ಭದ್ರಾವತಿ: ಹೌದು… ಭದ್ರಾವತಿಯ ಜೀವನಾಡಿ ಭದ್ರಾ ನದಿ ತುಂಬಿ ಹರಿಯುತ್ತಿರುವ ಬೆನ್ನಲ್ಲೇ, ಈಗ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ದಾಖಲೆ ಪ್ರಮಾಣದಲ್ಲಿ ನೀರನ್ನು ಹರಿಸಲಾಗಿದೆ.
ಇಂದು ಮಧ್ಯಾಹ್ನದ ವೇಳೆ ಭದ್ರಾ ಜಲಾಶಯದಿಂದ 80 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗಿದ್ದು, ಇದೊಂದು ಐತಿಹಾಸಿಕ ಕ್ಷಣವಾಗಿ ಪರಿಣಮಿಸಿದೆ.
ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಪರಿಣಾಮ ಬಿಆರ್ಪಿ ಅಣೆಕಟ್ಟೆ ತುಂಬಿದೆ. ಹೀಗಾಗಿ, ಸತತವಾಗಿ ನೀರು ಹರಿಸಲಾಗುತ್ತಿದೆ. ಆದರೆ, ಎರಡು ದಿನಗಳಿಂದ ನೀರಿನ ಒಳಹರಿವು ಭಾರೀ ಪ್ರಮಾಣದಲ್ಲಿರುವ ಹಿನ್ನೆಲೆಯಲ್ಲಿ ಹೊರ ಹರಿವೂ ಹೆಚ್ಚಿಸಲಾಗಿದೆ.
ನಿನ್ನೆಯಿಂದಲೇ ಭದ್ರಾವತಿಯ ಹೊಸ ಸೇತುವ ಬಹುತೇಕ ಮುಳುಗಡೆಯಾಗಿದ್ದು, ಇಂದು ಮಧ್ಯಾಹ್ನದ ವೇಳೆಗೆ ಸೇತುವೆ ಪೂರ್ಣ ಮುಳುಗಿತ್ತು. ಆದರೆ, ಮಧ್ಯಾಹ್ನದ ನಂತರ 80 ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಿರುವ ಪರಿಣಾಮ ನೀರು ಜನವಸತಿ ಪ್ರದೇಶಗಳಿಗೆ ನುಗ್ಗುವ ಆತಂಕ ಎದುರಾಗಿದ್ದು, ಇದರೊಂದಿಗೆ ಸರ್ಕಾರಿ ಬಸ್ ನಿಲ್ದಾಣಕ್ಕೂ ಸಹ ನೀರು ನುಗ್ಗುವ ಆತಂಕವಿದೆ ಎನ್ನಲಾಗಿದೆ.

















