ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅಧಿಕ ಆಶ್ವಯುಜ ಮಾಸ: ಇದರ ಬಗ್ಗೆ ವಿಶೇಷ ವಿವರಗಳು ಬೃಹನ್ನಾರದೀಪುರಾಣ, ಪದ್ಮಪುರಾಣ ಭವಿಷ್ಯಪುರಾಣ, ಭವಿಷ್ಯೋತ್ತರ ಪುರಾಣ ಮೊದಲಾದವುಗಳಲ್ಲಿ ಬಂದಿವೆ. ಅವುಗಳಲ್ಲಿ ಬಂದಿರುವ ಕೆಲವು ವಿವರಗಳನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ.
ಮಲವನ್ನು ಕಳೆಯುವ ಮಾಸವಾದ್ದರಿಂದ ಅಧಿಕಮಾಸಕ್ಕೆ ಮಲಮಾಸ ಎಂದು ಹೆಸರು ಎಂಬುದಾಗಿ ಪುರಾಣ ಹಾಗೂ ವೇದಗಳನ್ನು ಎಲ್ಲ ವಸಿಷ್ಠಾದಿಜ್ಞಾನಿಗಳು ನಿರ್ಣಯಿಸಿ ಹೇಳಿರುವರು. ಮಲ ಎಂದರೆ ಪಾತಕ. ಸ್ನಾನ, ದಾನ, ದೀಪಗಳಿಂದ ಶ್ರೀಪುರುಷೋತ್ತಮನನ್ನು ಆರಾಧಿಸಿದರೆ ಎಲ್ಲ ಪಾತಕವೂ ಬೂದಿಯಾಗುವುದು. (ಶುಭಕಾರ್ಯಗಳಿಗೆ ನಿಷಿದ್ಧವಾದ ಕಾರಣದಿಂದಲೂ ಇದಕ್ಕೆ ಮಲಮಾಸ ಎಂದು ಹೆಸರು.)
ಯಾವ ತಿಂಗಳಲ್ಲಿ ರವಿ ಸಂಕ್ರಾಂತಿ ಇರದೋ ಅದು ಅಧಿಕಮಾಸ; ಎರಡು ರವಿಸಂಕ್ರಮಣಗಳು ಬಂದರೆ ಅದು ಕ್ಷಯಮಾಸ.
ಪರ್ವತಗಳಲ್ಲಿ ಮೇರು, ಗ್ರಹಗಳಲ್ಲಿ ಸೂರ್ಯ, ನದಿಗಳಲ್ಲಿ ಗಂಗಾ, ಪಕ್ಷಿಗಳಲ್ಲಿ ಗರುಡ, ನಕ್ಷತ್ರಗಳಲ್ಲಿ ಚಂದ್ರ, ಪಶುಗಳಲ್ಲಿ ಗೋವು, ಮನುಷ್ಯರಲ್ಲಿ ಬ್ರಾಹ್ಮಣ ಹೇಗೋ ಹಾಗೆ ಮಾಸಗಳಲ್ಲಿ ಅಧಿಕಮಾಸ ಶ್ರೇಷ್ಠವಾದುದು.
ಯಾವುದೇ ಕಾಮನೆ ಇರಲಿ, ಇಲ್ಲದಿರಲಿ ಅಧಿಕಮಾಸವನ್ನು ಆಚರಿಸಲೇಬೇಕು. ಇದರಿಂದ ಸಕಲದುಷ್ಕರ್ಮಗಳು ಬೂದಿಯಾಗಿ ಹರಿಲೋಕದ ಪ್ರಾಪ್ತಿಯು ಲಭಿಸುವುದು.
ಆದರದಿಂದ ಈ ಪುರುಷೋತ್ತಮ ಮಾಸವನ್ನು ವಿಧ್ಯುಕ್ತವಾಗಿ ಆಚರಿಸುವವನು ತನ್ನ ಕುಲವನ್ನು ಉದ್ಧರಿಸಿ ಮುಂದೆ ವಿಷ್ಣುಲೋಕವನ್ನು ಪಡೆಯುವನು.
ಅಧಿಕಮಾಸವನ್ನು ಆಚರಿಸುವವರ ದೇಹದಲ್ಲಿ ಭೂಮಿಯಲ್ಲಿನ ಸಕಲತೀರ್ಥಗಳು, ಕ್ಷೇತ್ರಗಳು, ಸರ್ವದೇವತೆಗಳು ಸನ್ನಿಧಾನವನ್ನಿರಿಸುವರು.
ದುಃಸ್ವಪ್ನ ದಾರಿದ್ರ್ಯ ಹಾಗೂ ದುಷ್ಕೃತ ಎಂಬ ಮೂರು ವಿಧವಾದ ಅನಿಷ್ಟವು ಅಧಿಕಮಾಸವನ್ನು ಆಚರಿಸಿದಾಗ ಪರಿಹಾರವಾಗುವುದು.
ಅಧಿಕಮಾಸವನ್ನು ನಿಷ್ಠೆಯಿಂಧ ಶ್ರೀಹರಿಪ್ರೀತಿಗೆಂದು ಆಚರಿಸುವ ಹರಿಭಕ್ತನಿಗೆ ವಿಘ್ನಗಳು ಒದಗದಂತೆ ಇಂದ್ರಾದಿದೇವತೆಗಳು ರಕ್ಷಿಸುವರು.
ಅಧಿಕಮಾಸವನ್ನು ಆಚರಿಸುವ ವ್ರತಶೀಲರು ವಾಸಿಸುವ ಸ್ಥಳಗಳಲ್ಲಿ ಭೂತ, ಪ್ರೇತ, ಪಿಶಾಚಿ ಮೊದಲಾದವುಗಳು ಸರ್ವಥಾ ನೆಲೆಸಲಾರವು.
ಅಧಿಕಮಾಸದ ಆಚರಣೆಯು ಧಾನ, ಧಾನ್ಯ, ಪಶುಗಳ ಹಿಂಡು, ಪುತ್ರ, ಪೌತ್ರ, ಪ್ರಾಪ್ತಿ ಹಾಗೂ ಕೀರ್ತಿಗಳಿಗೆ ಸಾಧನ. ಸ್ತ್ರೀಯರಿಗೆ ಬಂಜೆತನವನ್ನು ತೊಲಗಿಸುವುದು; ವೈಧವ್ಯ ಬರದಂತೆ ರಕ್ಷಿಸುವುದು. ರಾಜ್ಯಭ್ರಷ್ಟರಿಗೆ ಪುನಃ ರಾಜ್ಯವನ್ನು ದೊರಕಿಸುವುದು; ಮನುಷ್ಯರಿಗೆ ಬಯಸಿದ್ದನ್ನು ನೀಡುವುದು; ಕನ್ಯೆಯು ಗುಣವಂತನು, ದೀರ್ಘಾಯುವು ಆದ ಪತಿಯನ್ನು ಪಡೆಯುವಳು; ತರುಣನು ಸುಶೀಲೆಯು, ಪತಿವ್ರತೆಯೂ ಆದ ಕನ್ಯೆಯನ್ನು ಪಡೆಯುವನು. ವಿದ್ಯಾರ್ಥಿಗೆ ವಿದ್ಯೆಯು ಸಿದ್ಧಿ ಬಯಸುವವನಿಗೆ ಸಿದ್ಧಿಯು ಲಭಿಸುವುದು; ಕೋಶ ಬಯಸುವವನಿಗೆ ಕೋಶವು ದೊರೆಯುವುದು; ಮೋಕ್ಷಾರ್ಥಿಯು ಮೋಕ್ಷವನ್ನು ಹೊಂದುವನು.
ಅಧಿಕಮಾಸ ಬಂದಾಗ ಪ್ರತಿನಿತ್ಯ ಸಂಧ್ಯಾವಂದನೆ, ತರ್ಪಣ, ಶ್ರಾದ್ಧದಾನಾದಿ ನಿಯಮಗಳು ಅತ್ಯಂತ ಪುಣ್ಯಕರ. ಇವುಗಳ ಆಚರಣೆಯಿಂದ ಬ್ರಹ್ಮಹತ್ಯಾದಿಪಾಪಗಳು ಪರಿಹಾರವಾಗುವುವು.
ಅಧಿಕಮಾಸದಲ್ಲಿ ದ್ವಾದಶೀ, ಹುಣ್ಣಿಮೆ ಅಥವಾ ಯಾವುದೇ ಶುಭದಿನಗಳಲ್ಲಿ ಬೆಲ್ಲ, ತುಪ್ಪಗಳೊಂದಿಗೆ ಕೂಡಿದ ಮೂವತ್ಮೂರು ಅಪೂಪಗಳನ್ನು ಕಂಚಿನ ಪಾತ್ರೆಯಲ್ಲಿರಿಸಿ ಸುವರ್ಣಸಮೇತ ಯೋಗ್ಯ ಬ್ರಾಹ್ಮಣರಿಗೆ ಪ್ರತಿದಿನ ದಾನವೀಯಬೇಕು. ಅದರಿಂದ ಅಪೂಪದಲ್ಲಿರುವ ಛಿದ್ರಗಳ ಸಂಖ್ಯೆಯಷ್ಟು ದೀರ್ಘಕಾಲ ಸ್ವರ್ಗಲೋಕದಲ್ಲಿ ವಾಸಿಸುವ ಪುಣ್ಯವು ಲಭಿಸುತ್ತದೆ. ಮೂವತ್ಮೂರು ದೇವತೆಗಳನ್ನು ಉದ್ದೇಶಿಸಿ ಮಾಡುವ ಅಪೂಪ-ದಾನವು ಪೃಥ್ವೀದಾನದ ಫಲವನ್ನು ತಂದುಕೊಡುತ್ತದೆ. ಕ್ರಮವಾಗಿ, ಅಪರೋಕ್ಷ ಜ್ಞಾನ-ದ್ವಾರಾ ಮೋಕ್ಷಪದವನ್ನು ಹೊಂದಲು ಸಹ ಇದು ನೆರವಾಗುತ್ತದೆ.
ಅಧಿಕಮಾಸದಲ್ಲಿ ಸ್ನಾನ, ದಾನ, ಜಪ, ಹೋಮ, ಸ್ವಾಧ್ಯಾಯ, ಪಿತೃತರ್ಪಣ, ದೇವಪೂಜೆ ಇವುಗಳಿಂದ ಶ್ರೀಹರಿಯನ್ನು ಆರಾಧಿಸುವವನು ಅಕ್ಷಯಪುಣ್ಯವನ್ನು ಪಡೆದುಕೊಳ್ಳುವನು.
ಸಂಕ್ರಾಂತಿಯನ್ನು ಹೊಂದಿದ ಇತರ ಮಾಸಗಳ ಅಧಿಪತಿ ಸೂರ್ಯ ಹಾಗೂ ಅವನ ಅಂತರ್ಯಾಮಿಯಾದ ಶ್ರೀಹರಿ. ಆದರೆ ಅಧಿಕಮಾಸಕ್ಕೆ ಸ್ವಯಂ ಶ್ರೀಹರಿಯೇ ಅಧಿದೇವತೆ. ಅವನ ಆರಾಧನೆಗಾಗಿ ಮಾಡುವ ಹೋಮ, ದಾನ, ತಪಸ್ಸು ಮೊದಲಾದವುಗಳು ಎಷ್ಟೇ ಅಲ್ಪವಾಗಿದ್ದರೂ ಅಕ್ಷಯಫಲವನ್ನು ನೀಡುವವು.
ಅಧಿಕಮಾಸದಲ್ಲಿ ಸ್ನಾನ, ದಾನ, ಜಪ, ಹೋಮ, ಸ್ವಾಧ್ಯಾಯಗಳು ಶ್ರೀಹರಿಗೆ ಪ್ರೀತಿಕರ. ಇಂತಹ ಸ್ನಾನ, ವ್ರತ, ದೀಪದಾನ ಮೊದಲಾದ ಯಾವುದೇ ಉತ್ತಮಕಾರ್ಯಗಳನ್ನು ಯಾವ ನೆಪದಲ್ಲಿ ಮಾಡಿದರೂ ಶನಿದೋಷ ಪರಿಹಾರವಾಗುವುವು. ಅದರಂತೆ ನರಕಪ್ರಾಪ್ತಿಯ ಭಯವೂ ತೊಲಗುವುದು.(ಭಾಸ್ಕರಿ ಎಂದರೆ ಭಾಸ್ಕರನ ಮಗ; ಯಮ ಹಾಗೂ ಶನಿ ಇಬ್ಬರು ಸೂರ್ಯನ ಪುತ್ರರು; ಇವರಿಬ್ಬರ ಭಯವೂ ಅಧಿಕಮಾಸದ ಆಚರಣೆ ಮಾಡಿದವರಿಗೆ ಒದಗದು ಎಂಬರ್ಥ).
ಮೂವತ್ಮೂರು ಅಪೂಪಗಳನ್ನು ಎರಡು ಪೀತಾಂಬರಗಳಿಂದ ಮುಚ್ಚಬೇಕು. ಅವುಗಳನ್ನು ಎರಡು ನೂತನ ಯಜ್ಞೋಪವೀತಗಳೊಂದಿಗೆ ಶ್ರೀಹರಿಗೆ ಸಮರ್ಪಿಸಬೇಕು. ಶ್ರೀಗಂಧ, ಬಗೆಬಗೆಯ ಸುಗಂಧಪುಷ್ಪಗಳು ಹಾಗೂ ಧೂಪದೀಪಗಳಿಂದ ಪೂಜಿಸಬೇಕು. ಮೃಷ್ಟಾನ್ನಯುಕ್ತವಾದ ನೈವೇದ್ಯವನ್ನು ತಾಂಬೂಲದೊಂದಿಗೆ ಸಮರ್ಪಿಸಬೇಕು. ಘಂಟೆ, ಮೃದಂಗ, ಶಂಖ ಮೊದಲಾದ ಘೋಷಣೆಗಳಿಂದ, ಕರ್ಪೂರ, ಅಗುರು, ಚಂದನಗಳಿಂದ ಕೂಡಿದ ಮಂಗಳಾರತಿಯನ್ನು ಸಮರ್ಪಿಸಬೇಕು. ಬಳಿಕ ಮಂತ್ರಪುಷ್ಪವನ್ನು ಪ್ರದಕ್ಷಿಣೆ ನಮಸ್ಕಾರಗಳನ್ನು ಅರ್ಪಿಸಬೇಕು.
ಅಧಿಕಮಾಸವು ಬಂದಾಗ, ಬೆಲ್ಲತುಪ್ಪಗಳೊಂದಿಗೆ ಕೂಡಿದ ಮೂವತ್ಮೂರು ಅಪೂಪಗಳನ್ನು ಪ್ರತಿನಿತ್ಯವೂ ದಾನಮಾಡಬೇಕು. (ಪ್ರತಿದಿನವೂ ಕೊಡುವ ಅವಕಾಶವನ್ನು ಅನೇಕ ಕಾರಣಗಳಿಂದಾಗಿ ಹೊಂದದವರು ಆ ತಿಂಗಳಲ್ಲಿ ಒಂದು ದಿನವಾದರೂ ಕೊಡಲೇಬೇಕು).
ವಿಷ್ಣುರೂಪದ ಸಹಸ್ರಕಿರಣನಾದ ಸೂರ್ಯ ಸರ್ವಪಾಪಗಳನ್ನು ಪರಿಹರಿಸುವವನು. ಈ ಅಪೂಪದಾನದಿಂದ ನನ್ನ ಪಾಪವನ್ನು ಪರಿಹರಿಸಲಿ; ಜಗತ್ಕಾರಣನಾದ ಶ್ರೀನಾರಾಯಣನಾದ ನೀನು ಸೂರ್ಯನ ಬಿಂಬ; ಈ ವ್ರತದಿಂದ ಪುತ್ರರನ್ನು, ಸಂಪತ್ತನ್ನು ಅಭಿವೃದ್ಧಿಗೊಳಿಸು; ಕೈಯಲ್ಲಿ ಶಂಖಗದಾಚಕ್ರಗಳನ್ನು ಧರಿಸಿದ, ಗರುಡನನ್ನು ವಾಹನವನ್ನಾಗಿ ಉಳ್ಳ ವಿಷ್ಣುವು ನನಗೆ ಪ್ರಸನ್ನನಾಗಲಿ. ಕಲಾ, ನಿಮೇಷ, ಘಳಿಗೆ ಮೊದಲಾದ ರೂಪಗಳಲ್ಲಿ ನೆಲೆಸಿದ್ದು ಪ್ರಾಣಿಗಳನ್ನು ನಿಯಂತ್ರಿಸುವ ಕಾಲರೂಪಿಯಾದ ಶ್ರೀಹರಿಗೆ ನಮಸ್ಕಾರ. ಅಧಿಕಮಾಸದ ಕಾಲ ಪರ್ವಕಾಲ; ಪ್ರತಿಸ್ಥಳವೂ ಕುರುಕ್ಷೇತ್ರ; ಪ್ರತಿಯೊಬ್ಬ ವಿಪ್ರನಲ್ಲೂ ಶ್ರೀಹರಿಯ ಸನ್ನಿಧಾನ. ಈ ದಾನವಂತೂ ಪೃಥ್ವೀದಾನಕ್ಕೆ ಸಮಾನ. ಪುರುಷೋತ್ತಮನೇ ಇದನ್ನು ಸ್ವೀಕರಿಸು. ದೋಷಗಳ ಪರಿಹಾರಕ್ಕೋಸ್ಕರ, ಪಾಪಗಳ ನಾಶಕ್ಕೋಸ್ಕರ, ಪುತ್ರಪೌತ್ರಾದಿಗಳ ಅಭಿವೃದ್ಧಿಗೋಸ್ಕರ ಹೇ ಭಾಸ್ಕರರೂಪಿ ವಿಷ್ಣುವೇ! ನಾನು ಇದನ್ನು ನಿನಗೆ ಸಮರ್ಪಿಸುತ್ತಿರುವೆನು.
ವಾರ ಭವಿಷ್ಯ: ನಿಖರ ಜ್ಯೋತಿಷಿ ಶ್ರೀ ನಾರಾಯಣ ಭಟ್ ಅವರಿಂದ: 27.09.2020 ರಿಂದ 03.10.2020
ಮೂವತ್ಮೂರು ದೇವತೆಗಳು
1-8. ಅಷ್ಟವಸುಗಳು ಹಾಗೂ ಅವುಗಳು ಅಂತರ್ಯಾಮಿ ಭಗವದ್ರೂಪಗಳು: ದ್ರೋಣ(ವಿಷ್ಣು) ಧ್ರುವ(ಜಿಷ್ಣು) ದೋಷ(ಮಹಾವಿಷ್ಣು) ಅರ್ಕ(ಹರಿ) ಅಗ್ನಿ(ಕೃಷ್ಣ) ದ್ಯು(ಅಧೋಕ್ಷಜ) ಪ್ರಾಣ(ಕೇಶವ) ವಿಭಾವಸು(ಮಾಧವ)
9-19. ಏಕಾದಶರುದ್ರರು ಹಾಗೂ ಅವುಗಳು ಅಂತರ್ಯಾಮಿ ಭಗವದ್ರೂಪಗಳು: ಭೀಮ(ರಾಮ) ರೈವತ(ಅಚ್ಯುತ) ಓಜ(ಪುರುಷೋತ್ತಮ) ಅಜೈಕಪಾತ್(ಗೋವಿಂದ) ಮಹಾನ್(ವಾಮನ) ಬಹುರೂಪ(ಶ್ರೀಶ) ಭವ(ಶ್ರೀಕಂಠ) ವಾಮದೇವ(ವಿಶ್ವಸಾಕ್ಷೀ) ಉಗ್ರ(ನಾರಾಯಣ) ವೃಷಾಕಪಿ(ಮಧುರಿಪು) ಅಹಿರ್ಬುಧ್ನಿ(ಅನಿರುದ್ಧ)
20-31. ದ್ವಾದಶಾದಿತ್ಯರು ಹಾಗೂ ಅವುಗಳು ಅಂತರ್ಯಾಮಿ ಭಗವದ್ರೂಪಗಳು: ವಿವಸ್ವಾನ್(ತ್ರಿವಿಕ್ರಮ) ಅರ್ಯಮಾ(ವಾಸುದೇವ) ಪೂಷಾ(ಜಗದ್ಯೋನಿ) ತ್ವಷ್ಟ(ಅನಂತ) ಸವಿತೃ (ಶೇಷಶಾಯಿ) ಭಗ(ಸಂಕರ್ಷಣ) ಧಾತೃ(ಪ್ರದ್ಯುಮ್ನ) ಪರ್ಜನ್ಯ(ದೈತ್ಯಾರಿ) ವರುಣ(ವಿಶ್ವತೋಮುಖ) ಮಿತ್ರ(ಜನಾರ್ದನ) ಶಕ್ರ(ಧರಾವಾಸ) ಉರುಕ್ರಮ(ದಾಮೋದರ)
32. ಪ್ರಜಾಪತಿ (ಅರ್ಘಾರ್ದನ)
33. ವಷಟ್ಕಾರ (ಶ್ರೀಪತಿ)
ದಾನ ನೀಡಿದ ಅಪೂಪಗಳಲ್ಲಿ ಪ್ರತಿಯೊಂದರಲ್ಲಿ ಎಷ್ಟು ಛಿದ್ರಗಳಿರುವವೋ ಅಷ್ಟು ಸಾವಿರ ವರ್ಷಗಳ ಕಾಲ ಕಂಚಿನ ಸಂಪುಟಗಳಲ್ಲಿ ಅಪೂಪದಾನ ಮಾಡುವವನು ವೈಕುಂಠದಲ್ಲಿ ನೆಲೆಸುವನು. ಅಪ್ರಾಕೃತವಾದ, ಯೋಗಿಗಳಿಗೂ ದುರ್ಲಭವಾದ ವೈಕುಂಠ ಅವನಿಗೆ ಲಭಿಸುವುದು.
ಪುತ್ರ ಸುಖ ಹಾಗೂ ಸೌಭಾಗ್ಯಗಳಿಗಾಗಿ ಅಧಿಕಮಾಸದಲ್ಲಿ ಸ್ನಾನ, ದಾನ ಹಾಗೂ ಅರ್ಚನೆ ಮೊದಲದವುಗಳನ್ನು ಆಚರಿಸುವ ಸ್ತ್ರೀಯರು ಲಕ್ಷಣವತಿಯರು ಎನ್ನಿಸುವರು.
ಯಾವ ಸ್ತ್ರೀಯು ಅಧಿಕಮಾಸವ್ರತವನ್ನು ಆಚರಿಸುವಳೋ ಅವಳಿಗೆ ಬಡತನ, ಪುತ್ರಶೋಕ, ವೈಧವ್ಯಗಳು ಉಂಟಾಗಲಾರವು; ಅದರಂತೆ ಪುರುಷನೂ ಸಹ ಆಚರಿಸಿದಲ್ಲಿ ಯೋಗ್ಯಫಲಗಳು ಲಭಿಸುವವು.ಎಲ್ಲ ಇತರ ಮಾಸಗಳು, ಪಕ್ಷಗಳು, ಪರ್ವಕಾಲಗಳು ಅಧಿಕಮಾಸಕ್ಕೆ ಹದಿನಾರನೆ ಒಂದಂಶಕ್ಕೂ ಸಾಟಿಯೆನ್ನಿಸವು.ಶಾಸ್ತ್ರೋಕ್ತವಾದ ಇತರ ಸಕಲಸಾಧನಗಳು ಈ ಅಧಿಕಮಾಸದ ಹದಿನಾರನೆಯ ಒಂದಂಶಕ್ಕೂ ಸಾಟಿಯೆನ್ನಿಸವು.
ಹನ್ನೆರಡು ವರ್ಷಗಳ ಕಾಲ ಗಂಗಾಸ್ನಾನ ಮಾಡಿದ ಫಲ ಗುರು ಸಿಂಹರಾಶಿಯಲ್ಲಿದ್ದಾಗ ಗೋದಾವರಿಯಲ್ಲಿ ಒಮ್ಮೆ ಸ್ನಾನ ಮಾಡಿದರೆ ಲಭಿಸುವುದು. ಅಂತಹುದೇ ಫಲ ಅಧಿಕಮಾಸದಲ್ಲಿ ಒಮ್ಮೆ ಸ್ನಾನ ಮಾಡಿದರೆ ಲಭಿಸುವುದು (ಅಧಿಕಮಾಸದಲ್ಲಿ ನಿತ್ಯ ಶಾಸ್ತ್ರೋಕ್ತ ಪ್ರಾತಃಸ್ನಾನದ ಫಲ ಸಿಂಹರಾಶಿಯಲ್ಲಿ ಗೋದಾವರೀಸ್ನಾನದ ಫಲಕ್ಕೆ ಸಮವೆನ್ನಿಸುವುದು).
ತುಲಾ ಪುರುಷದಾನಾದಿ ಮಹಾದಾನಗಳು, ಅಗ್ನ್ಯಾಧಾನ, ಯಜ್ಞ, ಉದ್ಯಾನವನಗಳ ನಿರ್ಮಾಣ, ಕೆರೆ ಕಟ್ಟಿಸುವುದು, ಉಪನಯನ, ಸನ್ಯಾಸ ಸ್ವೀಕಾರ, ಜ್ಯೋತಿಷ್ಟೋಮಾದಿ ಕಾಮ್ಯಕರ್ಮಗಳು, ಮಗುವನ್ನು ಮೊದಲಬಾರಿಗೆ ಮನೆಯಿಂದ ಹೊರಕ್ಕೆ ಕರೆದೊಯ್ಯುವ ಕಾರ್ಯ, ಪಟ್ಟಾಭಿಷೇಕ ಕಾರ್ಯ, ಚೌಲ, ಉಪನಯನ, ವಿಶೇಷರೀತಿಯ ವ್ರತಗಳು, ಅನ್ನಪ್ರಾಶನ, ಗೃಹಾರಂಭ, ಗೃಹಪ್ರವೇಶ, ವಿಶೇಷತೀರ್ಥಸ್ನಾನ, ವಿವಾಹ, ಪಾಪಗಳಿಗೆ ಪ್ರಾಯಶ್ಚಿತ್ತ, ಈ ಕಾರ್ಯಗಳನ್ನು ಮುಂದೆ ಶುದ್ಧಮಾಸದಲ್ಲಿಯೇ ಮಾಡಬೇಕು). ಅಧಿಕಮಾಸಕ್ಕಿಂತ ಮುಂಚಿತವಾಗಿ ಪ್ರಾರಂಭಿಸಿದ್ದ (ವಿಷ್ಣುಪಂಚಕಾದಿ) ವ್ರತ ಮತ್ತು ವೈಶಾಖಸ್ನಾನದಿಕಾರ್ಯಗಳನ್ನು ಮಾತ್ರ ಅಧಿಕಮಾಸದಲ್ಲೂ ಮುಂದುವರಿಸಬೇಕು. ಸೂರ್ಯಸಂಕ್ರಮಣವಿಲ್ಲದ ಕಾರಣ ಅಧಿಕಮಾಸವು ಮಲಮಾಸ ಎನ್ನಿಸುವುದು; ಇದು ಮಲರೂಪವಾದ್ದರಿಂದ ಉಪನಯನಾದಿ ಶುಭಕಾರ್ಯಗಳಿಗೆ ಯೋಗ್ಯವಲ್ಲ.
ಮಲಮಾಸದಲ್ಲಿ ಕ್ಷೌರ, ಉಪನಯನ, ವಿವಾಹ, ಕಾಮ್ಯವ್ರತ ಹಾಗೂ ಕಾಮ್ಯೋಪವಾಸಗಳನ್ನು ಗೃಹಸ್ಥನಾದವನು ವಿಶೇಷವಾಗಿ ತೊರೆಯಬೇಕು.
ಅಧಿಕಮಾಸದಲ್ಲಿ ಭಕ್ತಿಯಿಂದ ಶ್ರೀಮದ್ಭಾಗವತವನ್ನು ಶ್ರವಣ ಮಾಡಲೇಬೇಕು; ಅದರ ಪುಣ್ಯವನ್ನು ಬ್ರಹ್ಮದೇವರು ಸಹ ವರ್ಣಿಸಲು ಶಕ್ತರಾಗಲಾರರು.
ಪ್ರಮಾದವಶಾತ್ ಅಧಿಕಮಾಸವನ್ನು ಆಚರಿಸದೇ ಇದ್ದಲ್ಲಿ ಬಡತನ, ಪುತ್ರಶೋಕ ಹಾಗೂ ಪಾಪದ ಕೆಸರಿನಿಂದಾಗಿ ಅಸಹ್ಯವೆನ್ನಿಸುವ ಮನುಷ್ಯಲೋಕದಲ್ಲಿ ಜನ್ಮ ತಪ್ಪದೇ ಒದಗುವುವು.
ಅಧಿಕಮಾಸ ಬಂದಾಗ ಲಕ್ಷ್ಮೀಪತಿಯಾದ ಶ್ರೀಹರಿಯನ್ನು ಶ್ರೇಷ್ಠಭಕ್ತಿಯಿಂಧ ಪೂಜಿಸದವರಿಗೆ ಸುಖ, ಸಂಪತ್ತು, ಪುತ್ರ, ಸ್ನೇಹಿತ, ಬಂಧುಜನರು ಹಾಗೂ ಪತ್ನಿ ಹೇಗೆ ತಾನೇ ಲಭಿಸಿಯಾರು?
ಅಧಿಕಮಾಸದಲ್ಲಿ ಜಪ, ದಾನಗಳನ್ನು ಮಾಡದ, ಸತ್ಕಕರ್ಮ, ಸ್ನಾನಗಳನ್ನು ತೊರೆಯುವ, ದೇವ, ತೀರ್ಥ ಹಾಗೂ ಬ್ರಾಹ್ಮಣದ್ವೇಷಿಗಳಾದ ಮಹಾಮೂರ್ಖರು ದುರ್ಲಕ್ಷಣಗಳನ್ನು ಹೊಂದಿದವರು, ಪರರ ಭಾಗ್ಯವನ್ನು ಅವಲಂಬಿಸಿ ಬದುಕುವವರು ಆದ ದುಷ್ಟರಾಗುವರು; ಅವರಿಗೆ ಸ್ವಪ್ನದಲ್ಲೂ ಸುಖವೂ ಮೊಲದ ಕೊಂಬಿನಂತೆ ಸರ್ವಥಾ ಇಲ್ಲವಾಗುವುದು.
ಶ್ರೀಹರಿಗೆ ವಿಶೇಷವಾಗಿ ಪ್ರಿಯವಾದ ಮಲಮಾಸವನ್ನು ಆಚರಿಸದವರು ಮೂಢರು, ನರಕವಾಸಿಗಳೂ ಆಗುವರು. ಪ್ರತಿ ಮೂರು ವರ್ಷಕ್ಕೊಮ್ಮೆ ಬರುವ ಪುರುಷೋತ್ತಮಮಾಸವನ್ನು ಆಚರಿಸದವರು ಈ ಲೋಕದಲ್ಲಿ ಮಕ್ಕಳು, ಮೊಮ್ಮಕ್ಕಳು ಹಾಗೂ ಪತ್ನೀನಿಮಿತ್ತವಾದ ದುಃಖವನ್ನು ಹೊಂದುವರು. ದುಃಖವೆಂಬ ಕಾಡ್ಗಿಚ್ಚಿನಲ್ಲಿ ಬೇಯುವರು ಹಾಗೂ ಮಹಾಮೂರ್ಖರು ಎನ್ನಿಸುವರು.
ಅಧಿಕಮಾಸ ಬಂದಾಗ ತನ್ನ ಶಕ್ತಿಯಿದ್ದಷ್ಟು ದಾನ, ಹೋಮ, ವ್ರತ, ಸ್ನಾನ, ತಪಸ್ಸು ಬ್ರಾಹ್ಮಣಪೂಜೆಗಳನ್ನು ಯಾವನು ಮಾಡುವುದಿಲ್ಲವೋ ಅವನು ಬಹುಕಾಲ ನರಕದಲ್ಲಿ ನೆಲೆಸುವನು.
ಅಧಿಕಮಾಸವನ್ನು ನಿಂದಿಸಿದರೆ ಅದರ ದುಷ್ಪಲ ಈ ಜನ್ಮದಲ್ಲಿ ಹಾಗೂ ಮುಂದಿನ ಜನ್ಮದಲ್ಲಿ ತಪ್ಪದೇ ಕಾಡುವುದು. ಅಧಿಕಮಾಸವನ್ನು ನಿಂದಿಸುವವನು ಘೋರರೌರವನರಕವನ್ನು ಹೊಂದುವನು. ಅವನಿಗೆ ದುಷ್ಫಲ ಲಭಿಸುವುದು. ಈ ಮಾತು ಎಂದೂ ಸುಳ್ಳಲ್ಲ.
ವೈಧೃತಿ, ವ್ಯತೀಪಾತ (ಎಂಬ ಎರಡು ಯೋಗಗಳು), ಹುಣ್ಣಿಮೆ, ಅಮಾವಾಸ್ಯೆ ಹಾಗೂ ದ್ವಾದಶೀ ಈ ಐದು ಅನುಕ್ರಮವಾಗಿ ಹೆಚ್ಚು ಹೆಚ್ಚು ಮಹತ್ವದ ಅಧಿಕಮಾಸದ ಮಹಾಪರ್ವದಿವಸಗಳು (ಉಭಯಪಕ್ಷದ ದ್ವಾದಶಿಗಳು ಮಹಾವಿಶೇಷಪರ್ವಕಾಲಗಳು ಎಂದರ್ಥ).
ಸರಾಸರಿ ಲೆಕ್ಕದಲ್ಲಿ ಮೂವತ್ತೆರಡು ತಿಂಗಳು, ಹದಿನಾರು ದಿನಗಳು ಹಾಗೂ ನಾಲ್ಕು ಘಳಿಗೆಯೊಮ್ಮೆ ಅಧಿಕಮಾಸವು ಬರುತ್ತದೆ. ಪ್ರತಿ ಐದುವರ್ಷಗಳಲ್ಲಿ ಎರಡು ಅಧಿಕಮಾಸಗಳಾಗುತ್ತವೆ. ಇಂತಹ ಪವಿತ್ರವಾದ ಅಧಿಕಮಾಸದಲ್ಲಿ ಒಂದು ದಿನವಾದರೂ ಉಪವಾಸ ಮಾಡುವವರು ಅನಂತಪಾಪಗಳಿಂದ ಬಿಡುಗಡೆ ಹೊಂದುವನು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post