ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬಸದಿ
ನಾವು ಸಾಮಾನ್ಯವಾಗಿ ಬಸದಿ ಎಂಬ ಪದವನ್ನು ಕೇಳಿದಾಗಲೆಲ್ಲ ವಿಶೇಷ ದಿನಗಳು, ಪೂಜೆ ಪುರಸ್ಕಾರಗಳು, ಉತ್ಸವಗಳು, ಆರಾಧನೆಗಳು ಇತ್ಯಾದಿಗಳ ಬಗ್ಗೆ ಯೋಚಿಸುತ್ತೇವೆ. ಬಸದಿಯ ಇತಿಹಾಸದ ಬಗ್ಗೆ ಬಹಳ ಕಡಿಮೆ ಜನರು ಯೋಚಿಸುತ್ತಾರೆ.
ಎಲ್ಲಾ ಬಸದಿಗಳು ವಿಶೇಷ ವಿಷಯವನ್ನು, ವಿಸ್ಮಯಕಾರಿ ಇತಿಹಾಸಗಳನ್ನು ಹೊಂದಿರುತ್ತದೆ. ಇಂತಹದ್ದೇ ಒಂದು ವಿಸ್ಮಯಕಾರಿ ಇತಿಹಾಸವನ್ನು ಹೊಂದಿರುವ ಬಸದಿಯ ಬಗ್ಗೆ ನಿಮಗೆ ತಿಳಿಸಲು ಬಯಸುತ್ತೇನೆ.
ಪಶ್ಚಿಮಘಟ್ಟದ ಸುಂದರ ವಾತಾವರಣ. ಅನೇಕ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೆ ಸಹ್ಯಾದ್ರಿಯು ನೆಲೆಯಾಗಿತ್ತು. ಪರ್ವತಶ್ರೇಣಿಯ ತಪ್ಪಲಿನಲ್ಲಿ ಒಂದು ಪುಟ್ಟ ಗ್ರಾಮ. ನೆಲ್ಲಿಕಾಯಿಯ ಮರಗಳಿಂದ, ಎತ್ತರವಾಗಿ ಬೆಳೆದಿರುವ ಹುತ್ತಗಳಿಂದ ಕೂಡಿದ್ದ ಈ ಗ್ರಾಮವನ್ನು ನೆಲ್ಲಿಕಾಡು ಎಂದು ಕರೆಯುತ್ತಿದ್ದರು. ಜನ ಸಂಖ್ಯೆಯು ಕಡಿಮೆ ಇದ್ದುದರಿಂದ ಕಾಡು ದಟ್ಟವಾಗಿಯೇ ಬೆಳೆದಿತ್ತು. ಸುಮಾರು 800 ವರ್ಷಗಳ ಹಿಂದೆ, ಕಲ್ಯಾಣಕೀರ್ತಿ ಮುನಿಗಳು ತಮ್ಮ ದೀಕ್ಷೆಯನ್ನು ಪಡೆದು ಕರಿಕಲ್ಲು (ಕಾರ್ಕಳ) ನಗರದಿಂದ ಮೂಡುವೇಣುಪುರ(ಮೂಡಬಿದಿರೆ)ಕ್ಕೆ ವಿಹಾರವನ್ನು ಪ್ರಾರಂಭಿಸಿದ್ದರು. ಸಂಜೆಯ ವೇಳೆ ಈ ಕಾಡು ಪ್ರದೇಶದಲ್ಲಿ ಉಳಿಯಬೇಕಾಯಿತು. ಸಂಧ್ಯಾವಂದನೆಯ ನಂತರ ವಿಶ್ರಾಂತಿಯನ್ನು ಪಡೆದರು.
ಈ ನಡುವೆ ಬೆಳಗಿನ ಜಾವ ಮುನಿಗಳಿಗೆ ಒಂದು ಸ್ವಪ್ನವು ಕಂಡಿತು. ಆ ಕನಸಿನಲ್ಲಿ ಒಬ್ಬ ಯಕ್ಷ ಬಿಳಿ ಕುದುರೆಯ ಮೇಲೆ ಸವಾರಿಯನ್ನು ಮಾಡುತ್ತಾ ಮುನಿಗಳ ಬಳಿ ಇಲ್ಲಿರುವ ಒಂದು ಹುತ್ತದೊಳಗೆ ಒಬ್ಬ ಜಿನೇಶ್ವರ ಮೂರ್ತಿ ಹಾಗೂ ಒಂದು ಬ್ರಹ್ಮ ಸ್ತಂಭವಿರುತ್ತದೆ. ಆ ಹುತ್ತವನ್ನು ಅಗೆದು, ಅದರಲ್ಲಿರುವ ಮೂರ್ತಿ ಹಾಗೂ ಸ್ತಂಭವನ್ನು ತೆಗೆದು ಇಲ್ಲಿ ಪ್ರತಿಷ್ಠಾಪಿಸಬೇಕು ಎಂದು ತಿಳಿಸುತ್ತಾನೆ. ಮುಂಜಾನೆಯ ಮಂಪರಿನಲ್ಲಿ ಎಚ್ಚೆತ್ತುಕೊಂಡ ಮುನಿಗಳು, ಈ ಕನಸಿನ ಬಗ್ಗೆ ಗಾಢವಾಗಿ ಯೋಚಿಸುತ್ತಾರೆ. ಬ್ರಾಹ್ಮೀಮುಹೂರ್ತದಲ್ಲಿ ಕಂಡ ಕನಸು ನಿಜವಾಗಿಯೇ ಇರಬೇಕೆಂದು, ಬೆಳಗಾದ ಕೂಡಲೇ ಸಮೀಪದಲ್ಲಿ ವಾಸಿಸುತ್ತಿರುವ ಜನರನ್ನು ಕರೆಸಿ, ಹುತ್ತವನ್ನು ಅಗೆಯಲಾಯಿತು. ಕನಸಿನಲ್ಲಿ ಬಂದು ತಿಳಿಸಿದ ಯಕ್ಷನ ಮಾತಿನಂತೆಯೇ ಜಿನೇಶ್ವರನ ಮೂರ್ತಿ ಹಾಗೂ ಬ್ರಹ್ಮಸ್ತಂಭವು ದೊರಕಿತು. ಜಿನೇಶ್ವರನ ಮೂರ್ತಿಯೇನೋ ದೊರಕಿತು, ಆದರೆ ಆ ಮೂರ್ತಿ ಯಾವ ತೀರ್ಥಂಕರನದ್ದೆಂದು ಯಾವುದೇ ಸುಳಿವಿರಲಿಲ್ಲ. ನೆರೆದಿದ್ದ ಜನರು ಆಶ್ಚರ್ಯರಾದರೂ. ಈ ರಹಸ್ಯವನ್ನು ತಿಳಿಸಿದ ಯಕ್ಷ ಈ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಏನಾದರೂ ದಾರಿ ತೋರಿಸಬಹುದು ಎಂದು ಮುನಿಗಳು ನಂಬಿದರು. ಮೂರ್ತಿಯ ಪ್ರತಿಷ್ಠಾಪನೆಗೆ ಎಲ್ಲಾ ಸಿದ್ಧತೆಯನ್ನು ಮಾಡಲು ಪ್ರಾರಂಭಿಸಿದರು.
ಹೀಗೊಮ್ಮೆ ಮುನಿವರ್ಯರು ಮೂರ್ತಿಯನ್ನು ವೀಕ್ಷಿಸಲು ಹೋದಾಗ, ಕರಡಿಯೊಂದು ಆ ಮೂರ್ತಿಯ ಸುತ್ತಲೂ ಹೆಜ್ಜೆ ಹಾಕುತ್ತಿತ್ತು. ಈ ದೃಶ್ಯವನ್ನು ಕಂಡ ಮುನಿಗಳು, ಮೂರ್ತಿಯು ಕರಡಿ ವಾಹನವುಳ್ಳ ತೀರ್ಥಂಕರನದ್ದೇ ಆಗಿರಬೇಕೆಂದು ತಿಳಿದರು. ನಂತರ ಈ ಪ್ರತಿಷ್ಠಾಪನಾ ಕಾರ್ಯಕ್ರಮವು ನಿರ್ವಿಘ್ನವಾಗಿ ನಡೆಯಿತು. ಅಂದಿನಿಂದ ಅನಂತನಾಥ ಸ್ವಾಮಿಯು ಪೂರ್ವಾಭಿಮುಖ, ಹಾಗೂ ಬ್ರಹ್ಮಯಕ್ಷನನ್ನು ಬ್ರಹ್ಮ ಸ್ತಂಭದ ಮೇಲೆ ಉತ್ತರಾಭಿಮುಖವಾಗಿ ಸ್ಥಾಪಿಸಲಾಯಿತು.
ವರ್ಷಗಳು ಉರುಳಿದವು ಮತ್ತು ಜನರ ವಾಸ್ತವ್ಯ ಈ ಗ್ರಾಮದಲ್ಲಿ ಹೆಚ್ಚಿತು. ವಿವಿಧ ಧರ್ಮ ಮತ್ತು ಜಾತಿಗೆ ಸೇರಿದ ಜನರು ವಾಸಿಸುತ್ತಿದ್ದರು. ಬ್ರಹ್ಮಯಕ್ಷನ ದರ್ಶನ ಪಡೆಯಲು ಜನರು ಕಾತುರರಾಗಿದ್ದರು. ಬ್ರಹ್ಮಯಕ್ಷನು ಗರ್ಭಗುಡಿಯಲ್ಲಿ ಉತ್ತರಾಭಿಮುಖವಾಗಿ ಇದ್ದುದರಿಂದ ಶ್ರಾವಕ ಶ್ರಾವಕಿಯರಿಗಲ್ಲದೆ ಅನ್ಯ ಜಾತಿಯ ಜನರಿಗೆ ದರ್ಶನ ಪಡೆಯಲು ಅಸಾಧ್ಯವಾಗಿತ್ತು. ತಮ್ಮ ಆಸೆಯನ್ನು ಬಸದಿಯ ಮುಖಂಡರಿಗೆ ತಿಳಿಸಿದರು. ಹೀಗಾಗಿ ದೇವಾದಿದೇವತೆಗಳ ಆಶೀರ್ವಾದ ಹಾಗೂ ಶ್ರೀ ಬ್ರಹ್ಮಯಕ್ಷನ ಅನುಮತಿಯಿಂದ ಪುರೋಹಿತ ವರ್ಗ ಹಾಗೂ ಶ್ರಾವಕ ಶ್ರಾವಕಿಯರು ಒಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.
ಚೈತ್ರಮಾಸದ ಯುಗಾದಿಯಂದು ಬ್ರಹ್ಮಯಕ್ಷನನ್ನು ಬ್ರಹ್ಮ ಗುಂಡದಿಂದ ಇಳಿಸಿ ಪೂರ್ವಾಭಿಮುಖವಾಗಿ ಇಡುವುದು ಹಾಗೂ ಜೇಷ್ಠ ಮಾಸದ ಅಮಾವಾಸ್ಯೆಯಂದು ಪುನಃ ಬ್ರಹ್ಮಯಕ್ಷನನ್ನು ಬ್ರಹ್ಮ ಸ್ತಂಭದಲ್ಲಿ ಇಡಲಾಗುವುದು. ಈ ತೀರ್ಮಾನವು ಎಲ್ಲಾ ಜನರಿಗೆ ಬ್ರಹ್ಮಯಕ್ಷನ ದರ್ಶನವನ್ನು ಪಡೆಯುವಂತಾಯಿತು. ವರ್ಷ ಕಳೆದಂತೆಯೇ ಯುಗಾದಿಯ ದಿನದಂದು ಬ್ರಹ್ಮಯಕ್ಷನನ್ನು ಪೂರ್ವಾಭಿಮುಖವಾಗಿ ಕೆಳಗಿಡುವುದಲ್ಲದೆ, ಧ್ವಜಾರೋಹಣ ಮಾಡಿ ಮುಂಬರುವ 6ನೇ ದಿನದಂದು ಶ್ರೀ ಅನಂತನಾಥ ಸ್ವಾಮಿ, ಸರ್ವಾಹ್ನಯಕ್ಷ, ಕ್ಷೇತ್ರಪಾಲ ಪಾತ್ರಿ, ಬ್ರಹ್ಮಯಕ್ಷ ಪಾತ್ರಿಯೊಂದಿಗೆ ರಥಾರೋಹಣವಾಗಿ ವಿಜ್ರಂಭಣೆಯಿಂದ ರಥೋತ್ಸವವನ್ನು ಮಾಡಲೂ ಪ್ರಾರಂಭಿಸಿತು. ನೆಲ್ಲಿಕಾಡು ಎಂಬ ಗ್ರಾಮದ ಜನರು ಶ್ರೀಬ್ರಹ್ಮಯಕ್ಷನ ಹಲವು ಮಹಿಮೆಗಳನ್ನು ಕಂಡುಕೊಂಡಿದ್ದಾರೆ.
ಆ ಕಾರಣ ನೆಲ್ಲಿಕಾಡು ಇಂದು ಅತಿಶಯ ಶ್ರೀಕ್ಷೇತ್ರ ನೆಲ್ಲಿಕಾರು ಎಂದು ಪರಿವರ್ತನೆಯಾಗಿದೆ. ತನ್ನ ಸನ್ನಿಧಿಗೆ ಬರುವ ಭಕ್ತರನ್ನು ಕಾಪಾಡುವ ಬ್ರಹ್ಮಯಕ್ಷ ತುಂಬಾ ಜನಪ್ರಿಯನಾಗಿದ್ದಾನೆ.
ಹೀಗೆ ಹಲವಾರು ವಿಷಯಗಳು ನಮ್ಮ-ನಿಮ್ಮೆಲ್ಲರ ನಡುವೆ ಇದ್ದಿರಬಹುದು. ನಮಗೆ ಆ ವಿಷಯಗಳು ತಿಳಿದಿದ್ದರೂ ಇನ್ನೊಬ್ಬರಿಗೆ ತಿಳಿಸುವಲ್ಲಿ ವಿಫಲರಾಗುತ್ತೇವೆ. ನಮ್ಮ ಜೈನ ತೀರ್ಥಕ್ಷೇತ್ರಗಳ ಇತಿಹಾಸಗಳನ್ನು ನಾವೂ ತಿಳಿದು ಇನ್ನೊಬ್ಬರಿಗೂ ತಿಳಿಸೋಣ.
ಜೈ ಜಿನೇಂದ್ರ
Get In Touch With Us info@kalpa.news Whatsapp: 9481252093
Discussion about this post