಯ ವಿದ್ಯಾಸಂಸ್ಥೆ ಆವರಣ ಹಬ್ಬ ಸಡಗರದಂತೆ ಕಂಡು ಬಂತು. ಕಾರ್ಯಕ್ರಮದ ಉಸ್ತುವಾರಿ ಸಚಿವ ಡಿ.ಸಿ. ತಮ್ಮಣ್ಣ ಉದ್ಘಾಟಿಸಿ ಕಾಲೇಜಿನ ಅಭಿವೃದ್ಧಿಗೆ ವೈಯುಕ್ತಿಕ 5 ಲಕ್ಷ ರೂ.ಹಣಕಾಸಿನ ನೆರವು ಘೋಷಿಸಿದರು.
ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಕಿಮ್ಮನೆ ರತ್ನಾಕರ್, ಮದನ್ ಸೇರಿದಂತೆ ಅನೇಕ ರಾಜಕೀಯ, ಸಾಂಸ್ಕೃತಿಕ ಗಣ್ಯರು ಹಾಜರಿದ್ದರು.
ಕಾಲೇಜಿನ ಆವರಣದ ವಿವಿಧ ಕೊಠಡಿಗಳಲ್ಲಿ ವನ್ಯ ಜೀವಿ ಛಾಯಾಚಿತ್ರ ಪ್ರದರ್ಶನ, ಗೊಂಬೆ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಸೇರಿ ಅನೇಕ ಪ್ರದರ್ಶನಗಳು ನಡೆದವು.
ಐದಕ್ಕೂ ಹೆಚ್ಚು ವಿವಿಧ ಗೋಷ್ಠಿಗಳು ನಡೆದಿದ್ದು, ಅನೇಕ ಹೊಸ ಚರ್ಚೆಗಳನ್ನು ಹುಟ್ಟು ಹಾಕಿದವು. ಹಳೇ ವಿದ್ಯಾರ್ಥಿಗಳ ಸಮಾವೇಶ ಮತ್ತು ನಿವೃತ್ತ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸನ್ಮಾನಿಸಲಾಯಿತು.
ಸಚಿವ ಯು.ಟಿ.ಖಾದರ್ ತುಂಗಾ ಸುವರ್ಣ ತರಂಗ ಬಿಡುಗಡೆಗೊಳಿಸಿದರು. ಜಿಲ್ಲಾಧಿಕಾರಿ ಕೆ.ಎ.ದಯಾನಂದ ಆಗಮಿಸಿ ಕಾಲೇಜಿನ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸೋಣ ಎಂದು ಮನವಿ ಮಾಡಿದರು.
ಕುವೆಂಪು ವಿವಿ ಕುಲಪತಿ ಜೋಗನ್ ಶಂಕರ್, ಎಂಎಲ್ಸಿಗಳಾದ ಆಯನೂರು ಮಂಜುನಾಥ್, ರುದ್ರೇಗೌಡ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೌಲಾನಿ ಧರ್ಮಯ್ಯ, ಪ್ರಾಂಶುಪಾಲ ಡಾ.ಬಿ. ಗಣಪತಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
3 ದಿನಗಳ ಕಾರ್ಯಕ್ರಮಕ್ಕೆ ದೇಶದ ಮೂಲೆ ಮೂಲೆಗಳಿಂದ ಹಳೆಯ ವಿದ್ಯಾರ್ಥಿಗಳು ಆಗಮಿಸಿ ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿದರು.
ವರದಿ: ಡಾ.ಸುಧೀಂದ್ರ
Discussion about this post