ವಾರಣಾಸಿ: ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ವಿಚಾರಗಳಿಗೆ ಬಳಸಬೇಕೇ ವಿನಾ, ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ವಿವಾದಕ್ಕೆ ಕಾರಣ ಮಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ವಾರಣಾಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಜನತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿ, ವಿವಾದ ಎಬ್ಬಿಸುವುದು ಸಭ್ಯ ಸಮಾಜಕ್ಕೆ ಶೋಭೆಯಲ್ಲ. ಈ ವಿಷಯ ಯಾವುದೇ ಸಿದ್ಧಾಂತಕ್ಕೆ ಸಂಬಂಧಿಸಿದ್ದಲ್ಲ ಬದಲಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಸಾಧ್ಯವಾದಷ್ಟೂ ಒಳ್ಳೆಯ ಸಂಗತಿಗಳತ್ತ ಗಮನ ಹರಿಸುವುದಕ್ಕೆ ತಮ್ಮನ್ನು ತಾವು ತರಬೇತುಗೊಳಿಸಿಕೊಳ್ಳಬೇಕು ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಯಾವುದೋ ಒಂದು ಸಂಗತಿಯನ್ನು ನೋಡುತ್ತಿದ್ದಂತೆಯೇ, ಕೇಳುತ್ತಿದ್ದಂತೆಯೇ ಜನತೆ ಅದನ್ನು ಫಾರ್ವರ್ಡ್ ಮಾಡುತ್ತಾರೆ. ಆದರೆ ಅದರಿಂದ ಸಮಾಜಕ್ಕೆ ಯಾವ ರೀತಿಯ ಹಾನಿ ಉಂಟಾಗುತ್ತದೆ ಎಂಬುದನ್ನು ಯೋಚಿಸುವುದಿಲ್ಲ ಎಂದು ಕಿಡಿ ಕಾರಿದ್ದಾರೆ.
ಇನ್ನು ಮುಂದುವರೆದು ಮಾತನಾಡಿರುವ, ಕೆಲವರಂತೂ ಸಭ್ಯ ಸಮಾಜದ ವರ್ತನೆಗೆ ಧಕ್ಕೆ ಉಂಟಾಗಬಲ್ಲ ರೀತಿಯಲ್ಲಿ ಪದಗಳನ್ನು ಬಳಕೆ ಮಾಡುತ್ತಾರೆ, ಮಹಿಳೆಯರ ಬಗ್ಗೆ ಏನನ್ನಾದರೂ ಹೇಳುತ್ತಾರೆ ಅಥವಾ ಬರೆಯುತ್ತಾರೆ ಎಂದು ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Discussion about this post